ಚಿತ್ರಗಳು; ಬೆಂಗಳೂರಲ್ಲಿ ಲಾಕ್ ಡೌನ್, ನಗರ ಬಿಟ್ಟು ಹೊರಟ ಜನ
ಬೆಂಗಳೂರು, ಜುಲೈ 13 : ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಮಂಗಳವಾರದಿಂದ ಲಾಕ್ ಡೌನ್ ಜಾರಿಗೆ ಬರಲಿದೆ. ಜನರು ನಗರವನ್ನು ಬಿಟ್ಟು ಊರುಗಳತ್ತ ಮುಖ ಮಾಡಿದ್ದಾರೆ. ಟೋಲ್ ಗೇಟ್ಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ.
ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಬೆಂಗಳೂರು ನಗರದಲ್ಲಿ ಹೆಚ್ಚಾಗುತ್ತಿದೆ. ಭಾನುವಾರ ನಗರದಲ್ಲಿ 1525 ಪ್ರಕರಣಗಳು ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 18,387ಕ್ಕೆ ಏರಿಕೆಯಾಗಿದೆ. ನಗರದ ಜನರು ಆಂತಕಗೊಂಡಿದ್ದಾರೆ.
ಬೆಂಗಳೂರು ಜೊತೆ ಮತ್ತೊಂದಿಷ್ಟು ಜಿಲ್ಲೆಗಳು ಲಾಕ್ ಡೌನ್: ವಿವರ ಇಲ್ಲಿದೆ
ಕರ್ನಾಟಕ ಸರ್ಕಾರ ಬೆಂಗಳೂರು ನಗರದಲ್ಲಿ ಜುಲೈ 14ರ ಮಂಗಳವಾರ ರಾತ್ರಿ 8 ಗಂಟೆಯಿಂದ ಜುಲೈ 23ರ ತನಕ ಒಂದು ವಾರದ ಲಾಕ್ ಡೌನ್ ಮಾಡುವುದಾಗಿ ಘೋಷಣೆ ಮಾಡಿದೆ. ಕೊರೊನಾ ವೈರಸ್ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಲಾಕ್ ಡೌನ್ ಮಾಡಲಾಗುತ್ತಿದೆ.
ಟಾಮ್ ಟಾಮ್ ಸುದ್ದಿ: ಬೆಂಗಳೂರು ಬಿಟ್ಟು ಹೊರಟವರಿಗೆ 800 ಬಸ್!
ಮತ್ತೆ ಬೆಂಗಳೂರಲ್ಲಿ ಲಾಕ್ ಡೌನ್ ಆಗುತ್ತದೆ ಎಂದು ಜನರು ಊರುಗಳತ್ತ ಮುಖ ಮಾಡಿದ್ದಾರೆ. ಮನೆಯನ್ನು ಖಾಲಿ ಮಾಡಿಕೊಂಡು ಲಾರಿ, ಆಟೋಗಳನ್ನು ಸಾಮಾನುಗಳನ್ನು ತುಂಬಿಕೊಂಡು ವಾಪಸ್ ಊರಿಗೆ ಹೋಗುತ್ತಿದ್ದಾರೆ. ಇದರಿಂದಾಗಿ ಟೋಲ್ ಗೇಟ್ಗಳಲ್ಲಿ ಸಂಚಾರ ದಟ್ಟಣೆಯೂ ಕಂಡು ಬಂದಿತು.
ಬೆಂಗಳೂರು ಲಾಕ್ಡೌನ್: ಸರ್ಕಾರದ ಮುಂದೆ ಮತ್ತೊಂದು ಬೇಡಿಕೆಯಿಟ್ಟ ದೇವೇಗೌಡ
ನಗರ ತೊರೆಯುತ್ತಿರುವ ಜನರು
ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಒಂದು ವಾರ ಲಾಕ್ ಡೌನ್ ಮಾಡಲಾಗುತ್ತದೆ ಎಂದು ಘೋಷಣೆ ಮಾಡಲಾಗಿದೆ. ಆದರೆ, ಅದು ವಿಸ್ತರಣೆಯಾಗಬಹುದು. ಆಗ ಕೆಲಸ ಇಲ್ಲದೇ ಮತ್ತೆ ಪರದಾಡಬೇಕಾಗುತ್ತದೆ ಎಂದು ಜನರು ಬೆಂಗಳೂರು ಬಿಟ್ಟು ವಲಸೆ ಹೋಗುತ್ತಿದ್ದಾರೆ.
ಸಮಯ ಸಿಕ್ಕಿದ್ದೇ ಇಂದು
ಕರ್ನಾಟಕ ಸರ್ಕಾರ ಜುಲೈ 14ರ ಮಂಗಳವಾರ ರಾತ್ರಿ 8 ಗಂಟೆಯಿಂದ ಜುಲೈ 23ರ ತನಕ ಒಂದು ವಾರದ ಲಾಕ್ ಡೌನ್ ಮಾಡುವುದಾಗಿ ಘೋಷಣೆ ಮಾಡಿತ್ತು. ಭಾನುವಾರ ಲಾಕ್ ಡೌನ್ ಇದ್ದ ಕಾರಣ ಜನರಿಗೆ ಊರಿಗೆ ಹೋಗಲು ಸಮಯ ಸಿಕ್ಕಿರಲಿಲ್ಲ. ಇಂದು ಜನರು ಊರಿನತ್ತ ಮುಖ ಮಾಡಿದ್ದಾರೆ.
ಹೆಚ್ಚುವರಿ ಬಸ್ಗಳ ವ್ಯವಸ್ಥೆ
ಬೆಂಗಳೂರು ನಗರದಲ್ಲಿ ಲಾಕ್ ಡೌನ್ ಜಾರಿಗೆ ಬರುತ್ತಿದೆ. ಆದ್ದರಿಂದ, ಬೆಂಗಳೂರಿನಿಂದ ಇತರ ಕಡೆಗಳಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ಸೋಮವಾರ ಮತ್ತು ಮಂಗಳವಾರ ಪ್ರತಿದಿನ 800 ಹೆಚ್ಚುವರಿ ಬಸ್ಸುಗಳನ್ನು ಬೆಂಗಳೂರು ನಗರದಿಂದ ಓಡಿಸುತ್ತಿದೆ.
ಲಾಕ್ ಡೌನ್ ವಿಸ್ತರಣೆ ಇಲ್ಲ
ಸೋಮವಾರ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕೋವಿಡ್ ಟಾಸ್ಕ್ ಫೋರ್ಸ್ ಸಭೆ ನಡೆಸಿದರು. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ವಿಧಿಸಲಾಗಿರುವ 1 ವಾರದ ಲಾಕ್ ಡೌನ್ ಅನ್ನು ವಿಸ್ತರಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಜನರು ಆತಂಕಪಡದೆ, ವದಂತಿಗಳಿಗೆ ಕಿವಿಗೊಡದೆ, ಸರ್ಕಾರದೊಂದಿಗೆ ಸಹಕರಿಸಬೇಕೆಂದು ಮುಖ್ಯಮಂತ್ರಿಗಳು ಮನವಿ ಮಾಡಿದ್ದಾರೆ.