ಒನ್ಇಂಡಿಯಾ ರಿಯಾಲಿಟಿ ಚೆಕ್: ಕೇಳುವರಿಲ್ಲ ಕಾರ್ಮಿಕರ ಗೋಳು
ಬೆಂಗಳೂರು, ಏಪ್ರಿಲ್ 15: ಕೊರೊನಾ ಮಹಾಮಾರಿಯಿಂದ ಇಡೀ ಜಗತ್ತೆ ತತ್ತರಿಸಿದೆ. ಕಳೆದ 21 ದಿನ ಲಾಕ್ಡೌನ್ ಸಂಕಷ್ಟಕ್ಕೆ ತುತ್ತಾದವರ ಗೋಳು ಇನ್ನೂ ಮುಗಿಯದಾಗಿದೆ.
ಈಗ ಮತ್ತೆ ಲಾಕ್ಡೌನ್ ಮುಂದುವರೆದಿರುವುದರಿಂದ ಬಡವರು, ಕಾರ್ಮಿಕರು, ನಿರ್ಗತಿಕರು ಅಕ್ಷರಶಃ ತತ್ತರಿಸಿದ್ದಾರೆ. ಆಹಾರ, ಅಗತ್ಯ ವಸ್ತುಗಳು ಇಲ್ಲದೇ ದಿನದಿಂದ ದಿನ ಪರಿತಪಿಸುತ್ತಿದ್ದಾರೆ.
ಲಾಕ್ಡೌನ್ ಸಂಕಷ್ಟಕ್ಕೆ ತುತ್ತಾಗಿರುವವರ ಬಗ್ಗೆ ಒನ್ ಇಂಡಿಯಾ ಕನ್ನಡ ರಿಯಾಲಿಟಿ ಚೆಕ್ ನಡೆಸುತ್ತಿದೆ. ರಿಯಾಲಿಟಿ ಚೆಕ್ನಲ್ಲಿ ದಿನಗೂಲಿ ಕಾರ್ಮಿಕರ ಅನುಭವಿಸುತ್ತಿರುವ ಪರಿಸ್ಥಿತಿಯನ್ನು ತೆರದಿಡಲಾಗುತ್ತಿದೆ. ಇದನ್ನು ನೋಡಿದ್ದ ದಾನಿಗಳು ನೆರವು ನೀಡಿದ್ದರು. ಇದೀಗ ಲಾಕ್ಡೌನ್ ಮತ್ತೆ ಮುಂದು ಹೋಗಿದ್ದರಿಂದ ದಿನಗೂಲಿ ಕಾರ್ಮಿಕರ ಬಗ್ಗೆ ಒನ್ ಇಂಡಿಯಾ ಮತ್ತೆ ರಿಯಾಲಿಟಿ ಚೆಕ್ ನಡೆಸಿದೆ.
ಕೇಳೋರಿಲ್ಲ ಗೋಳು
ನಮ್ಮ ಪ್ರತಿನಿಧಿ ಬೆಂಗಳೂರಿನ ಬಿಬಿಎಂಪಿ ವಾರ್ಡ್ ನಂಬರ್ 6ರ ಮಂಜುನಾಥ್ ನಗರದ ಕೆಲ ದಿನಗೂಲಿ ಕಾರ್ಮಿಕರ ಸುಮಾರು 60 ಮನೆಗಳಲ್ಲಿ ರಿಯಾಲಿಟಿ ಚೆಕ್ ನಡೆಸಿದರು. ಈ ವೇಳೆ ಈ ಜನ ಲಾಕ್ಡೌನ್ ನಿಂದ ಆಹಾರ, ಅಗತ್ಯ ವಸ್ತುಗಳು ಸಿಗದೇ ತೀವ್ರ ತೊಂದರೆ ಅನುಭವಿಸುತ್ತಿರುವುದು ಬೆಳಕಿಗೆ ಬಂತು.
ಆರವತ್ತು ಮನೆಗಳ ಆಕ್ರಂದನ
ರಿಯಾಲಿಟಿ ಚೆಕ್ ನಲ್ಲಿ, ಆರವತ್ತು ಮನೆಗಳ ಸದಸ್ಯರೂ ಲಾಕ್ಡೌನ್ ಪರಿಣಾಮ ತಮ್ಮ ಮೇಲೆ ಯಾವ ರೀತಿ ಎಂಬುದನ್ನು ವಿವರಿಸಿದರು. ''ಕೆಲಸ ಇಲ್ಲ, ಆಹಾರ, ದಿನಸಿ ಇಲ್ಲ. ಲಾಕ್ಡೌನ್ ಇದೆ ಒಳಗೆ ಇರೀ ಎಂದು ಪೊಲೀಸ್ ಹೇಳುತ್ತಾರೆ. ಅದರೆ, ಆಹಾರ ತಲುಪಿಸುತ್ತೇವೆ ಎಂದು ದೂರವಾಣಿ ಸಂಖ್ಯೆ ತೆಗೆದುಕೊಂಡು ಹೋದವರು ಇದುವರೆಗೆ ವಾಪಸ್ ಬಂದಿಲ್ಲ'' ಎಂದು ಹಲವರು ಆರೋಪಿಸಿದರು.
ಜನಪ್ರತಿನಿಧಿಗಳು ಬಂದಿಲ್ಲ
ಇಲ್ಲಿ ಇರುವ ಕುಟುಂಬಗಳು ಅವತ್ತು ದುಡಿದು ಅವತ್ತು ಊಟ ಮಾಡುವಂತ ಪರಿಸ್ಥಿತಿಯಲ್ಲಿರುವಂತವರಾಗಿದ್ದಾರೆ. ''ಆಹಾರ, ಅಗತ್ಯ ವಸ್ತುಗಳನ್ನು ತಲುಪಿಸಲು, ನಮ್ಮ ಸಮಸ್ಯೆಗಳನ್ನು ಕೇಳಲು ಇದುವರೆಗೆ ಯಾವುದೇ ಜನಪ್ರತಿನಿಧಿಗಳು ನಮ್ಮ ಬಳಿ ಬಂದಿಲ್ಲ'' ಎಂದು ದೂರಿದರು.
ವಿಧವೆಯೊಬ್ಬರ ಗೋಳು
ರಿಯಾಲಿಟಿ ಚೆಕ್ನಲ್ಲಿ ವಿಧವೆಯೊಬ್ಬರು ತಮ್ಮ ಅಭಿಪ್ರಾಯ ತಿಳಿಸಿ, ಮನೆಯಲ್ಲಿ ದಿನಸಿ, ಗ್ಯಾಸ್ ಖಾಲಿ ಆಗಿದೆ. ಈ ಬಗ್ಗೆ ಯಾರೂ ಸಹಾಯ ಮಾಡಲು ಬರುತ್ತಿಲ್ಲ. ಎಲ್ಲೊ ಯಾರೋ ಕೊಡುತ್ತಿದ್ದ ಆಹಾರವನ್ನು ದೂರ ಹೋಗಿ ತೆಗೆದುಕೊಂಡು ತಿಂದಿದ್ದೇನೆ ಎಂದರು.
ಅಂಗವಿಕಲರೊಬ್ಬರ ಅಳಲು
ಅಂಗವಿಕಲರೊಬ್ಬರು ತಮ್ಮ ಅಭಿಪ್ರಾಯ ತಿಳಿಸಿ, ಲಾಕ್ಡೌನ್ ನಿಂದ ಇಂದು ಸಾಯುವ ಪರಿಸ್ಥಿತಿಗೆ ಬಂದಿದ್ದೇನೆ. ಯಾರಾದರೂ ಬಂದು ಸಹಾಯ ಮಾಡಬೇಕು. ಇಲ್ಲದಿದ್ದರೇ ಸಾವೇ ಗತಿ ಎಂದು ಕಣ್ಣೀರಿಟ್ಟರು. ಲಾಕ್ಡೌನ್ ನಿಂದ ತೀವ್ರ ತೊಂದರೆ ಅನುಭವಿಸುತ್ತಿರುವ ಇವರಿಗೆ ಸರ್ಕಾರ, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ನೆರವಿಗೆ ದಾವಿಸಬೇಕಿದೆ.