ಕೊರೊನಾ ಲಾಕ್ಡೌನ್ ಹೊಡೆತಕ್ಕೆ ಬೆಂಗಳೂರಿನಲ್ಲಿ ಕೌಟುಂಬಿಕ ಕಲಹಗಳು ಜಾಸ್ತಿ
ಬೆಂಗಳೂರು, ಜು. 01: ಹೇಳಿದ ಅಡುಗೆ ಬೇಗ ಮಾಡಿಕೊಡಲಿಲ್ಲ ಎಂದು ಹೆಂಡ್ತಿ ಮೇಲೆ ಹಲ್ಲೆ. ಲಾಕ್ ಡೌನ್ ಸಮಯದಲ್ಲಿ ಮಗನನ್ನು ಮನೆಗೆ ಕಳಿಸುವಂತೆ ಪತ್ನಿ ಮೇಲೆ ಗರಂ. ಪತ್ನಿಯ ಶೀಲ ಶಂಕಿಸಿ ಕುಡಿದ ಅಮಲಿನಲ್ಲಿ ಹಲ್ಲೆ. ಹೀಗೆ ಒಂದೆರಡಲ್ಲ ಸಮಸ್ಯೆ. ದಿನಕ್ಕೆ 20 ಕ್ಕೂ ಹೆಚ್ಚು ಹೆಣ್ಣು ಮಕ್ಕಳು ಗಂಡಂದಿರ ಕಿರುಕುಳ ತಾಳಲಾರದೇ ವನಿತಾ ಸಹಾಯವಾಣಿ ಮೊರೆ ಹೋಗುತ್ತಿದ್ದಾರೆ.
ಹೌದು, ಕೋವಿಡ್ 19 ನಿಂದ ಜನರು ಆರ್ಥಿಕ ಸಂಕಷ್ಟಕ್ಕೆ ಮಾತ್ರ ಒಳಗಾಗಿಲ್ಲ, ಕೌಟುಂಬಿಕ ಕಲಹಗಳು ಜಾಸ್ತಿಯಾಗುತ್ತಿವೆ. ಕಳೆದ ಎರಡು ತಿಂಗಳಲ್ಲಿ ಗಂಡಂದಿರ ಕಿರುಕುಳ ತಾಳಲಾರದೇ 200 ಕ್ಕೂ ಹೆಚ್ಚು ಮಹಿಳೆಯರು ರಕ್ಷಣೆ ಕೋರಿ ವನಿತಾ ಸಹಾಯವಾಣಿ ಮೊರೆ ಹೋಗಿದ್ದಾರೆ.
ನಿರುದ್ಯೋಗ, ಬಡತನ, ರೋಗದ ಭಯ ಮತ್ತು ಲಾಕ್ಡೌನು ಎನ್ನುವ ಮದ್ದು...
ಕೊರೊನಾ ಕಾಲದಲ್ಲಿ ಕೆಲಸ ಕಳೆದುಕೊಂಡಿರುವ ಬಹುತೇಕರು ಒತ್ತಡಕ್ಕೆ ಸಿಲುಕಿದ್ದಾರೆ. ಇದರ ನಡುವೆ ಗಂಡ- ಹೆಂಡತಿಯರ ನಡುವೆ ಜಗಳ ಜಾಸ್ತಿಯಾಗುತ್ತಿವೆ. ವಿಚ್ಛೇದನ ಪಡೆದು ದೂರ ಆಗಿರುವರು ಕೂಡ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡು ಶಾಂತಿ ಭಂಗ ಮಾಡಿಕೊಳ್ಳುತ್ತಿದ್ದಾರೆ. ಕೌಟುಂಬಿಕ ಕಲಹಕ್ಕೆ ಒಳಗಾಗುತ್ತಿರುವ ಮಹಿಳೆಯರಿಗೆ ಸಾಂತ್ವನ ಹೇಳಿ ಕೌನ್ಸಲಿಂಗ್ ಮಾಡುವಲ್ಲಿ ನಿರತವಾಗಿರುವ ವನಿತಾಸಹಾಯವಾಣಿ ಸಿಬ್ಬಂದಿ ರಜೆ ದಿನಗಳಲ್ಲೂ ಕೆಲಸ ಮಾಡುವಂತಾಗಿದೆ.
ಎರಡು ದಿನ ಹೋಟೆಲ್ ನಲ್ಲಿ ಅವತಿದ್ದ ಪತ್ನಿ
ಹೇಳಿದ ಅಡುಗೆ ಮಾಡಲಿಲ್ಲ ಎಂಬ ಕಾರಣಕ್ಕೆ ಪತಿ ಹೆಂಡತಿಯನ್ನು ಥಳಿಸಿದ್ದಾರೆ. ಗಂಡನ ಭಯದಿಂಧ ಮನೆ ಬಿಟ್ಟು ಹೋಟೆಲ್ ಗೆ ಹೋಗಿ ಎರಡು ದಿನ ಕಾಲ ಕಳೆದಿದ್ದಾರೆ.
ತನ್ನ ಮಗು ಸಮೇತ ಹೋಟೆಲ್ ಗೆ ಹೋಗಿ ಎರಡು ದಿನ ಕಳೆದ ಬಳಿಕ ಸ್ಥಳೀಯರ ಸಲಹೆ ಮೇರೆಗೆ ವನಿತಾ ಸಹಾಯವಾಣಿ ಮೊರೆ ಹೋಗಿ ದೂರು ನೀಡಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಪತಿ ಹಾಗೂ ಪತ್ನಿ ಇಬ್ಬರನ್ನೂ ಕರೆಸಿ ಸಂಧಾನ ಮಾಡಿ ಕಳಿಸಿದ್ದಾರೆ.
ಶೀಲ ಶಂಕಿಸಿ ಪತ್ನಿಯ ಹತ್ಯೆಗೆ ಯತ್ನ
ಮತ್ತೊಬ್ಬ ಕುಡುಕ ಗಂಡ ಪತ್ನಿಯ ಶೀಲ ಶಂಕಿಸಿ ಹತ್ಯೆ ಮಾಡಲು ಯತ್ನಿಸಿದ್ದಾನೆ. ಕುಟುಂಸ್ಥರ ಮಾತು ಕೇಳಿಕೊಂಡು ಸಿಲಿಂಡರ್ ಗ್ಯಾಸ್ ಓಪನ್ ಮಾಡಿ ಪತ್ನಿಯ ಮೇಲೆ ದರ್ಪ ತೋರಿದ್ದಾರೆ. ಗಂಡನ ಹಿಂಸೆ ತಾಳಲಾರದೇ ಪತ್ನಿ ವನಿತಾ ಸಹಾಯವಾಣಿ ಮೊರೆ ಹೋಗಿ ನ್ಯಾಯ ಕೋರಿದ್ದಾರೆ. ಕುಡಿತದ ಅಮಲಿಗೆ ಒಳಗಾಗಿದ್ದ ವ್ಯಕ್ತಿಯ ಸಾಲ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆತನ ಇಬ್ಬರು ಒಂದೊತ್ತು ಊಟಕ್ಕೂ ಪರದಾಡುತ್ತಿದ್ದರು. ಇಬ್ಬರು ಮಕ್ಕಳ ಬಗ್ಗೆ ಸಾರ್ವಜನಿಕರು ವನಿತಾ ಸಹಾಯವಾಣಿಗೆ ದೂರು ನೀಡಿದ್ದರು. ಇಬ್ಬರು ಮಕ್ಕಳನ್ನು ಹಾಸ್ಟೆಲ್ ಗೆ ಸೇರಿಸಿ ವನಿತಾ ಸಹಾಯವಾಣಿ ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ.
ಆತ್ಮಶಕ್ತಿಯೇ ಕೊರೊನಾ ನಿವಾರಣೆಗೆ ಅರ್ಧ ಮದ್ದು: ಮನೋ ವೈದ್ಯ ಡಾ. ಶ್ರೀಧರ್ ಸಲಹೆ
ಡೈವೋರ್ಸ್ ಪಡೆದ್ರೂ ಮಗುಗಾಗಿ ಕಿರಿಕ್
ಪರಸ್ಪರ ಸಮ್ಮತಿ ಮೇರೆಗೆ ವಿಚ್ಛೇದನ ಪಡೆದಿದ್ದ ದಂಪತಿ ಮತ್ತೆ ಮಗುವಿಗಾಗಿ ಜಗಳ ಮಾಡಿಕೊಂಡಿದ್ದಾರೆ. ವಿಚ್ಚೇದನ ಬಳಿಕ ಮಗು ತಂದೆಯ ಮನೆಯಲ್ಲಿತ್ತು. ಲಾಕ್ ಡೌನ್ ಸಮಯದಲ್ಲಿ ಮಗುವನ್ನು ತನ್ನ ಮನೆಗೆ ಕಳುಹಿಸುವಂತೆ ಜಗಳ ಮಾಡಿಕೊಂಡು ಇದೀಗ ಕೌನ್ಸಲಿಂಗ್ ಮೊರೆ ಹೋಗಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಕೌಟುಂಬಿಕ ಕಲಹಗಳು ಜಾಸ್ತಿಯಾಗುತ್ತಿವೆ.
ಹಿಂಸೆಗೆ ಒಳಗಾಗಿ ಹೆಣ್ಣು ಮಕ್ಕಳು ವನಿತಾ ಸಹಾಯವಾಣಿಗೆ ಬರುತ್ತಿದ್ದಾರೆ. ಪ್ರತಿ ನಿತ್ಯ 20 ಕ್ಕೂ ಹೆಚ್ಚು ಕರೆಗಳು ಬರುತ್ತಿವೆ. ಅದರಲ್ಲಿ ನ್ಯಾಯ ಕೇಳಿಕೊಂಡು ಹಲವರು ಬರುತ್ತಿದ್ದಾರೆ. ರಜೆ ದಿನಗಳಲ್ಲೂ ಸಹ ವನಿತಾ ಸಹಾಯವಾಣಿ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ ಎಂದು ಅಲ್ಲಿ ಕೆಲಸ ಮಾಡುವ ಸಿಬ್ಬಂದಿ ತಿಳಿಸಿದ್ದಾರೆ.
Recommended Video
ಪರಿಹಾರವೇನು ?
ಕೌಟುಂಬಿಕ ಕಲಹಕ್ಕೆ ಮೂಲ ಕಾರಣ ಮನೆಯಿಂದ ಹೊರಗೆ ಹೋಗದೇ ಇರುವುದು. ಮನೆಯಲ್ಲಿಯೇ ಇದ್ದು ಎಲ್ಲಾ ಕೆಲಸ ನೆಮ್ಮದಿಯಿಂದ ಮಾಡುವ ವಾತಾವರಣ ಸಾಧ್ಯವಿಲ್ಲ. ಮನುಷ್ಯನ ಸಹಜ ಗುಣ. ಹೀಗಾಗಿ ಸಿಟ್ಟು ಕೋಪ ಸಹಜವಾಗಿ ಉತ್ಪತ್ತಿಯಾಗುತ್ತದೆ. ಯಾರು ಶುರು ಮಾಡಿದರೂ ಮಾತಿಗೆ ಪ್ರತಿ ಮಾತು ಬೆಳೆಯುತ್ತದೆ. ಕೋವಿಡ್ ಸಾಂಕ್ರಾಮಿಕ ರೋಗ ಹಾಗೂ ಲಾಕ್ ಡೌನ್ ಕಾರಣ. ಇದಕ್ಕೆ ಕಾರಣ ನಾವೇ ಎಂಬುದು ದಂಪತಿಗಳು ಮೊದಲು ಅರಿತುಕೊಳ್ಳಬೇಕು. ಗಂಡ ಆಗಲೀ, ಗಂಡನ ಸ್ವಭಾವ ಆಗಲೀ ಕಾರಣವಲ್ಲ. ಹೆಂಡತಿಯಾಗಲೀ, ಹೆಂಡತಿ ಸ್ವಭಾವ ಆಗಲೀ ಕಾರಣ ಆಗಿರುವುದಿಲ್ಲ.
ವಾಸ್ತವ ಸ್ಥಿತಿ ಅರಿತು ಬಾಳುವುದು ಕಲಿಯಬೇಕು. ಈ ನಿಟ್ಟಿನಲ್ಲಿ ತಾಳ್ಮೆ ಬೆಳೆಸಿಕೊಳ್ಳಬೇಕು. ಇದರ ಜತೆಗೆ ಯಾವುದಾದರೂ ಚಟುವಟಿಕೆ ಜತೆಗೆ ಪರಿಸರದ ಜತೆಗೆ ಒಡನಾಟ ಬೆಳೆಸಿಕೊಳ್ಳಬೇಕು. ಇದರ ಜತೆ ದೂರುವ ಮನುಸ್ಥಿತಿಯನ್ನು ಬೆಳೆಸಿಕೊಳ್ಳಬೇಕು ಎಂದು ಮನೋವೈದ್ಯ ಡಾ. ಎ. ಶ್ರೀಧರ್ ಸಲಹೆ ಮಾಡಿದ್ದಾರೆ.