ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿರುವ 7 ಸೆಲೆಬ್ರಿಟಿ, ವಿಐಪಿಗಳ ಪಟ್ಟಿ
ಬೆಂಗಳೂರು, ಡಿ 3: ನಗರದ ಹೊಸೂರು ರಸ್ತೆಯಲ್ಲಿರುವ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ವಿವಿಧ ಕಾರಣಗಳಿಂದ ಸದಾ ಸುದ್ದಿಯಲ್ಲಿರುತ್ತದೆ. ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ದಿವಂಗತ ಜಯಲಲಿತಾ ಈ ಜೈಲಿನಲ್ಲಿದ್ದಂತಹ ಸಂದರ್ಭದಲ್ಲಿ ಈ ಜೈಲಿನ ಹೆಸರು ಮತ್ತಷ್ಟು ಪರಿಚಿತವಾಗಿತ್ತು.
Recommended Video
ವಿಐಪಿ ಮತ್ತು ಸೆಲೆಬ್ರಿಟಿಗಳು ಈ ಜೈಲಿನಲ್ಲಿ ಇರುವುದು ಒಂದೆಡೆಯಾದರೆ, ಇನ್ನೊಂದೆಡೆ, ಜೈಲಿನೊಳಗಿನ ವಿಚಾರವೂ ಬಹಿರಂಗಗೊಂಡು ಬಂಧೀಖಾನೆ ಇಲಾಖೆ ತಲೆತಗ್ಗಿಸುವಂತಹ ಕೆಲಸವೂ ಇಲ್ಲಿ ನಡೆಯುತ್ತಿರುವುದು ಆಗಾಗ ಸುದ್ದಿಯಾಗುತ್ತಿರುತ್ತದೆ.
ಸನ್ನಡತೆ ಆಧಾರದ ಮೇಲೆ ಬಿಡುಗಡೆ ಬಯಸಿದ ಶಶಿಕಲಾ
ಡ್ರಗ್ಸ್ ಕೇಸ್, ಭ್ರಷ್ಟಾಚಾರ, ಆರ್ಥಿಕ ಅಪರಾಧಗಳು, ಐಎಂಎ ಹಗರಣ, ಬೆಂಗಳೂರಿನ ಡಿ.ಜೆ.ಹಳ್ಳಿ ಮುಂತಾದ ಘಟನೆಗಳಲ್ಲಿ ಆರೋಪಿ ಪಟ್ಟಿಯಲ್ಲಿರುವ ಒಟ್ಟು ಏಳು ಸೆಲೆಬ್ರಿಟಿ/ವಿಐಪಿಗಳು ಸದ್ಯ ಪರಪ್ಪನ ಅಗ್ರಹಾರ ಜೈಲುವಾಸಿಗಳಾಗಿದ್ದಾರೆ.
10 ಕೋಟಿ ದಂಡ ಪಾವತಿಸಿ, ಬಿಡುಗಡೆಯ ಹೊಸ್ತಿಲಲ್ಲಿ ಶಶಿಕಲಾ
ಎಲ್ಲಾ ಕೈದಿಗಳಂತೆ ಇವರೂ ಜೈಲಿನ ವಾತಾವರಣಕ್ಕೆ ಹೊಂದಿಕೊಳ್ಳಬೇಕಾದರೂ, ಇವರಿಗೆಲ್ಲಾ ಜೈಲಿನೊಳಗೆ ಬಯಸಿದ್ದು ಸಿಗುತ್ತಿದೆ ಎನ್ನುವ ಮಾತೂ ಕೇಳಿಬರುತ್ತಿದೆ. ಸದ್ಯ, ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಏಳು ಸೆಲೆಬ್ರಿಟಿ/ವಿಐಪಿಗಳ ಪಟ್ಟಿ ಇಂತಿದೆ:
ಶಶಿಕಲಾ ನಟರಾಜನ್
ತಮಿಳುನಾಡು ಸಿಎಂ ಜಯಲಲಿತಾ ಅವರ ಪರಮಾಪ್ತೆ ಶಶಿಕಲಾ ನಟರಾಜನ್ ಗೆ ಅಕ್ರಮ ಆಸ್ತಿ ಗಳಿಗೆ ಪ್ರಕರಣದಲ್ಲಿ ನಾಲು ವರ್ಷಗಳ ಸಜೆಯಾಗಿತ್ತು. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಇವರು ಹತ್ತು ಕೋಟಿ ದಂಡವನ್ನು ಕಟ್ಟಬೇಕಿತ್ತು. ಅದನ್ನು ಪಾವತಿಸಿರುವ ಶಶಿಕಲಾ, ಸನ್ನಡತೆಯ ಆಧಾರದ ಮೇಲೆ ಬಿಡುಗಡೆ ಮಾಡುವಂತೆ ಕೋರಿದ್ದಾರೆ.
ರಾಗಿಣಿ ದ್ವಿವೇದಿ
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ ವುಡ್ ನಲ್ಲಿ ಮೊದಲು ಬಂಧನವಾಗಿದ್ದು ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ. ಇವರನ್ನು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಸೆಪ್ಟಂಬರ್ ನಾಲ್ಕರಂದು ಬಂಧಿಸಿದ್ದರು. ನಂತರ ಇವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು.
ಸಂಜನಾ ಗಲ್ರಾನಿ
ಮಾದಕದ್ರವ್ಯ ಸೇವನೆ ಮತ್ತು ಪೂರೈಕೆ ಪ್ರಕರಣದಲ್ಲಿ ಸೆಪ್ಟಂಬರ್ ಹದಿನಾರರಂದು ಬಹುಭಾಷಾ ನಟಿ ಸಂಜನಾ ಗಲ್ರಾನಿ ಅವರ ಬಂಧನವಾಗಿತ್ತು. ಬಂಧನದ ನಂತರ ಹಲವು ಜಾಮೀನಿಗೆ ಸಂಜನಾ ಅರ್ಜಿ ಸಲ್ಲಿಸಿದ್ದರೂ, ಅವರ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿತ್ತು.
ಸಂಪತ್ ರಾಜ್
ನಗರದ ಮಾಜಿ ಮೇಯರ್ ಮತ್ತು ಕಾಂಗ್ರೆಸ್ ಮುಖಂಡ ಆರ್.ಸಂಪತ್ ರಾಜ್ ಅವರನ್ನು ಡಿ.ಜೆ.ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ನವೆಂಬರ್ ಹದಿನೇಳರಂದು ಬಂಧಿಸಿ, ಜೈಲಿಗೆ ಕಳುಹಿಸಿದ್ದರು. ಕೊರೊನಾ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಇವರು, ನಂತರ ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದರು.
ಬಿನೀಶ್ ಕೋಡಿಯೇರಿ
ಮತ್ತೊಂದು ಡ್ರಗ್ಸ್ ಪ್ರಕರಣದಲ್ಲಿ ಅರೆಸ್ಟ್ ಆಗಿರುವ, ಕೇರಳದ ಮಾಜಿ ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣನ್ ಅವರ ಪುತ್ರ ಬಿನೀಶ್ ಕೊಡಿಯೇರಿಯವರನ್ನು ಕರ್ನಾಟಕ ನ್ಯಾಯಾಲಯ ನವೆಂಬರ್ 11 ರವರೆಗೆ ಜಾರಿ ನಿರ್ದೇಶನಾಲಯ (ಇಡಿ) ವಶಕ್ಕೆ ಒಪ್ಪಿಸಿತ್ತು. ಇವರ ಮೇಲೆ ಮನಿ ಲಾಂಡ್ರಿಂಗ್ ಕೇಸೂ ದಾಖಲಾಗಿದೆ.
ವಿರೇನ್ ಖನ್ನಾ
ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಂಗಳೂರು ಪೊಲೀಸರು ವಿರೇನ್ ಖನ್ನಾನನ್ನು ದೆಹಲಿಯಿಂದ ಬಂಧಿಸಿ ತಂದಿದ್ದರು. ಇದಾದ ನಂತರ ಅವರನ್ನು ಜೈಲಿಗೆ ಕಳುಹಿಸಲಾಗಿತ್ತು.
ರೋಷನ್ ಬೇಗ್
ಭಾರೀ ಸದ್ದು ಮಾಡಿದ್ದ ಬಹುಕೋಟಿ ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಳೆದ ನವೆಂಬರ್ 22ರಂದು ಮಾಜಿ ಸಚಿವ ರೋಷನ್ ಬೇಗ್ ಅವರನ್ನು ಸಿಬಿಐ ಬಂಧಿಸಿತ್ತು. ಇದಾದ ನಂತರ, ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿತ್ತು.