ಗುಪ್ತಚರ ವರದಿ: ವಿಜಯದಶಮಿಯಂದು ಮದ್ಯ ಮಾರಾಟ ಬಂದ್
ಬೆಂಗಳೂರು, ಅ 21: ವಿಜಯದಶಮಿಯ ದಿನವಾದ ಅಕ್ಟೋಬರ್ 23ರಂದು ನಗರದ ಎರಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ದಸರಾ ಹಬ್ಬದ ಆಚರಣೆ ಅಂಗವಾಗಿ ವಿವಿಧ ಸಂಘಟನೆಗಳು ದೇವರುಗಳ ಪಲ್ಲಕ್ಕಿ ಉತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಪಲ್ಲಕ್ಕಿ ಮೆರವಣಿಗೆಯು ರಾತ್ರಿಯಿಡೀ ನೀಲಸಂದ್ರ, ಬಜಾರ್ ಸ್ಟ್ರೀಟ್, ಆನೇಪಾಳ್ಯ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಸಂಚರಿಸಲಿದೆ.
ಮೆರವಣಿಗೆಯು ಸಾಗುವ ಮಾರ್ಗವು ಸೂಕ್ಷ್ಮ ಪ್ರದೇಶವಾಗಿದ್ದು, ಈ ಮೆರವಣಿಗೆಯನ್ನು ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸುವುದರಿಂದಲೂ, ಈ ಸಮಯದಲ್ಲಿ ಕಿಡಿಗೇಡಿಗಳು/ಸಮಾಜಘಾತಕ ವ್ಯಕ್ತಿಗಳು ಕುಡಿದ ಅಮಲಿನಲ್ಲಿ ಹಿಂಸಾಕೃತ್ಯಗಳಲ್ಲಿ ತೊಡಗಿ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗವುಂಟು ಮಾಡುವ ಸಾಧ್ಯತೆಗಳಿವೆ.
ಅಲ್ಲದೇ, ಕೇಂದ್ರ ವಿಭಾಗದ ಪೊಲೀಸ್ ಆಯುಕ್ತರು, ಉಪ ಪೊಲೀಸ್ ಆಯುಕ್ತರು ಮತ್ತು ಗುಪ್ತವಾರ್ತಾ ವಿಭಾಗ ನೀಡಿರುವ ವರದಿ ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಎನ್ ಎಸ್ ಮೇಘರಿಖ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಎಲ್ಲಾ ವರದಿಗಳಲ್ಲಿ ಸಾಕಷ್ಟು ಸತ್ಯಾಂಶಗಳಿವೆಯೆಂದು ತಿಳಿದುಬಂದಿರುವುದರಿಂದ ನಾಡ ಹಬ್ಬ ದಸರಾ ಮೆರವಣಿಗೆಯ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯುವ ಉದ್ದೇಶದಿಂದ ಮದ್ಯ ಮಾರಾಟ ನಿಷೇಧಕ್ಕೆ ಆದೇಶ ನೀಡಲಾಗಿದೆ ಎಂದು ಮೇಘರಿಖ್ ಹೇಳಿದ್ದಾರೆ.
ಅಕ್ಟೋಬರ್ 23 ಬೆಳಿಗ್ಗೆ 6 ಗಂಟೆಯಿಂದ ಅಕ್ಟೋಬರ್ 24 ರ ಬೆಳಿಗ್ಗೆ 10 ಗಂಟೆಯವರೆಗೆ ಬೆಂಗಳೂರು ನಗರದ ಕೇಂದ್ರ ವಿಭಾಗದ ಅಶೋಕನಗರ ಮತ್ತು ವಿವೇಕನಗರ ಪೊಲೀಸ್ ಠಾಣೆಗಳ ವ್ಯಾಪ್ತಿಗಳಲ್ಲಿ ಬರುವ ಎಲ್ಲಾ ರೀತಿಯ ಬಾರುಗಳು, ವೈನ್ ಶಾಪ್ ಗಳು, ಪಬ್ ಗಳು ಸೇರಿದಂತೆ ಎಲ್ಲಾ ರೀತಿಯ ಮದ್ಯ ಮಾರಾಟ ಮಾಡುವ ಅಂಗಡಿಗಳನ್ನು ಮುಚ್ಚಲು ಹಾಗೂ ಮಾರಾಟವನ್ನು ಮಾಡದಿರಲು ಪ್ರತಿಬಂಧಕಾಜ್ಞೆಯನ್ನು ಆಯುಕ್ತರು ಹೊರಡಿಸಿದ್ದಾರೆ.
ಕ್ಲಬ್ಬುಗಳು, ಸ್ಟಾರ್ ಹೋಟೆಲ್ಗಳು ಮತ್ತು ಮಿಲಿಟರಿ ಕ್ಯಾಂಟೀನ್ ಗಳನ್ನು ಪ್ರತಿಬಂಧಕಾಜ್ಞೆಯಿಂದ ಹೊರತುಪಡಿಸಲಾಗಿದೆ.