ನವೆಂಬರ್ 19ರಂದು ಲಿಂಗಾಯತ ರಾಷ್ಟ್ರೀಯ ಸಮಾವೇಶ
ಬೆಂಗಳೂರು, ನವೆಂಬರ್ 18 : ನಗರದ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಲಿಂಗಾಯತ ಧರ್ಮೀಯರ ರಾಷ್ಟ್ರೀಯ ಸಮಾವೇಶ ನವೆಂಬರ್ 18ರ ಭಾನುವಾರ ನಡೆಯಲಿದೆ.
ಲಿಂಗಾಯತ ಜಾತಿಯನ್ನು ಪ್ರತ್ಯೇಕ ಧರ್ಮವನ್ನಾಗಿ ಘೋಷಿಸುವ ಒತ್ತಾಯಕ್ಕೆ ನಾಳೆ ಇನ್ನಷ್ಟು ಧ್ವನಿ ಕೂಡುವ ವಿಶ್ವಾಸ ಆಯೋಜಕರದ್ದು.
ಭಾನುವಾರ (ನವೆಂಬರ್ 18) ಬೆಳಿಗ್ಗೆ 10.30 ಕ್ಕೆ ಆರಂಭವಾಗುವ ಕಾರ್ಯಕ್ರಮವನ್ನು ನೀರಾವರಿ ಸಚಿವ ಎಂ.ಬಿ.ಪಾಟೀಲ್ ಉದ್ಘಾಟನೆ ಮಾಡಲಿದ್ದಾರೆ. ಧ್ವಜಾರೋಹಣವನ್ನು ಉನ್ನತ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಅರಳಿ ನಾಗರಾಜ್ ಅವರು ನೆರವೇರಿಸಲಿದ್ದಾರೆ. ಗೃಹ ಸಚಿವರಾದ ರಾಮಲಿಂಗಾರೆಡ್ಡಿ ಅವರು ನೆನಪಿನ ಕಾಣಿಕೆ ಬಿಡುಗಡೆ ಮಾಡಲಿದ್ದಾರೆ. ಮಾತೆ ಮಹಾದೇವಿ ಮತ್ತು ಚಿತ್ರನಟ ಚೇತನ್ ಅವರು ಕಾರ್ಯಕ್ರಮದ ಮುಖ್ಯ ಆಕರ್ಷಣೆ.
ದೊಡ್ಡ ಗಾತ್ರದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಅತಿಥಿಗಳ ದಂಡೂ ದೊಡ್ಡದೇ ಇದೆ. ರಾಜ್ಯ ಮತ್ತು ರಾಷ್ಟ್ರದ ಹಲವೆಡೆಗಳಿಂದ ಕಾರ್ಯಕ್ರಮಕ್ಕೆ ಸಾವಿರಾರು ಜನ ಆಗಮಿಸುವ ನಿರೀಕ್ಷೆ ಇದೆ.
ಕಾರ್ಯಕ್ರಮಕ್ಕೆ ಆಗಮಿಸುವವರಿಗಾಗಿ ಮೆಜೆಸ್ಟಿಕ್, ರೈಲ್ವೆ ನಿಲ್ದಾಣಗಳಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಲಿಂಗಾಯತ ಪ್ರತ್ಯೇಕ ಧರ್ಮ ಕೂಗಿಗೆ ನಾಳೆಯ ರಾಷ್ಟ್ರೀಯ ಸಮಾವೇಶದ ಬಳಿಕ ಮತ್ತಷ್ಟು ಬಲ ಬರಲಿದೆ ಎನ್ನಲಾಗುತ್ತಿದೆ.