ಲಿಂಗಾಯತ ಧರ್ಮ ಸ್ವತಂತ್ರ ಧರ್ಮ: ಸಿದ್ದರಾಮಯ್ಯ ಅಭಿಪ್ರಾಯ
Recommended Video
ಬೆಂಗಳೂರು, ಜುಲೈ 27: ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರದಲ್ಲಿ ತಮ್ಮನ್ನು ಖಳನಾಯಕನನ್ನಾಗಿ ಮಾಡಲಾಯಿತು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಶನಿವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಲಿಂಗಾಯತ ಧರ್ಮವು ಜೈನ, ಬೌದ್ಧ ಧರ್ಮಗಳಂತೆಯೇ ಸ್ವತಂತ್ರವಾದದ್ದು. ಇದು ತಮ್ಮ ವೈಯಕ್ತಿಕ ಅಭಿಪ್ರಾಯ ಎಂದು ತಿಳಿಸಿದರು.
ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಹೋರಾಟ ಆರಂಭವಾದಾಗ ಅವರೇ ಧರ್ಮದ ಮಾನ್ಯತೆಗಾಗಿ ಆಗ್ರಹಿಸಿದ್ದರು. ಈ ವಿಚಾರವಾಗಿ ತಮ್ಮದೇನೂ ತಪ್ಪಿಲ್ಲ. ಆದರೆ, ತಮ್ಮನ್ನೇ ಖಳನಾಯಕನನ್ನಾಗಿ ಮಾಡಲಾಯಿತು ಎಂದು ಅವರು ಹೇಳಿದರು.
'ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮಾನ್ಯತೆ ನೀಡಬೇಕೆಂಬ ಪ್ರಸ್ತಾಪ ಬಂದಿತ್ತು. ಅದರಲ್ಲಿ ದ್ವಂದ್ವ ಮತ್ತು ಗೊಂದಲ ಇದ್ದಿದ್ದರಿಂದ ಎಲ್ಲರೂ ಒಟ್ಟಾಗಿ ಬನ್ನಿ, ಕುಳಿತು ಚರ್ಚಿಸಿ ತೀರ್ಮಾನಿಸೋಣ ಎಂದಿದ್ದೆ. ಆದರೆ, ಕೊನೆಗೂ ಎಲ್ಲರೂ ಒಟ್ಟಾಗಿ ಬರಲೇ ಇಲ್ಲ. ನಾನೇ ಒಂದು ಸಮಿತಿ ರಚಿಸಿ ವರದಿ ತರಿಸಿಕೊಂಡೆ. ಬಳಿಕ ಅದನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿದೆ. ಮುಂದಿನದು ಏನೆಲ್ಲ ರಾಜಕೀಯಗಳು ನಡೆದವು ನಿಮಗೆಲ್ಲ ಗೊತ್ತೇ ಇದೆ' ಎಂದು ಹೇಳಿದರು.
ಖಳನಾಯಕನನ್ನಾಗಿ ಮಾಡಿದರು
'ಸಮಿತಿಯ ವರದಿಯನ್ನು ಸಚಿವ ಸಂಪುಟದಲ್ಲಿ ಇರಿಸಿ ಚರ್ಚಿಸಲಾಯಿತು. ಸರ್ವಾನುಮತದಿಂದ ನಿರ್ಣಯ ಮಾಡಲಾಯಿತು. ಆ ನಿರ್ಣಯದಲ್ಲಿ ಸ್ವಲ್ಪ ಬದಲಾವಣೆ ಮಾಡಿ ಕೇಂದ್ರಕ್ಕೆ ಕಳುಹಿಸಿದ್ದೆವು. ಇಷ್ಟೆಲ್ಲ ಆದ ಮೇಲೆಯೂ ನನ್ನನ್ನು ಖಳನಾಯಕನ್ನಾಗಿ ಮಾಡಿದರು. ಇದರಲ್ಲಿ ನನ್ನದೇನೂ ತಪ್ಪಿಲ್ಲ' ಎಂದರು.
'ಲಿಂಗಾಯತ ಧರ್ಮ ಹೋರಾಟಕ್ಕೂ ಕಾಂಗ್ರೆಸ್ಸಿಗೂ ಸಂಬಂಧವಿಲ್ಲ'
ಇದೊಂದು ಸ್ವತಂತ್ರ ಧರ್ಮ
'ಜೈನ, ಬೌದ್ಧ ಧರ್ಮಗಳಂತೆಯೇ ಬಸವ ಧರ್ಮವೂ ಪ್ರತ್ಯೇಕವಾದದ್ದು. ಲಿಂಗಾಯತ ಧರ್ಮ ಹಿಂದುತ್ವದ ಒಳಗೂ ಇಲ್ಲ, ಹೊರಗೂ ಇಲ್ಲ. ಅದೊಂದು ಸ್ವತಂತ್ರ ಧರ್ಮ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಹಿಂದುತ್ವದ ಬಗ್ಗೆ ನಾನು ಮಾತನಾಡುವುದಿಲ್ಲ. ಮಾತನಾಡಿದರೆ ಅದರ ದಿಕ್ಕು ಬದಲಾಗುತ್ತದೆ' ಎಂದು ಹೇಳಿದರು.
ಇದು ಜನರದ್ದಲ್ಲ, ಕುದುರೆ ವ್ಯಾಪಾರದ ವಿಜಯ
'ಇದು ಸಂವಿಧಾನಬದ್ಧ ಸರ್ಕಾರವಲ್ಲ. ಬಹುಮತ ಹೇಗೆ ಸಾಬೀತುಪಡಿಸುತ್ತಾರೆ? ಅವರಲ್ಲಿ ಬಹುಮತವಿಲ್ಲ. 221 ಸದಸ್ಯರಲ್ಲಿ ಅವರ ಬಳಿ ಇರುವುದು 105 ಜನ. ಸರಳ ಬಹುಮತಕ್ಕೆ ಬೇಕಿರುವುದು 111 ಸದಸ್ಯರು. ಆ ಮ್ಯಾಜಿಕ್ ನಂಬರ್ ಎಲ್ಲಿದೆ? 111 ಶಾಸಕರ ಪಟ್ಟಿಯಲ್ಲಿ ರಾಜ್ಯಪಾಲರಿಗೆ ಎಲ್ಲಿ ನೀಡಿದ್ದಾರೆ? ಇದರಲ್ಲಿ ಅತೃಪ್ತ ಶಾಸಕರ ಹೆಸರನ್ನು ಸೇರಿಸಲು ಬರುವುದಿಲ್ಲ. ಬಹುಮತ ಇಲ್ಲದೆಯೇ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಕುದುರೆ ವ್ಯಾಪಾರ ಮಾಡಿ ಜನರಿಂದ ಸಿಕ್ಕ ಜಯ ಎನ್ನುತ್ತಿದ್ದಾರೆ. ಇದು ಜನರ ವಿಜಯ ಅಲ್ಲ, ಕುದುರೆ ವ್ಯಾಪಾರದ ವಿಜಯ' ಎಂದು ಟೀಕಿಸಿದರು.
ಲಿಂಗಾಯತ ಧರ್ಮದ ವಿಚಾರದಲ್ಲಿ ನಮಗೆ ಹಿನ್ನಡೆ: ಸಿದ್ದರಾಮಯ್ಯ ಆತ್ಮಾವಲೋಕನ
ಅತೃಪ್ತ ಶಾಸಕರು ಕರೆ ಮಾಡಿದ್ದು ನಿಜ
'ನನಗೆ ಕೆಲವು ಅತೃಪ್ತ ಶಾಸಕರು ಕರೆ ಮಾಡಿದ್ದು ನಿಜ. ಅನರ್ಹತೆಯ ಭೀತಿಯಿಂದ ಅವರು ಕರೆ ಮಾಡಿದ್ದರು. ನಾನು ಅವರ ಕರೆಗಳನ್ನು ಸ್ವೀಕರಿಸಲಿಲ್ಲ. ಅತೃಪ್ತ ಶಾಸಕರು ಬಂದು ಬೆಂಬಲ ನೀಡಿದ್ದರೆ ಸಮ್ಮಿಶ್ರ ಸರ್ಕಾರ ಬೀಳುತ್ತಿರಲಿಲ್ಲ. ಈಗ ಯಾವ ಅತೃಪ್ತ ಶಾಸಕರು ವಾಪಸ್ ಬರುತ್ತಾರೋ ಬರುವುದಿಲ್ಲವೋ ನನಗೆ ಗೊತ್ತಿಲ್ಲ. ಜೆಡಿಎಸ್ನವರು ಬಿಜೆಪಿಗೆ ಬಾಹ್ಯ ಬೆಂಬಲ ನೀಡುವ ವಿಚಾರ ನನಗೆ ತಿಳಿದಿಲ್ಲ. ಅದರ ಬಗ್ಗೆ ಜಿಟಿ ದೇವೇಗೌಡ ಅವರನ್ನೇ ಕೇಳಬೇಕು' ಎಂದರು.