ಸಚಿವ ಈಶ್ವರಪ್ಪ ಗೆ ಜೀವ ಬೆದರಿಕೆ: ಭದ್ರತೆಗೆ ಮನವಿ
ಬೆಂಗಳೂರು, ಜನವರಿ 09: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಜೀವ ಬೆದರಿಕೆ ಕರೆ ಬಂದಿದೆ.
ಹೊರ ರಾಜ್ಯದಿಂದ ಈಶ್ವರಪ್ಪ ಅವರಿಗೆ ಬೆದರಿಕೆ ಕರೆ ಬಂದಿದ್ದು, ಸಿಎಎ ಮತ್ತು ಆರ್ಟಿಕಲ್ 370 ಬಗ್ಗೆ ಮಾತನಾಡದಂತೆ ಕರೆ ಮಾಡಿದವರು ಬೆದರಿಕೆ ಒಡ್ಡಿದ್ದರು. ಈ ಬಗ್ಗೆ ಶಿವಮೊಗ್ಗ ಎಸ್ಪಿ ಬಳಿ ದೂರು ಸಹ ಈಶ್ವರಪ್ಪ ನೀಡಿದ್ದರು.
ಈ ವಿಷಯವನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೂ ತಂದಿರುವ ಈಶ್ವರಪ್ಪ, ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಭದ್ರತೆ ನೀಡಬೇಕೆಂದು ಮನವಿ ಮಾಡಿದ್ದರು.
ಕೆ.ಎಸ್.ಈಶ್ವರಪ್ಪ ಅವರ 'ಫಿಲ್ಟರ್ ಇಲ್ಲದ ಮಾತು'ಗಳು ಆಗಾಗ್ಗೆ ವಿವಾದಗಳನ್ನು ಸೃಷ್ಟಿ ಮಾಡುತ್ತಲೇ ಇರುತ್ತವೆ. ಈಶ್ವರಪ್ಪ ಅವರಿಗೆ ಬೆದರಿಕೆ ಕರೆ ಬರುತ್ತಿರುವುದು ಇದು ಮೊದಲೂ ಸಹ ಅಲ್ಲ ಎನ್ನಲಾಗುತ್ತಿದೆ.
ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಪರವಾಗಿ ಇತ್ತೀಚೆಗೆ ಪೊಲೀಸ್ ದೂರು ದಾಖಲಾಗಿದೆ. ಶೋಭಾ ಕರಂದ್ಲಾಜೆ ಗೆ ಕಾಂಗ್ರೆಸ್ ಕಾರ್ಯಕರ್ತರು ಈರುಳ್ಳಿ ಹಾರ ಹಾಕುವ ಯತ್ನ ಮಾಡಿದ್ದರು. ಶೋಭಾ ಕರಂದ್ಲಾಜೆ ಮೇಲೆ ಹಲ್ಲೆಗೆ ಯತ್ನ ಮಾಡಲಾಗಿದೆ ಎಂದು ದೂರು ದಾಖಲಿಸಲಾಗಿದೆ.