ಮುಂದಿನ ಸಚಿವ ಸಂಪುಟ ಸಭೆ ಕರೆಯುವಂತಾಗಲಿ: ಸಿಎಂ ತಾಕೀತು
ಬೆಂಗಳೂರು, ನವೆಂಬರ್ 21: ಸರ್ಕಾರ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇರುವುದರಿಂದ ಉಪ ಚುನಾವಣೆಯಲ್ಲಿ ಕನಿಷ್ಠ ಎಂಟು ಕ್ಷೇತ್ರಗಳನ್ನು ಗೆಲ್ಲಿಸಿಕೊಳ್ಳಲೇಬೇಕೆಂದು ಸಂಪುಟ ಸಹೋದ್ಯೋಗಿಗಳಿಗೆ ಸಿಎಂ ಯಡಿಯೂರಪ್ಪ ತಾಕೀತು ಮಾಡಿದ್ದಾರೆ. ಶಾಸಕ ಸ್ಥಾನ ತ್ಯಜಿಸಿ ಬಂದಿರುವ ಎಲ್ಲರನ್ನು ಗೆಲ್ಲಿಸಲು ಹಗಲಿರುಳು ಶ್ರಮವಹಿಸಬೇಕೆಂದು ಸಚಿವ ಸಂಪುಟ ಸಭೆಯಲ್ಲಿ ತಿಳಿಸಿದರು.
ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಾರ್ಯಸೂಚಿ ವಿಷಯಗಳನ್ನು ಬದಿಗಿಟ್ಟು, ಉಪ ಚುನಾವಣೆ ಗೆಲ್ಲುವ ಕಾರ್ಯತಂತ್ರ ಮತ್ತು ಉಸ್ತುವಾರಿ ಸಚಿವರ ಜವಾಬ್ದಾರಿಗಳ ಕುರಿತು ಸುದೀರ್ಘವಾಗಿ ಚರ್ಚಿಸಿದರು. "ಕಾಂಗ್ರೆಸ್-ಜೆಡಿಎಸ್ ಶಾಸಕರು ರಾಜೀನಾಮೆ ಕೊಟ್ಟಿದ್ದರಿಂದಾಗಿಯೇ ನಮ್ಮ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಈ ಉಪ ಚುನಾವಣೆಯಲ್ಲಿ ಅವರನ್ನು ಗೆಲ್ಲಿಸುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದರು.
ಸಿಎಂ ಯಡಿಯೂರಪ್ಪ ತುರ್ತಾಗಿ ಹೊರಡಿಸಿದ ಪತ್ರಿಕಾ ಪ್ರಕಟಣೆ
ಇದರಲ್ಲಿ ನಾವು ಪ್ರಾಮಾಣಿಕವಾಗಿ ಕೆಲಸ ಮಾಡದೇ ಇದ್ದರೆ ಇದೇ ಕೊನೆಯ ಸಚಿವ ಸಂಪುಟ ಸಭೆಯಾಗಬಹುದು, ಮುಂದಿನ ಬಾರಿಯೂ ಸಭೆ ಕಾರೆಯುವಂತಾಗಲಿ ಎಂದು ಸಚಿವರಿಗೆ ಹೇಳಿದ್ದಾರೆ. ಎಲ್ಲ ಕ್ಷೇತ್ರಗಳಲ್ಲಿ ಗೆಲ್ಲುವ ಗುರಿ ಇಟ್ಟುಕೊಂಡು ಕನಿಷ್ಠ 8 ರಿಂದ 10 ಕ್ಷೇತ್ರಗಳಲ್ಲಿ ಗೆಲ್ಲಲೇಬೇಕು ಎಂದು ತಿಳಿಸಿದ್ದಾರೆ. ಸರ್ಕಾರದ ಬೆಂಬಲಕ್ಕೆ ನಿಂತವರನ್ನು ರಕ್ಷಿಸಿಕೊಳ್ಳದಿದ್ದರೆ ನಾನು ಮತ್ತು ನೀವು ಈ ಹುದ್ದೆಯಲ್ಲಿ ಮುಂದುವರೆಯಲು ಸಾಧ್ಯವಿಲ್ಲ. ಈ ಸವಾಲಿನ ಕೆಲಸಕ್ಕೆ ಎಲ್ಲರ ಸಹಕಾರ ಅಗತ್ಯವೆಂದಿದ್ದಾರೆ.
ಇಂದಿನಿಂದಲೇ ಎಲ್ಲರೂ ಕಾರ್ಯಪ್ರವೃತ್ತರಾಗಬೇಕು, ಉಸ್ತುವಾರಿ ಸಚಿವರು ತಕ್ಷಣವೇ ಕ್ಷೇತ್ರಗಳಿಗೆ ಹೋಗಿ, ಅಲ್ಲಿನ ಬಂಡಾಯವನ್ನು ಶಮನಗೊಳಿಸಲು ಪ್ರಯತ್ನಿಸಬೇಕು ಎಂದು ತಾಕೀತು ಮಾಡಿದ್ದಾರೆ. ಬಹಿರಂಗ ಪ್ರಚಾರ ಅಂತ್ಯವಾಗುವವರೆಗೂ ಅಲ್ಲೇ ಇದ್ದು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕೆಂದು ಹೆಳಿದ್ದಾರೆ.
ಉಪ ಚುನಾವಣೆ ಉಸ್ತುವಾರಿಯಿಂದ ಮಾಧುಸ್ವಾಮಿ ಔಟ್!
ಉಸ್ತುವಾರಿಗಳ ಬದಲು:
ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಕಷ್ಟವಾಗಬಹುದು ಎಂಬ ಗುಪ್ತಚರ ವರದಿಯನ್ನಾಧರಿಸಿ ಉಸ್ತುವಾರಿಗಳನ್ನು ಬದಲಾಯಿಸಲಾಗಿದೆ. ಕೆ.ಆರ್.ಪೇಟೆಯ ಸಚಿವ ಮಾಧುಸ್ವಾಮಿಯಿಂದ ಕಿತ್ತುಕೊಂಡು, ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ ಹಾಗೂ ಸಿಎಂ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ನೀಡಲಾಗಿದೆ. ಚಿಕ್ಕಬಳ್ಳಾಪುರಕ್ಕೆ ಸಿ.ಟಿ.ರವಿ ಹಾಗೂ ಆರ್.ಅಶೋಕ್ ಉಸ್ತುವರಿಗಳಾಗಿ ನೇಮಕಗೊಂಡಿದ್ದಾರೆ. ಯಶವಂತಪುರದ ಜವಾಬ್ದಾರಿಯನ್ನು ಸಂಸದೆ ಶೋಭಾ ಕರಂದ್ಲಾಜೆಗೆ ನೀಡಲಾಗಿದೆ.