ಬೆಂಗಳೂರು ಜನರ ನಿದ್ದೆಗೆಡಿಸಿದ್ದ ಚಿರತೆ ಬೋನಿಗೆ !
ಬೆಂಗಳೂರು, ಫೆಬ್ರವರಿ 1: ಕಳೆದ ಹತ್ತು ದಿನಗಳಿಂದ ಬೆಂಗಳೂರು ಜನರಲ್ಲಿ ನಡುಕ ಹುಟ್ಟಿಸಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ. ಬೇಗೂರು ಸಮೀಪದ ಬಂಡೆಯ ಬಳಿ ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿದ್ದು, ಅರಣ್ಯ ಸಿಬ್ಬಂದಿ ಅದನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಬಿಟ್ಟಿದ್ದಾರೆ.
ಕೆಲ ದಿನಗಳ ಹಿಂದೆ ಬೇಗೂರು ಸಮೀಪ ಚಿರತೆ ಕಾಣಿಸಿಕೊಂಡಿತ್ತು. ಸ್ಥಳೀಯರ ನಿದ್ದೆಗೆಡಿಸಿತ್ತು. ಮಾಹಿತಿ ತಿಳಿದ ಅರಣ್ಯ ಸಿಬ್ಬಂದಿ ಅದನ್ನು ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸಿದರೂ ಪ್ರಯೋಜನವಾಗಿರಲಿಲ್ಲ. ಕೊನೆಗೂ ಬೇಗೂರಿನ ಪ್ರಸ್ಟೀಜ್ ಅಪಾರ್ಟ್ ಮೆಂಟ್ ಕಲ್ಲು ಕ್ವಾರಿ ಬಳಿ ಬೋನ್ ಇಟ್ಟು ಕಾರ್ಯಾಚರಣೆಗೆ ಮುಂದಾಗಿದ್ದರು.
ಇಂದು ಬೆಳಗಿನ ಜಾವ ಚಿರತೆ ಬೋನಿಗೆ ಬಿದ್ದಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದ ಹತ್ತು ದಿನದಿಂದ ಭೀತಿಯಲ್ಲಿಯೇ ಜನರು ಓಡಾಡುತ್ತಿದ್ದರು. ಕೊನೆಗೂ ಚಿರತೆ ಹಿಡಿಯುವ ಮೂಲಕ ಅರಣ್ಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಜನರು ಕೂಡ ನಿರಾಳರಾಗಿದ್ದಾರೆ. ಕಳೆದ ಹತ್ತು ದಿನದಿಂದ ಅರಣ್ಯ ಸಿಬ್ಬಂದಿ ಅಲ್ಲಿಯೇ ಇದ್ದು ಕಾರ್ಯಾಚರಣೆ ನಡೆಸಿದ್ದ ಕಾರ್ಯಶೈಲಿಗೆ ಸ್ಥಳೀಯರು ಅಭಿನಂದನೆ ಸಲ್ಲಿಸಿದ್ದಾರೆ.