ಪರಿಷತ್ ಫೈಟ್; ಬೆಂಗಳೂರು ಗ್ರಾಮಾಂತರದಲ್ಲಿ 'ಕೈ' ಗೆ ಜೆಡಿಎಸ್ ಭಯ!
ಬೆಂಗಳೂರು, ಡಿಸೆಂಬರ್ 01; ವಿಧಾನ ಪರಿಷತ್ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು 25 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆ ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ನಿದ್ದೆಗೆಡುವಂತೆ ಮಾಡಿದೆ. ಸದ್ಯ ಘಟಾನುಘಟಿ ನಾಯಕರು ತಮ್ಮ ಕ್ಷೇತ್ರಗಳತ್ತ ನಿಗಾವಹಿಸಿದ್ದು, ಅಲ್ಲಿನ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ಮೂಲಕ ತಮ್ಮ ರಾಜಕೀಯ ವರ್ಚಸ್ಸು ಮತ್ತಷ್ಟು ಹೆಚ್ಚಿಸಿಕೊಳ್ಳುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.
ಆದರೆ ಅಧಿಕಾರಕ್ಕಾಗಿ ಹವಣಿಸುತ್ತಿರುವ ಕಾಂಗ್ರೆಸ್ನ ನಾಯಕರಿಗೆ ಎಲ್ಲೋ ಒಂದು ಕಡೆ ಜೆಡಿಎಸ್ ಗುಮ್ಮವಾಗಿ ಕಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ವಿಧಾನಪರಿಷತ್ನ 25 ಸ್ಥಾನಗಳು ಕೂಡ ರಾಜಕೀಯ ನಾಯಕರಿಗೆ ಒಂದಲ್ಲ ಒಂದು ರೀತಿಯಲ್ಲಿ ಪ್ರಮುಖವಾಗಿದ್ದು, ಕೆಲವು ಕ್ಷೇತ್ರಗಳು ಘಟಾನುಘಟಿ ನಾಯಕರು ಪ್ರತಿನಿಧಿಸುವ ಕ್ಷೇತ್ರಗಳಾಗಿವೆ.
ಶಿವಮೊಗ್ಗ; ವಿಧಾನ ಪರಿಷತ್ ಮತದಾನ ಬಹಿಷ್ಕಾರ
ಹೀಗಾಗಿ ಅಲ್ಲಿ ಗೆಲ್ಲದೆ ಹೋದರೆ ತೀವ್ರ ಮುಜುಗರ ಎದುರಿಸಬೇಕಾಗಬಹುದು ಎಂಬ ಭಯವೂ ಅವರನ್ನು ಕಾಡುವುದರೊಂದಿಗೆ ಇದರಿಂದ ಮುಂದಿನ ವಿಧಾನಸಭಾ ಚುನಾವಣೆಗೆ ಒಂದಷ್ಟು ಹಿನ್ನಡೆ ಅನುಭವಿಸಬೇಕಾಗಬಹುದು ಎಂಬ ಭಯವೂ ಅವರಲ್ಲಿದೆ. ಹಾಗಾಗಿಯೇ ಕೆಲವು ನಾಯಕರು ತಮ್ಮ ಸ್ವಕ್ಷೇತ್ರದತ್ತ ಹೆಚ್ಚಿನ ನಿಗಾವಹಿಸುತ್ತಿರುವುದು ಕಂಡು ಬರುತ್ತಿದೆ.
ಪರಿಷತ್ ಚುನಾವಣೆ; ಶಿವಮೊಗ್ಗದ ಚುನಾವಣಾ ಚಿತ್ರಣ
ಈ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು, ಗ್ರಾಮಪಂಚಾಯಿತಿ ಸದಸ್ಯರು ಸೇರಿದಂತೆ ಜನ ಪ್ರತಿನಿಧಿಗಳು ಮತದಾನ ಮಾಡುತ್ತಿರುವುದರಿಂದ ವಿಧಾನಸಭಾ ಚುನಾವಣೆಗಿಂತ ಭಿನ್ನವಾಗಿದ್ದು, ಪ್ರತಿಯೊಬ್ಬರ ಮತವೂ ಅತ್ಯಮೂಲ್ಯವಾಗಿದೆ ಜತೆಗೆ ಗ್ರಾಮಪಂಚಾಯಿತಿ ಸದಸ್ಯರು ಪಕ್ಷದ ಚಿಹ್ನೆಯಡಿ ಗೆದ್ದು ಬಂದವರಲ್ಲ. ಅವರನ್ನು ಪಕ್ಷದ ಬೆಂಬಲಿತರು ಎಂದು ಹೇಳಿಕೊಳ್ಳಬಹುದಷ್ಟೆ. ಹೀಗಾಗಿ ಅವರು ಕೈಗೊಳ್ಳುವ ಕೊನೆಯ ನಿರ್ಧಾರಗಳು ಉಲ್ಟಾ ಹೊಡೆಯುವ ಸಾಧ್ಯತೆಯು ಇಲ್ಲದಿಲ್ಲ.
ಎಂಎಲ್ಸಿ ಸ್ಥಾನಕ್ಕೆ ಜೆಡಿಎಸ್ ನಾಯಕನ ರಾಜೀನಾಮೆ
ಬಿಜೆಪಿ ಹಣಿಯಲು ಹಲವು ತಂತ್ರ
ಕಾಂಗ್ರೆಸ್ ನಾಯಕರು ಆಡಳಿತಾರೂಢ ಬಿಜೆಪಿಯನ್ನು ಹಣಿಯಲು ಹಲವು ತಂತ್ರಗಳನ್ನು ಬಳಸುತ್ತಿದ್ದರೂ ಒಂದಲ್ಲ ಒಂದು ಕಾರಣದಿಂದ ತಂತ್ರಗಳು ಠುಸ್ ಪಟಾಕಿಯಾಗುತ್ತಿದೆ. ಬಿಜೆಪಿ ಆಡಳಿತದಲ್ಲಿನ ಲೋಪದೋಷಗಳು, ಬೆಲೆ ಏರಿಕೆ ಹೀಗೆ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಲಾಭ ಪಡೆಯಲು ಕಾಂಗ್ರೆಸ್ ನಾಯಕರು ಹವಣಿಸುತ್ತಿದ್ದಾರೆ. ಅವರಿಗೆ ವಿಧಾನಪರಿಷತ್ ನಲ್ಲಿ ಹೆಚ್ಚಿನ ಸ್ಥಾನಪಡೆದು ಪ್ರಾಬಲ್ಯ ಸಾಧಿಸುವುದಲ್ಲದೆ, ಬಿಜೆಪಿಯನ್ನು ಸೋಲಿಸಿ ಮುಂದಿನ 2023ರ ವಿಧಾನಸಭಾ ಚುನಾವಣೆಗೆ ತೆರಳಲು ದಾರಿ ಸುಗಮ ಮಾಡಿಕೊಳ್ಳುವುದು ಉದ್ದೇಶವಾಗಿದೆ.
ಇದೆಲ್ಲದರ ನಡುವೆ ಕೆಪಿಸಿಸಿಯ ಸಾರಥ್ಯ ವಹಿಸಿರುವ ಡಿ. ಕೆ. ಶಿವಕುಮಾರ್ಗೆ ತಮ್ಮ ಪ್ರತಿಷ್ಠೆಯ ಕ್ಷೇತ್ರವಾಗಿರುವ ಬೆಂಗಳೂರು ಗ್ರಾಮಾಂತರದಲ್ಲಿ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಲೇ ಬೇಕಾದ ಅನಿವಾರ್ಯತೆ ಎದುರಾಗಿದೆ. ಒಂದು ವೇಳೆ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲುಕಂಡರೆ ಅದು ಡಿ. ಕೆ. ಶಿವಕುಮಾರ್ಗೆ ಮುಖಭಂಗವಾದಂತೆ.
ಡಿಕೆಶಿ, ಡಿಕೆಎಸ್, ಎಚ್ಡಿಕೆಗೆ ಪ್ರತಿಷ್ಠೆಯ ಕಣ
ಬೆಂಗಳೂರು ಗ್ರಾಮಾಂತರ ಕ್ಷೇತ್ರ ಡಿ. ಕೆ. ಶಿವಕುಮಾರ್ ಮತ್ತು ಸಹೋದರ ಸಂಸದ ಡಿ. ಕೆ. ಸುರೇಶ್ ಮಾತ್ರವಲ್ಲದೆ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಗೂ ಪ್ರತಿಷ್ಠಿತ ಕ್ಷೇತ್ರವಾಗಿದ್ದು, ಗೆಲುವಿಗೆ ಭಾರೀ ಪೈಪೋಟಿ ನಡೆಯುತ್ತಿರುವುದಂತು ಸತ್ಯ. ಈ ನಡುವೆ ಕಾಂಗ್ರೆಸ್ ನಾಯಕರಲ್ಲಿ ಡಿಕೆಶಿಗೆ ಮುಖಭಂಗ ಮಾಡಲು ಜೆಡಿಎಸ್ ಮತ್ತು ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿರುವ ಸಂಶಯ ಶುರುವಾಗಿದೆ.
ಇತ್ತೀಚೆಗೆ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪವಾಗಿದ್ದು, ಬೆರಳೆಣಿಕೆ ಗ್ರಾಮ ಪಂಚಾಯಿತಿಗಳಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಕಾಂಗ್ರೆಸ್ಗೆ ಪೈಪೋಟಿ ನೀಡುವುದು ಅಸಾಧ್ಯವೇ. ಆದರೆ ಒಳಒಪ್ಪಂದ ಮಾಡಿಕೊಂಡರೂ ಅಚ್ಚರಿಪಡಬೇಕಾಗಿಲ್ಲ. ಆದ್ದರಿಂದ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರು ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಸಂಸದ ಡಿ. ಕೆ. ಸುರೇಶ್ ಮನವಿ ಮಾಡಿಕೊಂಡಿದ್ದರು.
ಕಾಂಗ್ರೆಸ್ ಬೆಂಬಲಿತರೇ ಹೆಚ್ಚು
ಬೆಂಗಳೂರು ಗ್ರಾಮಾಂತರ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬಹಳಷ್ಟು ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಅಲ್ಲದೇ ಹೆಚ್ಚಿನ ಗ್ರಾಮ ಪಂಚಾಯಿತಿಗಳು ಕೈ ವಶದಲ್ಲಿದ್ದು ಕಾಂಗ್ರೆಸ್ಸಿಗರೇ ಅಧಿಕಾರ ಹಿಡಿದಿದ್ದಾರೆ ಎಂಬ ಸತ್ಯ ಗೊತ್ತಿದ್ದರೂ ಕಾಂಗ್ರೆಸ್ ನಾಯಕರಲ್ಲಿ ಭಯ ಕಾಡಲು ಕಾರಣವಾಗಿರುವುದೇಕೆ?.
ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ತಲಾ ಎರಡು ಮೂರು ಗ್ರಾಮ ಪಂಚಾಯಿತಿಗಳಲ್ಲಿ ಅಧಿಕಾರದಲ್ಲಿದ್ದರೂ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ. ಕೆ. ಶಿವಕುಮಾರ್ ತವರು ಜಿಲ್ಲೆಯಲ್ಲಿ ಮುಖಭಂಗ ಮಾಡುವ ಉದ್ದೇಶದಿಂದ ಬಿಜೆಪಿ ಮತ್ತು ಜೆಡಿಎಸ್ ಯಾವ ಕ್ಷಣದಲ್ಲಿಯದರೂ ಹೊಂದಾಣಿಕೆ ಮಾಡಿಕೊಳ್ಳಬಹುದು ಎಂಬುದು ಕಾಂಗ್ರೆಸ್ ನಾಯಕರ ಚಿಂತೆಯಾಗಿದೆ. ಹೀಗಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಯಾವ ಆಸೆ ಅಮಿಷಗಳಿಗೆ ಒಳಗಾಗದೇ ಪಕ್ಷನಿಷ್ಠೆ ಮೆರೆಯುಂತೆ ನೋಡಿಕೊಳ್ಳುವ ಪ್ರಯತ್ನವನ್ನು ಕಾಂಗ್ರೆಸ್ ನಾಯಕರು ಮಾಡುತ್ತಲೇ ಬರುತ್ತಿದ್ದಾರೆ.
ಮನಸ್ಸು ಬದಲಾಯಿಸದಂತೆ ತಾಕೀತು
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸ್ವ-ಕ್ಷೇತ್ರ ಆಗಿರುವ ಕಾರಣ ಹಾಗೂ ಮುಂದೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ವಿಧಾನ ಪರಿಷತ್ ಚುನಾವಣೆ ಬಹುಮುಖ್ಯವಾಗಿದ್ದು. ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರು ಮನಸ್ಸು ಬದಲಾಯಿಸದಂತೆ ತಾಕೀತು ಮಾಡಲಾಗುತ್ತಿದ್ದು, ಆ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಎಸ್. ರವಿ ಗೆಲ್ಲಿಸಿಕೊಂಡು ಬರಲು ಪಣತೊಡಲಾಗಿದೆ.
ಇನ್ನು ಇಲ್ಲಿ ಬಿಜೆಪಿ ಹೆಚ್ಚು ಸಂಘಟನೆಗೊಳ್ಳದಿದ್ದರೂ ಅಭ್ಯರ್ಥಿ ಬಿ. ಸಿ. ನಾರಾಯಣಸ್ವಾಮಿ ಪ್ರಚಾರ ನಡೆಸುತ್ತಲೇ ಇದ್ದಾರೆ. ಆದರೆ ಇಲ್ಲಿ ಜೆಡಿಎಸ್ ಅಭ್ಯರ್ಥಿ ರಮೇಶ್ ಗೌಡ ಮತ್ತು ಕಾಂಗ್ರೆಸ್ ನ ಅಭ್ಯರ್ಥಿ ಎಸ್. ರವಿ ನಡುವೆ ತೀವ್ರ ಜಿದ್ದಾಜಿದ್ದಿ ನಡೆಯುವ ಸಾಧ್ಯತೆ ಹೆಚ್ಚಾಗಿದೆ. ಏನೇ ಆದರೂ ಕೊನೆಗಳಿಗೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಒಂದಾಗಿ ಬಿಡಬಹುದೇನೋ? ಎಂಬ ಭಯ ಕಾಂಗ್ರೆಸ್ ನಾಯಕರನ್ನು ಬಿಟ್ಟು ಬಿಡದಂತೆ ಕಾಡುತ್ತಿದೆ.