ಮೂವರು ಅಧಿಕಾರಿಗಳ ದಾಖಲೆ ಕೊಟ್ಟು ವಿವಾದ ಮೈಮೇಲೆ ಎಳೆದುಕೊಂಡ ಉಪ ನಿಯಂತ್ರಕ
ಬೆಂಗಳೂರು, ಸೆ. 25: ಪೆಟ್ರೋಲ್ ಬಂಕ್ನಲ್ಲಿ ಅಕ್ರಮವಾಗಿ ಹಫ್ತಾ ವಸೂಲಿ ಮಾಡಿದ ಪ್ರಕರಣದಲ್ಲಿ ಅಮಾನತಿಗೆ ಒಳಗಾಗಿರುವ ಸಹಾಯಕ ನಿಯಂತ್ರಕಿ ಸೀಮಾ ಕೆ. ಮಾಗಿ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಸೀಮಾ ಕೆ. ಮಾಗಿ ಅವರ ಪರೋಕ್ಷ ರಕ್ಷಣೆಗೆ ನಿಂತಿರುವ ಕಾನೂನು ಮಾಪನಶಾಸ್ತ್ರಇಲಾಖೆಯ ಅಧಿಕಾರಿಯೊಬ್ಬ ತನಗೆ ಆಗದ ಮೂವರು ಅಧಿಕಾರಿಗಳ ದಾಖಲೆಗಳನ್ನು ದೂರುದಾರನಿಗೆ ನೀಡಿ "Expose" ಮಾಡುವಂತೆ ಪುಸಲಾಯಿತಿ ಮೈಮೇಲೆ ಕೇಸು ಜಡಿಸಿಕೊಂಡಿದ್ದಾರೆ.
ಕಾನೂನು ಮಾಪನ ಶಾಸ್ತ್ರ ಇಲಾಖೆಯ ಆಡಳಿತ ವಿಭಾಗದ ಉಪ ನಿಯಂತ್ರಕ ಗೋವಿಂದಪ್ಪ ಇಂತಹ ಆರೋಪಕ್ಕೆ ಗುರಿಯಾಗಿದ್ದರು. ಹಫ್ತಾ ವಸೂಲಿ ಪ್ರಕರಣದಲ್ಲಿ ಅಮಾನತಿಗೆ ಒಳಗಾಗಿರುವ ಸೀಮಾ ಕೆ. ಮಾಗಿ ಅವರನ್ನು ಆರೋಪ ಮುಕ್ತರನ್ನಾಗಿಸಿ ಹೊರ ತರುವ ಕಸರತ್ತು ನಡೆಸಿದ್ದ ಗೋವಿಂದಪ್ಪ ಅವರನ್ನು ದೂರುದಾರ ಪಿಳ್ಳಯ್ಯ ಪ್ರಶ್ನಿಸಿದ್ದರು.
ಈ ವೇಳೆ ಸೀಮಾ ಕೆ. ಮಾಗಿ ಅವರನ್ನು ಬಿಟ್ಟು ಬಿಡಿ. ನಿಮಗೆ ಬೇರೆ ಮೂವರು ಅಧಿಕಾರಿಗಳ ದಾಖಲೆಗಳನ್ನು ಕೊಡುತ್ತೇನೆ. ಅವರ ಬಗ್ಗೆ ಹೋರಾಟ ನಡೆಸಿ ಅವರಿಂದ ಲಾಭ ಮಾಡಿಕೊಳ್ಳುವಂತೆ ಸೂಚಿಸಿ ದಾಖಲೆಗಳನ್ನು ನೀಡಿದ್ದಾರೆ. ಸೀಮಾ ಕೆ. ಮಾಗಿ ಅವರ ಪ್ರಕರಣ ಕೈ ಬಿಡಲು ಹಣ ಕೊಡುವುದಾಗಿ ಅಮಿಷೆ ಒಡ್ಡಿದ್ದಾರೆ.
ಈ ಎಲ್ಲಾ ದಾಖಲೆಗಳನ್ನು ಪಡೆದುಕೊಂಡಿರುವ ಸಾಮಾಜಿಕ ಕಾರ್ಯಕರ್ತ ಪಿಳ್ಳಯ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರಿಗೆ ಆಡಳಿತ ವಿಭಾಗದ ಉಪ ನಿಯಂತ್ರಕ ಗೋವಿಂದಪ್ಪ ವಿರುದ್ಧ ದೂರು ನೀಡಿದ್ದಾರೆ.
ನನಗೆ ಬೇರೆ ಮೂವರು ಅಧಿಕಾರಿಗಳ ದಾಖಲೆಗಳನ್ನು ನೀಡಿ ಅವರ ವಿರುದ್ಧ ಕಾನೂನು ಹೋರಾಟ ನಡೆಸುವಂತೆ ಪುಸಲಾಯಿಸಿದ್ದಾರೆ. ಅಲ್ಲದೇ ಸೀಮಾ ಕೆ. ಮಾಗಿ ವಿರುದ್ಧ ನಾನು ದಾಖಲಿಸಿರುವ ಪ್ರಕರಣದಲ್ಲಿ ಮೌನ ವಹಿಸಿದರೆ ಹಣ ಕೊಡುವುದಾಗಿ ಅಮಿಷೆ ಒಡ್ಡಿದ್ದಾರೆ. ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು ನನಗೆ ಅಕ್ರಮ ಲಾಭ ಮಾಡಿಕೊಳ್ಳುವಂತೆ ಒತ್ತಾಯ ಮಾಡಿರುವ ಗೋವಿಂದಪ್ಪ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.
ಮಾಗಿ ಅವರ ಹೆಸರಿನಲ್ಲಿ ವಸೂಲಿ: ಬೂದಿಗೆರೆ ಸಮೀಪದ ಪೆಟ್ರೋಲ್ ಬಂಕ್ ನಲ್ಲಿ ತನ್ನ ವ್ಯಾಪ್ತಿಗೆ ಬರದಿದ್ದರೂ ಸೀಮಾ ಕೆ. ಮಾಗಿ ಏಜೆಂಟ್ ಶಿವಕುಮಾರ್ ಜತೆ ಹೋಗಿ ಹಫ್ತಾ ವಸೂಲಿ ಮಾಡಿದ್ದರು. ಈ ಕುರಿತ ವಿಡಿಯೋ ಆಧರಿಸಿ ಒನ್ ಇಂಡಿಯಾ ಕನ್ನಡ ಮೊದಲು ವರದಿ ಪ್ರಕಟಿಸಿತ್ತು. ವರದಿ ಬಳಿಕ ಅಮಾನತಿಗೆ ಒಳಗಾಗದಂತೆ ತನ್ನ ಪ್ರಭಾವ ಬೀರಿ ತೆರೆ ಮರೆಯಲ್ಲಿ ಕಸರತ್ತು ನಡೆಸಿದ್ದರು. ಇದಾದ ಕೆಲವೇ ದಿನದಲ್ಲಿ ಸಾಮಾಜಿಕ ಕಾರ್ಯಕತ್ ಪಿಳ್ಳಯ್ಯ ವಿಡಿಯೋ ಆಧರಿಸಿ ಸಚಿವರಿಗೆ ದೂರು ನೀಡಿದ್ದರು. ವಿಡಿಯೋ ಪರಿಶೀಲನೆ ನಡೆಸಿದ್ದ ಮೇಲಾಧಿಕಾರಿಗಳು ಸೀಮಾ ಕೆ. ಮಾಗಿ ಅವರನ್ನು ಅಮಾನತು ಮಾಡಿದ್ದರು. ಏಜೆಂಟ್ ಶಿವಕುಮಾರ್ ಗೆ ನೀಡಿದ್ದ ಪರವಾನಗಿಯನ್ನು ರದ್ದು ಮಾಡಿದ್ದರು.
ಆದರೆ ಕೋರ್ಟ್ ಮೊರೆ ಹೋಗಿದ್ದ ಶಿವಕುಮಾರ್ ಕಾನೂನು ಮಾಪನ ಶಾಸ್ತ್ರ ಇಲಾಖೆ ಪರವಾನಗಿ ರದ್ದು ಮಾಡಿರುವ ಅದೇಶದ ವಿರುದ್ಧ ತಡೆಯಾಜ್ಞೆ ತಂದಿದ್ದಾರೆ. ಇದೀಗ ಅದೇ ಹಾದಿ ತುಳಿದಿರುವ ಸೀಮಾ ಕೆ. ಮಾಗಿ ಅವರು ಅಮಾನತು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದಾರೆ ಎನ್ನಲಾಗಿದೆ.
ಸೀಮಾ ಕೆ. ಮಾಗಿ ಅವರ ಮೇಲಿನ ಆರೋಪ ಸಂಬಂಧ ಇಲಾಖೆ ಯಾವುದೇ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸದೇ ಮೌನ ವಹಿಸುವುದು, ಜತೆಗೆ ನ್ಯಾಯಾಲಯದಲ್ಲಿ ವಿಚಾರಣೆಗೆ ಬರುವ ದಾವೆಗೆ ಇಲಾಖೆಯಿಂದ ವಕೀಲರು ಪ್ರತಿನಿಧಿಸದೇ ಇರುವಂತೆ ಕೆಲವು ಅಧಿಕಾರಿಗಳ ಮೇಲೆ ಪ್ರಭಾವ ಬೀರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ವಿಚಾರವನ್ನೂ ಪ್ರಸ್ತಾಪಿಸಿರುವ ದೂರುದಾರ ಪಿಳ್ಳಯ್ಯ, ಸೀಮಾ ಕೆ. ಮಾಗಿ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಕೇಸು ದಾಖಲಿಸಿ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಅಂತೂ ಅಧಿಕಾರಿಯ ರಕ್ಷಣೆಗೆ ಬಿದ್ದ ಉಪ ನಿಯಂತ್ರಕ ಗೋವಿಂದಪ್ಪ ಅವರು ತಮ್ಮದೇ ಇಲಾಖೆಯ ಅಧಿಕಾರಿಗಳ ದಾಖಲೆಗಳನ್ನು ನೀಡಿ ಇದೀಗ ವಿವಾದಕ್ಕೆ ಸಿಲುಕಿದ್ದಾರೆ. ಭ್ರಷ್ಟಾಚಾರ ಆರೋಪ ಹೊತ್ತ ಅಧಿಕಾರಿಯ ರಕ್ಷಣೆಗೆ ಹೋಗಿ ದಾಖಲೆಗಳನ್ನು ನೀಡುವ ಮೂಲಕ ತನ್ನ ಬುಡದಲ್ಲೇ ಬೆಂಕಿ ಹಾಕಿಸಿಕೊಂಡಿದ್ದಾರೆ. ಪಿಳ್ಳಯ್ಯ ನೀಡಿರುವ ದೂರನ್ನಾಧರಿಸಿ ತನಿಖೆ ನಡೆಸಲು ಸರ್ಕಾರದ ಮುಖ್ಯ ಕಾರ್ಯದರ್ಶಿ ಇಲಾಖೆಗೆ ಅರ್ಜಿಯನ್ನು ವರ್ಗಾವಣೆ ಮಡಿದ್ದಾರೆ.
ಸರ್ಕಾರದ ಗೌಪ್ಯ ದಾಖಲೆಗಳನ್ನು ನಿಯಮ ಬಾಹಿರವಾಗಿ ನೀಡಿ ಕರ್ತವ್ಯ ಲೋಪ ಎಸಗಿದ ಆರೋಪದಡಿ ಗೋವಿಂದಪ್ಪ ಅವರನ್ನು ಅಮಾನತು ಮಾಡಲಾಗುತ್ತಿದೆ ಎಂಬ ಮಾತು ಇಲಾಖೆ ವಲಯದಲ್ಲಿ ಕೇಳಿ ಬರುತ್ತಿದೆ. ಕೇವಲ ಪೆಟ್ರೋಲ್ ಬಂಕ್ ನಲ್ಲಿ ಹಫ್ತಾ ವಸೂಲಿ ಮಾಡುವ ಒಂದು ಪ್ರಕರಣ ಇದೀಗ ಇಡೀ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಅಕ್ರಮದ ಹೂರಣವನ್ನೇ ಹೊರ ಹಾಕಿದೆ.
Recommended Video
ಸೀಮಾ ಕೆ. ಮಾಗಿ ಅವರ ವಿರುದ್ಧ ಭ್ರಷ್ಟಾಚಾರ ಆರೋಪವಿದೆ. ಅವರ ವಿರುದ್ಧ ನೀಡಿರುವ ದೂರು ವಾಪಸು ಪಡೆದು, ಇತರೆ ಮೂವರು ಅಧಿಕಾರಿಗಳ ವಿರುದ್ಧ ಕಾನೂನು ಸಮರ ಮಾಡುವಂತೆ ನನಗೆ ಗೋವಿಂದಪ್ಪ ದಾಖಲೆಗಳನ್ನು ನೀಡಿರುವುದು ನಿಜ. ನನಗೆ ಹಣದ ಅಮಿಷೆ ಒಡ್ಡಿದ್ದರು. ಇದ್ಯಾವುದಕ್ಕೂ ನಾನು ಬಲಿಯಾಗದೇ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರಿಗೆ ದೂರು ನೀಡಿದ್ದೇನೆ ಎಂದು ದೂರುದಾರ ಪಿಳ್ಳಯ್ಯ ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.