ಅತ್ತಿಬೆಲೆ ಚೆಕ್ಪೊಸ್ಟ್ ಮೇಲೆ ತೀವ್ರ ನಿಗಾವಹಿಸಲಾಗಿದೆ: ಸುರೇಶ್ ಕುಮಾರ್
ಬೆಂಗಳೂರು, ಜು. 13: ಬೆಂಗಳೂರಿನಲ್ಲಿ ಕೊರೊನಾ ವೈರಸ್ ಸೋಂಕಿನ ಭಯ ವಿಪರೀತವಾಗುತ್ತಿದೆ. ಸಾಮಾನ್ಯ ಸಮಸ್ಯೆಗಳಿಂದ ರಸ್ತೆಯಲ್ಲಿ ಬಿದ್ದರೂ ಯಾರೂ ಹತ್ತಿರಕ್ಕೂ ಬರುವುದಿಲ್ಲ, ಇನ್ನು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಅಂತೂ ದೂರದ ಮಾತು. ಖಾಸಗಿ ಆಸ್ಪತ್ರೆಗಳು ಬಿಬಿಎಂಪಿ ವ್ಯಾಪ್ತಿಯಲ್ಲಿ ಸರ್ಕಾರದ ಆದೇಶಕ್ಕೂ ಕಿಮ್ಮತ್ತು ಕೊಡುತ್ತಿಲ್ಲ. ಹೀಗಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೊನಾ ವೈರಸ್ ನಿಯಂತ್ರಿಸಲು ಬೆಂಗಳೂರನ್ನು 8 ವಲಯಗಳನ್ನಾಗಿ ವಿಭಜನೆ ಮಾಡಲಾಗಿದೆ. ಒಂದೊಂದು ವಿಭಾಗಕ್ಕೆ ಒಬ್ಬ ಸಚಿವರನ್ನು ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ. ಆದರೆ ಖಾಸಗಿ ಆಸ್ಪತ್ರೆಗಳು ಮಾತ್ರ ಸರ್ಕಾರದ ಮನವಿಗೆ, ಆದೇಶಕ್ಕೆ ಈಗಲೂ ಸ್ಪಂಧಿಸುತ್ತಿಲ್ಲ.
Recommended Video
ಇನ್ನು ಬೆಂಗಳೂರಿನ ಬೊಮ್ಮನಹಳ್ಳಿ ವಲಯದಲ್ಲಿಯೂ ಇದೇ ಪರಿಸ್ಥಿತಿ ಇದೆ. ಹೀಗಾಗಿ ಸರ್ಕಾರದ ಆದೇಶವನ್ನು ಮೀರಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಖಾಸಗಿ ಆಸ್ಪತ್ರೆಗಳಿಗೆ ಕೊಡಲಾಗಿದೆ. ಜೊತೆಗೆ ಅತ್ತಿಬೆಲೆ ಚೆಕ್ಪೋಸ್ಟ್ನಿಂದ ಒಳಗೆ ಬರುವವರನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸುವಂತೆಯೂ ಸೂಚಿಸಲಾಗಿದೆ.
ಪಿಯುಸಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ, ಪೂರಕ ಪರೀಕ್ಷೆ ರದ್ದು!
ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಕೆ
ಕೊರೊನಾ ವೈರಸ್ ರೋಗಿಗಳಿಗಾಗಿ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬೊಮ್ಮನಹಳ್ಳಿ ವಲಯದ ಖಾಸಗಿ ಆಸ್ಪತ್ರೆಗಳು ಇಲಾಖೆಗೆ ಒದಗಿಸಬೇಕಾದ ನಿಗದಿತ ಹಾಸಿಗೆಗಳನ್ನು ನೀಡಲು ವಿಳಂಬ ಮಾಡುತ್ತಿದ್ದು, ವಿಳಂಬ ಇದೇ ರೀತಿ ಮುಂದುವರೆದರೆ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಎಚ್ಚರಿಸಿದ್ದಾರೆ.
ಬೊಮ್ಮನಹಳ್ಳಿ ವಲಯದ ಕೊರೋನಾ ಉಸ್ತುವಾರಿಗೆ ನಿಯುಕ್ತಿಗೊಂಡಿರುವ ಸುರೇಶ್ ಕುಮಾರ್ ಅವರು, ಈ ಕುರಿತು ನಿನ್ನೆ ಖಾಸಗಿ ವಲಯದ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಚರ್ಚಿಸಿದ್ದು, ತಕ್ಷಣವೇ ನಿಗದಿತ ಬೆಡ್ಗಳನ್ನು ಒದಗಿಸಬೇಕೆಂದು ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗಮನಕ್ಕೆ ತಂದರು. ಸಿಎಂ ಜೊತೆಗೆ ವಿಡಿಯೋ ಸಂವಾದದಲ್ಲಿ ಭಾಗವಹಿಸಿ, ಚರ್ಚೆ ನಡೆಸಿದರು.
ಅತ್ತಿಬೆಲೆ ಚೆಕ್ಪೊಸ್ಟ್
ಬೆಂಗಳೂರಿನ ಬೊಮ್ಮನಹಳ್ಳಿ ವಲಯದ ಅತ್ತಿಬೆಲೆ ತನಿಖಾ ಠಾಣೆಯಿಂದ ಬರುವ ಜನರನ್ನು ನಿಯಂತ್ರಿಸುವುದು ಮತ್ತು ಅವರನ್ನು ಪರೀಕ್ಷೆಗೆ ಒಳಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ಅವರು ಸಿಎಂ ಯಡಿಯೂರಪ್ಪ ಅವರಿಗೆ ತಿಳಿಸಿದರು. ಜೊತೆಗೆ ಈ ವಲಯದಲ್ಲಿ ಸಾಕಷ್ಟು ಖಾಸಗಿ ಅಪಾರ್ಟ್ಮೆಂಟ್ಗಳಿದ್ದು, ಇಂತಹ ಅಪಾರ್ಟ್ಮೆಂಟ್ಗಳಲ್ಲಿ ಜನರ ಆರೋಗ್ಯ ತಪಾಸಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸುರೇಶ್ ಕುಮಾರ್ ಹೇಳಿದರು.
ತಮ್ಮ ತಮ್ಮ ವಲಯಗಳಲ್ಲಿ ಕೋವಿಡ್ ನಿಯಂತ್ರಣಕ್ಕೆ ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಲು ವಲಯ ಉಸ್ತುವಾರಿಗಳಾಗಿರುವ ತಮಗೆ ಪೂರ್ಣ ಸ್ವಾತಂತ್ರ್ಯವಿದ್ದು, ವಿಳಂಬ ಮಾಡುವ ಆಸ್ಪತ್ರೆಗಳ ವಿರುದ್ಧ ಅಗತ್ಯ ಕ್ರಮಕ್ಕೆ ಸೂಚಿಸಿ ಎಂದರು.
ಶೇಕಡಾ 50 ರಷ್ಟು ಮೀಸಲು
ಬೊಮ್ಮನಹಳ್ಳಿ ವಲಯದ ಖಾಸಗಿ ಆಸ್ಪತ್ರೆಗಳಲ್ಲಿ ಒಟ್ಟು 1261 ಬೆಡ್ಗಳಿವೆ. ಅವುಗಳಲ್ಲಿ ನಿಗದಿತ ಸಂಖ್ಯೆಯ ಶೇಕಡಾ 50ರಷ್ಟು ಬೆಡ್ಗಳನ್ನು ಒದಗಿಸಬೇಕಾಗಿದ್ದು, ಈತನಕ ಕೇವಲ 118 ಬೆಡ್ ಗಳನ್ನಷ್ಟೇ ಖಾಸಗಿ ಆಸ್ಪತ್ರಗೆಳು ಕೊಟ್ಟಿವೆ. ಸೋಂಕು ಏರುತ್ತಿರುವ ಈ ಸಂದರ್ಭದಲ್ಲಿ ಇಂತಹ ವಿಷಯಗಳಲ್ಲಿ ವಿಳಂಬಕ್ಕೆ ಅವಕಾಶವೇ ಇಲ್ಲ. ಏನಾದರೂ ವಿಳಂಬ ಮಾಡಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿರುವುದಾಗಿ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ಸಿಎಂ ಯಡಿಯೂರಪ್ಪ ಅವರ ಗಮನಕ್ಕೆ ತಂದರು.
ಚಿಕಿತ್ಸೆಗೆ ಬೆಡ್ಗಳನ್ನು ಕೊಡದೇ ನಿಯಮ ಉಲ್ಲಂಘಿಸುವ ಖಾಸಗಿ ಆಸ್ಪತ್ರೆಗಳ ಮೇಲೆ ಕ್ರಮಕೈಗೊಳ್ಳಲು ನಿಮಗೆ ಸಂಪೂರ್ಣ ಸ್ವಾತಂತ್ರ್ಯವಿದೆ ಎಂದು ಸಿಎಂ ಯಡಿಯೂರಪ್ಪ ಅವರು, ಬೊಮ್ಮನಹಳ್ಳಿ ವಲಯ ಉಸ್ತುವಾರಿ, ಸಚಿವ ಸುರೇಶ್ ಕುಮಾರ್ ಅವರಿಗೆ ಸೂಚಿಸಿದರು.
ಬೂತ್ ಮಟ್ಟದಲ್ಲಿ ಟ್ರೇಸಿಂಗ್
ಬೂತ್ ಮಟ್ಟದಲ್ಲಿ ಸ್ವಯಂ ಸೇವಕರ ತಂಡ ರಚಿಸಿ ಕಾಂಟಾಕ್ಟ್ ಟ್ರೇಸಿಂಗ್ನ್ನು ಪರಿಣಾಮಕಾರಿಯಾಗಿ ಮಾಡಲಾಗುತ್ತಿದೆ. ಬೊಮ್ಮನಹಳ್ಳಿ ವಲಯದಲ್ಲಿ ವಾರ್ಡ್ಗೆ 16 ಅಂಬುಲೆನ್ಸ್ಗಳ ಅಗತ್ಯವಿದ್ದು, ತಕ್ಷಣವೇ 10 ವಾಹನಗಳನ್ನು ಒದಗಿಸಬೇಕೆಂದು ಸಿಎಂಗೆ ಸುರೇಶ್ ಕುಮಾರ್ ಮನವಿ ಮಾಡಿದರು.
ಕೋವಿಡ್ ಪರೀಕ್ಷಾ ಫಲಿತಾಂಶ ಬರಲು ಪ್ರಸ್ತುತ 4 ರಿಂದ 5 ದಿನಗಳಾಗುತ್ತಿವೆ. ಆರೋಗ್ಯ ಇಲಾಖೆ ನಡೆಸಿದ್ದು, ಪರೀಕ್ಷಾ ಪ್ರಯೋಗಾಲಯಗಳ ಸಾಮರ್ಥ್ಯ ವನ್ನು ಪೂರ್ಣಪ್ರಮಾಣದಲ್ಲಿ ಬಳಸಿಕೊಂಡರೆ ಒಂದು ಇಲ್ಲವೇ ಎರಡು ದಿನಗಳಲ್ಲಿ ಪರೀಕ್ಷಾ ಫಲಿತಾಂಶ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳಿಗೆ ಸುರೇಶ್ ಕುಮಾರ್ ಹೇಳಿದರು.