ವಿಜಯ್ ಕುಮಾರ್ಗೆ ರಾಜಕೀಯ ನಾಯಕರು, ಅಭಿಮಾನಿಗಳ ಸಂತಾಪ
Recommended Video
ಬೆಂಗಳೂರು, ಮೇ 4: ಜಯನಗರ ಶಾಸಕ ಬಿ.ಎನ್. ವಿಜಯ್ ಕುಮಾರ್ ಅವರ ಹಠಾತ್ ನಿಧನ ರಾಜಕೀಯ ಪಕ್ಷಗಳ ನಾಯಕರು, ಅವರ ಕ್ಷೇತ್ರದ ಜನರು ಮತ್ತು ಅಭಿಮಾನಿಗಳಿಗೆ ಆಘಾತ ಮೂಡಿಸಿದೆ.
ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಆಸ್ಪತ್ರೆ ಹಾಗೂ ಮನೆ ಮುಂದೆ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಜಮಾಯಿಸಿದರು. ತಮ್ಮ ನೆಚ್ಚಿನ ನಾಯಕನ ಅಗಲಿಕೆಗೆ ದುಃಖದಿಂದ ಕಣ್ಣೀರಿಟ್ಟರು. ವಿಜಯ್ ಕುಮಾರ್ ಅಮರ್ ರಹೇ ಎಂಬ ಘೋಷಣೆ ಕೂಗಿದರು.
ಜಯನಗರ ಬಿಜೆಪಿ ಶಾಸಕ ವಿಜಯ್ ಕುಮಾರ್(60) ವಿಧಿವಶ
ವಿಜಯ್ ಕುಮಾರ್ ಅವರ ಮೃತದೇಹವನ್ನು ಆಸ್ಪತ್ರೆಯಿಂದ ಹೊರಕ್ಕೆ ತರುತ್ತಲೇ ಅಭಿಮಾನಿಗಳು ಮತ್ತು ಸಂಬಂಧಿಕರು ಮುತ್ತಿಕೊಂಡರು. ಅವರ ನಿವಾಸದಲ್ಲಿ ನೆರೆದ ಜನರ ಆಕ್ರಂದನ ಮುಗಿಲುಮುಟ್ಟಿತು.
ವಿಜಯಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಜಯನಗರ ಮಾತ್ರವಲ್ಲದೆ ರಾಜ್ಯದ ವಿವಿಧ ಭಾಗಗಳಿಂದಲೂ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಅವರ ಮನೆಯ ಸಮೀಪ ಪೊಲೀಸ್ ಬಿಗಿ ಭದ್ರತೆ ನಿಯೋಜಿಸಲಾಗಿದ್ದು, ಬ್ಯಾರಿಕೇಡ್ಗಳನ್ನು ಹಾಕಲಾಗಿದೆ. ಸರದಿಯಲ್ಲಿ ತೆರಳಿ ಅವರ ಅಂತಿಮ ದರ್ಶನ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಜಯನಗರದ ಜನಾನುರಾಗಿ ಶಾಸಕ ಬಿಎನ್ ವಿಜಯ್ ಕುಮಾರ್
ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ಪಕ್ಷಗಳು, ಮುಖಂಡರು ಮತ್ತು ಜನಸಾಮಾನ್ಯರು ವಿಜಯ್ ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಚಿತ್ರಗಳಲ್ಲಿ: ಸಜ್ಜನ ರಾಜಕಾರಣಿ ವಿಜಯಕುಮಾರ್ ಗೆ ಅಂತಿಮ ನಮನ
ಮಾಜಿ ಸಚಿವ ಸುರೇಶ್ ಕುಮಾರ್, ನಿರ್ಮಾಪಕ ಕೆ. ಮಂಜು ಹಾಗೂ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರು ಅಂತಿಮ ನಮನ ಸಲ್ಲಿಸಿದರು.
ಆಘಾತವಾಗಿದೆ: ಯಡಿಯೂರಪ್ಪ
ವಿಜಯ್ ಕುಮಾರ್ ಅವರ ನಿಧನದ ಸುದ್ದಿ ಕೇಳಿ ಆಘಾತವಾಗಿದೆ. ಅವರು ಅತ್ಯಂತ ಆದರ್ಶ ವ್ಯಕ್ತಿಯಾಗಿದ್ದರು. ಸರಳ ಸಜ್ಜನಿಕೆ, ತಮ್ಮ ನಿಸ್ಪೃಹ ವ್ಯಕ್ತಿತ್ವದಿಂದ ಅತ್ಯಂತ ಜನಪ್ರಿಯ ಮತ್ತು ಜನಾನುರಾಗಿಯಾಗಿದ್ದರು. ಈ ಬಾರಿ ಚುನಾವಣೆಯಲ್ಲಿ ಜಯನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರ ಆಯ್ಕೆ ಖಚಿತ ಎನ್ನುವಷ್ಟು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸಂತಾಪ ವ್ಯಕ್ತಪಡಿಸಿದ್ದಾರೆ.
ವಿಜಯ್ ಕುಮಾರ್ ಅವರಂತಹ ಆದರ್ಶ ನಾಯಕರನ್ನು ಪಕ್ಷ ಸದಾ ಸ್ಮರಿಸುತ್ತದೆ. ಪಕ್ಷನಿಷ್ಠೆ, ಸಂಘಟನಾ ಶಕ್ತಿ ಮತ್ತು ಮಾರ್ಗದರ್ಶನಗಳ ಮೂಲಕ ಅವರು ಪಕ್ಷದ ಅವಿಭಾಜ್ಯ ಅಂಗವಾಗಿದ್ದರು. ಸಂಕಷ್ಟಮಯ ಪರಿಸ್ಥಿತಿಗಳಲ್ಲಿ ಪಕ್ಷಕ್ಕೆ ಆಧಾರವಾಗಿದ್ದರು. ವೈಯಕ್ತಿಕವಾಗಿ ಆತ್ಮೀಯರಾಗಿದ್ದರು ಎಂದು ಯಡಿಯೂರಪ್ಪ ಹೇಳಿದ್ದಾರೆ.
ರವಿಕೃಷ್ಣಾ ರೆಡ್ಡಿ ಸಂತಾಪ
ಬಹಳ ನೋವಿನ ವಿಚಾರ. ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರೂ, ಈ ಬಾರಿಯ ಚುನಾವಣೆಯಲ್ಲಿ BJP ಪಕ್ಷದ ಅಭ್ಯರ್ಥಿಯೂ ಆಗಿದ್ದ ಸರಳ, ಸಜ್ಜನ, ಸಭ್ಯ ರಾಜಕಾರಣಿ ಬಿ.ಎನ್. ವಿಜಯ್ ಕುಮಾರ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ಕುಟುಂಬ ಮತ್ತು ಬಳಗದವರಿಗೆ ಹೃದಯಾಂತರಾಳದ ಸಂತಾಪಗಳು ಮತ್ತು ಅವರಿಗೆ ಈ ಅಗಲಿಕೆಯನ್ನು ಭರಿಸುವ ಶಕ್ತಿ ಸಿಗಲಿ ಎಂದು ಆಶಿಸುತ್ತೇನೆ ಎಂದು ಜಯನಗರ ಕ್ಷೇತ್ರದಲ್ಲಿ ವಿಜಯಕುಮಾರ್ ಅವರ ಎದುರಾಳಿಯಾಗಿದ್ದ ರವಿಕೃಷ್ಣಾ ರೆಡ್ಡಿ ದುಃಖ ವ್ಯಕ್ತಪಡಿಸಿದ್ದಾರೆ.
|
ಆರ್ಎಸ್ಎಸ್ ದುಃಖ
ಅವರು ನಿಷ್ಠಾವಂತ ಆರ್ಎಸ್ಎಸ್ ಕಾರ್ಯಕರ್ತ. ಅವರ ನಿಧನ ಅಘಾತ ತಂದಿದೆ. ಆರ್ಎಸ್ಎಸ್ ನ ಕ್ಷೇತ್ರೀಯ ಸರ ಸಂಚಾಲಕ ಬಿ.ನಾಗರಾಜ್ ಹೇಳಿದ್ದಾರೆ.
ವಿಜಯ್ ಕುಮಾರ್ ಚಿಕ್ಕಂದಿನಿಂದಲೂ ಸಂಘದ ಕಾರ್ಯಕರ್ತರಾಗಿದ್ದರು. ಅವರ ನಿಧನ ರಾಷ್ಟ್ರಕ್ಕೆ ತುಂಬಲಾಗದ ನಷ್ಟ ಎಂದು ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.
ವಿಜಯ್ ಕುಮಾರ್ ಬಹಳ ಸಜ್ಜನಿಕೆ ವ್ಯಕ್ತಿ. ಅವರ ಅಗಲಿಕೆ ನಿರೀಕ್ಷೆ ಮಾಡಿರಲಿಲ್ಲ. ಅವರ ಕುಟುಂಬಕ್ಕೆ ದೇವರು ಶಾಂತಿ ನೀಡಲಿ ಎಂದು ನಿರ್ದೇಶಕ ಟಿ.ಎನ್. ಸೀತಾರಾಮ್ ನೋವು ವ್ಯಕ್ತಪಡಿಸಿದರು.ಬಿಜೆಪಿಯ ಅಮಿತ್ ಮಾಳವೀಯ, ಶೋಭಾ ಕರಂದ್ಲಾಜೆ, ಸಿ.ಟಿ. ರವಿ, ಬಯೊಕಾನ್ ಮುಖ್ಯಸ್ಥೆ ಕಿರಣ್ ಮಜುಮ್ದಾರ್ ಶಾ, ಸಚಿವ ಕೃಷ್ಣಭೈರೇಗೌಡ ಮತ್ತಿತರರು ಸಂತಾಪ ವ್ಯಕ್ತಪಡಿಸಿದ್ದಾರೆ.
ಶಾಂತಿ ಸಿಗಲಿ: ಪ್ರಹ್ಲಾದ್ ಜೋಶಿ
ಧಣಿವರಿಯದ ಆತ್ಮಕ್ಕೆ ಶಾಂತಿ ಸಿಗಲಿ. ದುಃಖಕರ ಸಂಗತಿ. ನಮ್ಮ ಬೆಂಗಳೂರು ನಗರ ಮತ್ತು ಅಲ್ಲಿನ ಜನತೆಗೆ ಇಂದು ದುಃಖದ ದಿನ. ವಿಜಯ್ ಕುಮಾರ್ ಅವರು ಸೇವೆ ಸಲ್ಲಿಸಿದ್ದರು ಎಂದು ಬಿಜೆಪಿ ಮುಖಂಡ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.