ಕಾನೂನು ಸಚಿವ ಜೆ ಸಿ ಮಾಧುಸ್ವಾಮಿರಿಗೆ ಕೊವಿಡ್-19 ಪಾಸಿಟಿವ್
ಬೆಂಗಳೂರು, ಸಪ್ಟೆಂಬರ್,28: ಕರ್ನಾಟಕದಲ್ಲಿ ಕೊವಿಡ್-19 ಸೋಂಕಿನ ಹರಡುವಿಕೆ ಪ್ರಮಾಣ ಹೆಚ್ಚುತ್ತಿದೆ. ಇದರ ಮಧ್ಯೆ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಅವರಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆ ವೇಳೆ ದೃಢಪಟ್ಟಿದೆ.
ಸಚಿವ ಜೆ.ಸಿ ಮಾಧುಸ್ವಾಮಿ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತೀಚಿಗಷ್ಟೇ ಸಚಿವರ ಕಾರು ಚಾಲಕ ಮತ್ತು ಅಡುಗೆಯವರಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ಖಾತ್ರಿಯಾಗಿತ್ತು. ಇದರ ಬೆನ್ನಲ್ಲೇ ಸಚಿವರಿಗೂ ಸೋಂಕು ತಗುಲಿದೆ.
ಮಾಜಿ ಸಚಿವ ಹೆಚ್. ಕೆ. ಪಾಟೀಲ್ಗೆ ಕೋವಿಡ್ ಸೋಂಕು
ಸೋಮವಾರವಷ್ಟೇ ಮಾಜಿ ಸಚಿವ ಮತ್ತು ಕಾಂಗ್ರೆಸ್ ಹಿರಿಯ ನಾಯಕರೂ ಆಗಿರುವ ಹೆಚ್. ಕೆ. ಪಾಟೀಲ್ ಅವರಿಗೆ ಕೊವಿಡ್-19 ಸೋಂಕು ಪತ್ತೆಯಾಗಿತ್ತು. 10 ದಿನಗಳ ಕಾಲ ಅವರು ಮನೆಯಲ್ಲೇ ಕ್ವಾರಂಟೈನ್ ಆಗಲಿದ್ದಾರೆ. ಸೋಮವಾರ ಗದಗ ಕ್ಷೇತ್ರದ ಕಾಂಗ್ರೆಸ್ ಶಾಸಕ ಹೆಚ್. ಕೆ. ಪಾಟೀಲ್ ಟ್ವೀಟ್ ಮೂಲಕ ಈ ಕುರಿತು ಮಾಹಿತಿ ನೀಡಿದ್ದರು. ಯಾವುದೇ ರೋಗ ಲಕ್ಷಣಗಳು ಇಲ್ಲದಿದ್ದರೂ ಶಾಸಕರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ.
ಕರ್ನಾಟಕದಲ್ಲಿ 5.75 ಲಕ್ಷದ ಗಡಿ ದಾಟಿದ ಕೊವಿಡ್-19:
ರಾಜ್ಯದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 575566ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲೇ 9543 ಜನರಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆ ವೇಳೆ ಪತ್ತೆಯಾಗಿದೆ. ಕರ್ನಾಟಕದಲ್ಲಿ ಒಂದೇ ದಿನ ಕೊರೊನಾವೈರಸ್ ಸೋಂಕಿಗೆ 79 ಜನರು ಪ್ರಾಣ ಬಿಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 8582ಕ್ಕೆ ಏರಿಕೆಯಾಗಿದೆ. ಕೊವಿಡ್-19 ಸೋಂಕಿತ ಪ್ರಕರಣ ಸಂಬಂಧ ರಾಜ್ಯ ಆರೋಗ್ಯ ಮತ್ತು ಕುಟುಂಬ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿತ್ತು.
ಕೊರೊನಾವೈರಸ್ ಒಟ್ಟು 575566 ಸೋಂಕಿತ ಪ್ರಕರಣಗಳ ಪೈಕಿ 462241 ಸೋಂಕಿತರು ಗುಣಮುಖರಾಗಿದ್ದಾರೆ. 104724 ಸಕ್ರಿಯ ಪ್ರಕರಣಗಳಿವೆ ಎಂದು ತಿಳಿದು ಬಂದಿದೆ. ಕಳೆದ 24 ಗಂಟೆಗಳಲ್ಲಿ 6522 ಕೊವಿಡ್-19 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.
Recommended Video