ಹೊಸ ಭೂ ಸಾರಿಗೆ ತೆರಿಗೆ ಸಂಗ್ರಹ ಕೈಬಿಟ್ಟಿತೇ ಬಿಬಿಎಂಪಿ?
ಬೆಂಗಳೂರು, ಜನವರಿ 30: ಬಿಬಿಎಂಪಿ ಸಾರ್ವಜನಿಕರಿಗೆ ಹೊಸದಾಗಿ ಹೇರಲು ಹೊರಟಿರುವ ಭೂ ಸಾರಿಗೆ ತೆರಿಗೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಆಸ್ತಿ ತೆರೆಗೆಯೊಂದಿಗೆ ಶೇ.2ರಷ್ಟು ಭೂ ಸಾರಿಗೆ ಉಪ ಕರ ವಸೂಲಿ ಮಾಡುವ ಬಿಬಿಎಂಪಿ ನಿರ್ಣಯಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆ ಉಲ್ಟಾ ಹೊಡೆದ ಬಿಬಿಎಂಪಿಯು ಆಡಳಿತ ಪಕ್ಷ ಬಿಜೆಪಿ, ಭೂ ಸಾರಿಗೆ ಸೆಸ್ ಸಂಗ್ರಹವನ್ನು ಸದ್ಯಕ್ಕೆ ಕೈಬಿಡುವುದಾಗಿ ತಿಳಿಸಿದೆ.
ಹೆಚ್ಚುವರಿ ಸೆಸ್ ನಿರ್ಣಯಕ್ಕೆ ಸಾರ್ವಜನಿಕರಿಂದ ಆಕ್ರೋಶ
ಶೇ.2ರಷ್ಟು ಹೆಚ್ಚುವರಿ ಸೆಸ್ ಸಂಗ್ರಹಿಸುವ ಬಿಬಿಎಂಪಿ ನಿರ್ಣಯಕ್ಕೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಬುಧವಾರ ಕೆಂಪೇಗೌಡ ಪೌರ ಸಭಾಂಗಣದಲ್ಲಿ ಮಾಸಿಕ ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ದುಪ್ಪಟ್ಟು ತೆರಿಗೆಯಿಂದ ಮೂಲ ಆದಾಯ ವೃದ್ಧಿಗೆ ಬಿಬಿಎಂಪಿ ತಂತ್ರಗಾರಿಕೆ
2013ರಲ್ಲಿ ಭೂ ಸಾರಿಗೆ ಕರದ ಬಗ್ಗೆ ಪ್ರಸ್ತಾಪ
ಕಳೆದ 2013ರಿಂದ ಆಸ್ತಿ ತೆರಿಗೆಯೊಂದಿಗೆ ಶೇ.2 ರಷ್ಟು ಭೂ ಸಾರಿಗೆ ಸಂಗ್ರಹಿಸುವ ಪ್ರಸ್ತಾವನೆ ಬಿಬಿಎಂಪಿ ಮುಂದಿಟ್ಟಿತ್ತು. ಕಳೆದ ಏಳು ವರ್ಷದಿಂದ ಬಿಬಿಎಂಪಿ ಈ ಪ್ರಸ್ತಾವನೆಯನ್ನು ಮುಂದೂಡಿಕೊಂಡು ಬಂದಿತ್ತು. ಆದರೆ, ಮಂಗಳವಾರ ನಡೆದ ವಿಷಯಾಧಾರಿತ ಸಭೆಯಲ್ಲಿ ಆಡಳಿತಾರೂಢ ಬಿಜೆಪಿ ಶೇ.2ರಷ್ಟು ಭೂ ಸಾರಿಗೆ ಸೆಸ್ ವಸೂಲಿ ಮಾಡುವ ನಿರ್ಣಯ ತೆಗೆದುಕೊಂಡಿತ್ತು.
ಭೂ ಸಾರಿಗೆ ಕರದಿಂದ ವರ್ಷಕ್ಕೆ 150 ಕೋಟಿ ಹೆಚ್ಚುವರಿ ಆದಾಯ
ಜೊತೆಗೆ ಈ ಸೆಸ್ನಿಂದ ಪ್ರತಿ ವರ್ಷ 150 ಕೋಟಿ ರೂ. ಹೆಚ್ಚುವರಿಯಾಗಿ ಸಂಗ್ರಹವಾಗುವ ಸಂಪನ್ಮೂಲವನ್ನು ಪಾಲಿಕೆಯಿಂದ ಕೈಗೊಳ್ಳುವ ವಿವಿಧ ಅಭಿವೃದ್ಧಿ ಕಾಮಗಾರಿಗೆ ಬಳಕೆ ಮಾಡಿಕೊಳ್ಳುವುದಕ್ಕೆ ಸರ್ಕಾರದ ಅನುಮೋದನೆಗೆ ಕಳುಹಿಸುವಂತೆ ಆಯುಕ್ತರಿಗೆ ಸೂಚಿಸಲಾಗಿತ್ತು.
ಹೊಸ ಸೆಸ್ ಸಂಗ್ರಹ ಸದ್ಯಕ್ಕಿಲ್ಲ
ಭೂ ಸಾರಿಗೆ ಸೆಸ್ ವಿಧಿಸುವುದಾಗಿ ಹೇಳಿದ್ದ ಮೇಯರ್ ಗೌತಮ್ ಕುಮಾರ್ ಹಾಗೂ ಆಡಳಿತ ಪಕ್ಷ ಬಿಜೆಪಿ, ಸಾರ್ವಜನಿಕರ ವಿರೋಧ ಹಾಗೂ ವಿಪಕ್ಷದವರ ಪ್ರತಿಭಟನೆಗೆ ಅಂಜಿದ್ದು, ಆಸ್ತಿ ತೆರಿಗೆಯೊಂದಿಗೆ ಹೆಚ್ಚುವರಿಯಾಗಿ ಶೇ.2 ರಷ್ಟು ಭೂ ಸಾರಿಗೆ ಸೆಸ್ ಸಂಗ್ರಹಿಸುವ ತೀರ್ಮಾನವನ್ನು ಕೈಬಿಡುವ ತೀರ್ಮಾನ ತೆಗೆದುಕೊಂಡರು.