ಮೂರು ತಾಲೂಕಿನಲ್ಲಿ 'ಲ್ಯಾಂಡ್ ಟೈಟ್ಲಿಂಗ್ ಪ್ರಾಜೆಕ್ಟ್ : ಏನಿದು ಯೋಜನೆ?
ಬೆಂಗಳೂರು, ಆಗಸ್ಟ್ 17: ಭೂಮಾಲೀಕತ್ವವನ್ನು ಅನುಮಾನಕ್ಕೆ ಎಡೆ ಇಲ್ಲದಂತೆ ಖಾತ್ರಿಪಡಿಸುವ ಭೂಮಾಲೀಕತ್ವ ಖಾತ್ರಿ ಯೋಜನೆ (ಲ್ಯಾಂಡ್ ಟೈಟ್ಲಿಂಗ್)ಯನ್ನು ರಾಜ್ಯದ 3 ತಾಲೂಕುಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಆರ್ ವಿ ದೇಶಪಾಂಡೆ ಶುಕ್ರವಾರ ತಿಳಿಸಿದ್ದಾರೆ.
ಇದರ ಅನ್ವಯ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ಹಾಸನ ಜಿಲ್ಲೆಯ ಹಾಸನ ಮತ್ತು ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕುಗಳನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಹಳಿಯಾಳ ಕ್ಷೇತ್ರದಲ್ಲಿ ಮತ್ತೆ ಅಧಿಕಾರ ಪಡೆದ ಆರ್.ವಿ.ದೇಶಪಾಂಡೆ
ಭೂಮಾಲೀಕತ್ವ ಖಾತ್ರಿ ಯೋಜನೆಯನ್ವಯ ಸರ್ವೆ ಮತ್ತು ಕಂದಾಯ ಇಲಾಖೆಯ ದಾಖಲೆಗಳನ್ನು ಹೋಲಿಸಿ, ಪರಿಶೀಲಿಸಲಾಗುವುದು. ಬಳಿಕ ಆರ್.ಟಿ.ಸಿ.ಯನ್ನು ಇಂದೀಕರಿಸಿ (ಅಪ್ಡೇಟ್) ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸದಂತೆ ಕಾನೂನಿನ ಬೆಂಬಲವನ್ನು ನೀಡಲಾಗುವುದು ಎಂದು ಸಚಿವರು ವಿವರಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚುನಾವಣೆಗೂ ಮುನ್ನ ಮಂಡಿಸಿದ 2018-19ನೇ ಸಾಲಿನ ಬಜೆಟ್ನಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸುವುದಾಗಿ ಘೋಷಿಸಿದ್ದರು.