ವಿಶೇಷ ನ್ಯಾಯಾಲಯ ಸ್ಥಾಪನೆಗೆ ಎಎಪಿ ಆಗ್ರಹ
ಬೆಂಗಳೂರು, ಫೆ.24: ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಜಮೀನುಗಳನ್ನು ವಾಪಸ್ಸು ಪಡೆಯಲು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಬೇಕೆಂದು ಕರ್ನಾಟಕ ಸರ್ಕಾರವನ್ನು ಆಮ್ ಆದ್ಮಿ ಪಕ್ಷ, ಕರ್ನಾಟಕ ಆಗ್ರಹಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಎಎಪಿ ಕರ್ನಾಟಕ ವಕ್ತಾರರಾದ ರವಿಕೃಷ್ಣಾ ರೆಡ್ಡಿ, ಶಿವಕುಮಾರ್ ಹಾಗೂ ಶಾಂತಲಾ ದಾಮ್ಲೆ ಅವರು ಮಾತನಾಡಿ ಭೂಕಬಳಿಕೆ ಪ್ರಕರಣಗಳ ಅಂಕಿ ಅಂಶಗಳನ್ನು ಬಹಿರಂಗಗೊಳಿಸಿದರು.
883 ಭೂಕಬಳಿಕೆಯ ಪ್ರಕರಣಗಳು ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ದಾಖಲಿಸಲಾಗಿದೆ, ಅವುಗಳಲ್ಲಿ 332 ಪ್ರಕರಣಗಳು ಇನ್ನೂ ಇತ್ಯರ್ಥವಾಗದೇ ಉಳಿದಿವೆ. ಬೆಂಗಳೂರು ಹೊರವಲಯದಲ್ಲಿ ಒಂದು ಎಕರೆ ಜಮೀನಿನ ಬೆಲೆ ಸರಾಸರಿ 1 ಕೋಟಿ ರೂಪಾಯಿಯಾದರೆ, ಬೆಂಗಳೂರು ನಗರದಲ್ಲಿ 10 ಕೋಟಿಗೂ ಹೆಚ್ಚು ಬೆಲೆ ಬಾಳುತ್ತವೆ. ಈ ಎಲ್ಲ ಒತ್ತುವರಿಯಾದ ಜಮೀನುಗಳನ್ನು ಸರ್ಕಾರ ವಶಪಡಿಸಿಕೊಂಡು ನಿವೇಶನಗಳನ್ನು, ಮನೆಗಳನ್ನು ನಿರ್ಮಾಣ ಮಾಡಿದಲ್ಲಿ 15-20 ಲಕ್ಷ ಜನರಿಗೆ ಸೂರು ಸಿಗುತ್ತದೆ.
ಆದರೆ, ರಾಜ್ಯದ ಕಾಂಗ್ರೆಸ್ ಸರ್ಕಾರ ರಾಜಕೀಯ ಇಚ್ಛಾಶಕ್ತಿ ತೋರದೆ ಕಾನೂನು ಪ್ರಕ್ರಿಯೆಯನ್ನು ನಿಧಾನಗೊಳಿಸಿದ್ದು ಭ್ರಷ್ಟ ಹಾಗೂ ಪ್ರಭಾವಿ ಭೂ ಮಾಫಿಯಾದ ಬೆಂಬಲಕ್ಕೆ ನಿಂತಿದೆ.
ಆಮ್ ಆದ್ಮಿ ಪಕ್ಷವು ರಾಜ್ಯ ಸರ್ಕಾರ ತಕ್ಷಣ ಭೂ ಒತ್ತುವರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ವಿಧಾನಸಭೆಯ ಎರಡು ಮನೆಗಳಲ್ಲಿ ಬಹುಮತದಿಂದ ಅಂಗೀಕಾರವಾಗಿದ್ದ ಕರ್ನಾಟಕ ಭೂ ಒತ್ತುವರಿ (ನಿಷೇಧ) ಕಾಯ್ದೆ 2007ನ್ನು ಜಾರಿ ಮಾಡಬೇಕು ಎಂದು ಆಗ್ರಹಿಸುತ್ತದೆ.
ಈ ಕಾಯ್ದೆಯು ವ್ಯವಸ್ಥಿತವಾಗಿ ನಡೆಯುತ್ತಿರುವ ಭೂಕಬಳಿಕೆಯನ್ನು ನಿಲ್ಲಿಸುವುದಲ್ಲದೆ ತಪ್ಪಿತಸ್ಥರಿಗೆ ಮೂರು ವರ್ಷಗಳ ಕಠಿಣ ಶಿಕ್ಷೆಯನ್ನು ನೀಡುತ್ತದೆ. ಈ ಮಸೂದೆಯ ಕುರಿತು ಕೇಂದ್ರ ಸರ್ಕಾರವು ಕೆಲವು ಸ್ಪಷ್ಟನೆಗಳನ್ನು ಕೇಳಿದ್ದು ಈ ಮಸೂದೆ ಇನ್ನೂ ರಾಷ್ಟ್ರಪತಿಗಳ ಅಂಗೀಕಾರ ಪಡೆಯಬೇಕಾಗಿದೆ. ಆದರೆ ರಾಜಕೀಯ ಇಚ್ಛಾಶಕ್ತಿ ಇಲ್ಲದ ರಾಜ್ಯ ಕಾಂಗ್ರೇಸ್ ಸರ್ಕಾರ ಈ ವಿಷಯದಲ್ಲಿ ಸಮಯ ತಳ್ಳುವ ನೀತಿಯನ್ನು ಅನುಸರಿಸುತ್ತಿದ್ದು, ನೇರವಾಗಿ ಭೂಗಳ್ಳರ ರಕ್ಷಣೆಗೆ ನಿಂತಿದೆ.
ಕರ್ನಾಟಕ ಭೂ ಕಂದಾಯ ಕಾಯ್ದೆಯ ಪ್ರಕಾರ ಬೆಂಗಳೂರು ಮಹಾನಗರ ಪಾಲಿಕೆಯ ಹೊರಹೊಲಯದಿಂದ 18 ಕಿ.ಮಿ.ಗಳ ದೂರದವರೆಗಿನ ಯಾವುದೇ ಸರ್ಕಾರಿ ಜಮೀನನ್ನು ಕ್ರಮಬದ್ಧಗೊಳಿಸುವಂತಿಲ್ಲ. ಆದರೆ ಶ್ರೀಮಂತರಿಗೆ, ಜಮೀನ್ದಾರರಿಗೆ, ರಾಜಕೀಯ ನಾಯಕರಿಗೆ, ಅವರ ಹಿಂಬಾಲಕರಿಗೆ, ಮಾಜಿ ಗೃಹ ಮಂತ್ರಿಗಳಿಗೆ, ಮಾಜಿ ಮಹಾಪೌರರಿಗೆ ಹಾಗೂ ಅವರ ಕುಟುಂಬದ ಎಲ್ಲಾ ಸದಸ್ಯರಿಗೆ ಅಕ್ರಮವಾಗಿ ಮಂಜೂರು ಮಾಡಲಾಗಿದೆ. ಬೆಂಗಳೂರು ಸುತ್ತಮುತ್ತ ತಲೆಯೆತ್ತುತ್ತಿರುವ ಐಶಾರಾಮಿ ವಸತಿ ಸಮುಚ್ಛಯಗಳು 18 ಕಿ.ಮಿ. ಸುತ್ತಳತೆಯಲ್ಲಿಯೇ ಬರುತ್ತವೆ.
ಸರ್ಕಾರ ಕೂಡಲೇ ಒತ್ತುವರಿಯಾದ ಎಲ್ಲ ಸರ್ಕಾರಿ ಭೂಮಿಯನ್ನು ವಶಪಡಿಸಿಕೊಳ್ಳಬೇಕು ಎಂದು ಆಮ್ ಆದ್ಮಿ ಪಕ್ಷವು ಆಗ್ರಹಿಸುತ್ತದೆ. ಹೀಗೆ ಮಾಡುವುದರಿಂದ
* ವಸತಿ ಉದ್ದೇಶಗಳಿಗಾಗಿ ಭೂಸ್ವಾಧೀನ ಪಡಿಸಿಕೊಳ್ಳಬೇಕಾದ ಆವಶ್ಯಕತೆ ಬರುವುದಿಲ್ಲ
* ನೂರಾರು ಶಾಲೆಗಳು, ಆಸ್ಪತ್ರೆಗಳು, ಉದ್ಯಾನಗಳು, ಆಟದ ಮೈದಾನಗಳು ಹಾಗೂ ಸಮುದಾಯ ಭವನಗಳ ನಿರ್ಮಾಣಕ್ಕೆ ಅವಕಾಶವಾಗುವುದು
* ಅಂದಾಜು 8 ಲಕ್ಷ ವಸತಿ ನಿವೇಶನಗಳ ನಿರ್ಮಾಣದಿಂದ ಸುಮಾರು 30 ಲಕ್ಷ ಜನರಿಗೆ ಸೂರು ಸಿಗುತ್ತದೆ.