ಲಾಲ್ಬಾಗ್ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ: ಥೀಮ್ ಏನು?
ಬೆಂಗಳೂರು, ಜನವರಿ 14: ಲಾಲ್ಬಾಗ್ನಲ್ಲಿ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ ಸನ್ನಿಹಿತವಾಗಿದೆ. ಜನವರಿ 17 ರಿಂದ 10 ದಿನಗಳ ಕಾಲ ನಡೆಯಲಿದೆ.
ರಾಜ್ಯ ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನ ಕಲಾ ಸಂಘವು ಪುಷ್ಪ ಪ್ರದರ್ಶನ ಏರ್ಪಡಿಸುತ್ತಿದ್ದು ಸ್ವಾಮಿ ವಿವೇಕಾನಂದರ ಸಂಪೂರ್ಣ ಇತಿಹಾಸವನ್ನು ಈ ಬಾರಿ ಬಿಂಬಿಸಲಾಗುತ್ತಿದೆ.
ಅವರ ಜೀವನ , ಸಂದೇಶಗಳು, ಹಿಂದೂ ಧರ್ಮದ ಪ್ರಚಾರ ಹಾಗೂ ಇಡೀ ಜೀವನವನ್ನು ಫಲಪುಷ್ಪಗಳ ಮೂಲಕ ಅನಾವರಣಗೊಳಿಸಲಾಗುತ್ತದೆ.
ಲಾಲ್ಬಾಗ್ನ ಗಾಜಿನ ಮನೆಯಲ್ಲಿ ಹತ್ತು ದಿನಗಳ ಕಾಲ ನಡೆಯುವ ಫಲಪುಷ್ಪ ಪ್ರದರ್ಶನಕ್ಕೆ ಸುಮಾರು 1.9 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಊಟಿ, ಡಾರ್ಜಿಲಿಂಗ್ ಮತ್ತು ಕೇರಳ ಮಾತ್ರವಲ್ಲದೆ ದೇಶದ ವಿವಿಧ ರಾಜ್ಯಗಳಿಂದ ಆರು ಲಕ್ಷ ಗುಲಾಬಿ ಹೂವುಗಳನ್ನು ತರಿಸಿಕೊಳ್ಳಲಾಗುತ್ತಿದೆ.
ಅಲ್ಲದೆ, ಪ್ರತಿ ದಿನ ಹೊಸದಾಗಿ ಕಾಣಿಸಬೇಕು ಎಂಬ ಕಾರಣದಿಂದ ಹೂವನ್ನು ಬದಲಾಯಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕನ್ಯಾಕುಮಾರಿ ಸ್ಮಾರಕ: ಭಾರತದ ದಕ್ಷಿಣದ ತತ್ತತುದಿಯನ್ನು ಪ್ರತಿನಿಧಿಸುವ ಕನ್ಯಾಕುಮಾರಿಯಲ್ಲಿರುವ ಸ್ಮಾರಕ ಶಿಲಾ ಬಂಡೆಯ ಮೇಲೆ ಸ್ವಾಮಿ ವಿವೇಕಾನಂದರು ನಿಂತಿರುವ ದೃಶ್ಯ ಫಲಪುಷ್ಪ ಪ್ರದರ್ಶನದ ಕೇಂದ್ರ ಬಿಂದುವಾಗಿದೆ. ಗಾಜಿನ ಮನೆಯ ಮಧ್ಯಭಾಗದಲ್ಲಿ ಧ್ಯಾನ ಕೇಂದ್ರದ ಪ್ರತಿಕೃತಿಯನ್ನು ನಿರ್ಮಿಸಲಾಗುತ್ತದೆ.