'ಲಾಲ್ಬಾಗ್ನಲ್ಲಿ ಕಣ್ಮನ ಸೆಳೆಯುತ್ತಿದೆ ವಿವೇಕ ಪುಷ್ಪ ಪ್ರದರ್ಶನ'
ಬೆಂಗಳೂರು, ಜನವರಿ 17: ಸುಪ್ರಸಿದ್ದ ಬೆಂಗಳೂರಿನ ಲಾಲ್ಬಾಗ್ನಲ್ಲಿ ಆಯೋಜಿಸಿರುವ 2020 ರ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ದೊರಕಿದೆ.
Recommended Video
ಶುಕ್ರವಾರ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಲಾಲ್ಬಾಗ್ನ ಗಾಜಿನ ಮನೆಯಲ್ಲಿ ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಿದರು.
ಚಿತ್ರಗಳಲ್ಲಿ: ಗಣರಾಜ್ಯೋತ್ಸವಕ್ಕೆ ಹೂವಗಳಲ್ಲಿ ಅರಳಿದ 'ವಿವೇಕ'
ಜನವರಿ 17 ರಿಂದ ಜನವರಿ 26 ರವರೆಗೆ ಗಣರಾಜ್ಯೋತ್ಸವದ ಪ್ರಯುಕ್ತ ಈ ಪ್ರದರ್ಶನ ನಡೆಯಲಿದೆ. ಸ್ವಾಮಿ ವಿವೇಕಾನಂದರ 157ನೇ ಜನ್ಮದಿನಾಚರಣೆ ಸ್ಮರಣಾರ್ಥ "ವಿವೇಕ ಪುಷ್ಪ ಪ್ರದರ್ಶನ' ಪ್ರದರ್ಶನದ ಮುಖ್ಯ ಭಾಗವಾಗಿದೆ. ಉದ್ಯಾನದ ಗಾಜಿನ ಮನೆಯಲ್ಲಿ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ, ಬೋಧನೆಗಳು ಹೂವಿನ ಚಿತ್ತಾರದಲ್ಲಿ ಅರಳಿವೆ. ಮೈಸೂರು ಉದ್ಯಾನ ಕಲಾ ಸಂಘ ಹಾಗೂ ರಾಜ್ಯ ತೋಟಗಾರಿಕೆ ಇಲಾಖೆ ಜಂಟಿಯಾಗಿ 210 ಮಳಿಗೆಗಳಲ್ಲಿ ಫಲಪುಷ್ಪ ಪ್ರದರ್ಶನಗಳನ್ನು ಆಯೋಜಿಸಿವೆ.
ಲಾಲ್ಬಾಗ್ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ: ಥೀಮ್ ಏನು?
ಪ್ರದರ್ಶನದ ಮೊದಲ ದಿನ ವೀಕ್ಷಣೆಗೆ ಬಂದವರ ಸಂಖ್ಯೆ ತೀರಾ ಕಡಿಮೆ ಇತ್ತು. ಶನಿವಾರ ಮತ್ತು ಭಾನುವಾರ ಭಾರೀ ಸಂಖ್ಯೆಯಲ್ಲಿ ಜನ ಲಾಲ್ಬಾಗ್ನತ್ತ ದೌಡಾಯಿಸುವ ನಿರೀಕ್ಷೆಯಿದೆ. ಈ ಬಾರಿ ಆರು ಲಕ್ಷಕ್ಕೂ ಅಧಿಕ ಜನ ಪ್ರದರ್ಶನಕ್ಕೆ ಬರಬಹುದು ಎಂದು ಅಂದಾಜಿಸಲಾಗಿದೆ. ಕಾರ್ಯಕ್ರಮದಲ್ಲಿ ರಾಮಕೃಷ್ಣ ಆಶ್ರಮದ ಹರ್ಷಾನಂದ ಸ್ವಾಮೀಜಿ, ವಸತಿ ಸಚಿವ ವಿ ಸೋಮಣ್ಣ, ಸಂಸದ ತೇಜಸ್ವಿ ಸೂರ್ಯ, ಶಾಸಕ ಉದಯ್ ಗರುಡಾಚಾರ್, ಮೇಯರ್ ಗೌತಮ ಕುಮಾರ್, ತೋಟಗಾರಿಕೆ ಇಲಾಖೆಯ ನಿರ್ದೇಶಕ ಡಾ. ಬಿ. ವೆಂಕಟೇಶ್ ಇದ್ದರು.
16 ಅಡಿ ವಿವೇಕಾನಂದರ ಪ್ರತಿಮೆ
ಪ್ರದರ್ಶನದಲ್ಲಿ ಪ್ರಮುಖವಾಗಿ ಕನ್ಯಾಕುಮಾರಿ ವಿವೇಕಾನಂದ ಸ್ಮಾರಕ, ಷಿಕಾಗೋ ವಿವೇಕಾನಂದ ಸ್ಮಾರಕ ಸೇರಿ ವಿವೇಕರ ಗುರುಗಳಾದ ರಾಮಕೃಷ್ಣ ಪರಮಹಂಸರ ಹೂವಿನಿಂದ ಮಾಡಿದ ವಿವಿಧ ಪ್ರತಿಕೃತಿಗಳನ್ನು ನಿರ್ವಿುಸಲಾಗಿದೆ. ಅದರಲ್ಲೂ ಪ್ರಮುಖವಾಗಿ ಗುಲಾಬಿ ಹಾಗೂ ಸೇವಂತಿಗೆ ಹೂವಿನಿಂದ ಮಾಡಲಾಗಿರುವ ವಿವೇಕಾನಂದರ ಕನ್ಯಾಕುಮಾರಿ ಸ್ಮಾರಕ ಜನರ ಕಣ್ಮನ ಸೆಳೆಯುತ್ತಿದೆ. ಇದರ ಮುಂದೆ 16 ಅಡಿ ಎತ್ತರದ ವಿವೇಕಾನಂದರ ಆಕರ್ಷಕ ಪ್ರತಿಮೆ ನಿಲ್ಲಿಸಲಾಗಿದೆ.
1.6 ಲಕ್ಷ ಹೂವು ಬಳಕೆ
ವಿವೇಕಾನಂದರು ಭೇಟಿ ನೀಡಿದ ಕನ್ಯಾಕುಮಾರಿ ದೇವಸ್ಥಾನವನ್ನು 1.6 ಲಕ್ಷ ಹೂವು ಬಳಸಿ ನಿರ್ವಿುಸಲಾಗಿದೆ. ಇದು 21 ಅಡಿ ಉದ್ದ, 17 ಅಡಿ ಎತ್ತರದಿಂದ ಕೂಡಿದ್ದು ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿದೆ. ಇದಕ್ಕಾಗಿ 75 ಸಾವಿರ ಕೆಂಪು, ಬಿಳಿ, ಹಳದಿ ಗುಲಾಬಿ ಹೂವುಗಳು, 75 ಸಾವಿರ ಸೇವಂತಿಗೆ, 3 ಸಾವಿರ ವಿವಿಧ ಜಾತಿಯ ಎಲೆಗಳು, 2 ಸಾವಿರ ವಿಶೇಷ ಹೂ ಗಳನ್ನು ಬಳಸಿ ಅದ್ಭುತ ಕಲಾಕೃತಿ ನಿರ್ವಿುಸಲಾಗಿದೆ.
ಲಾಲ್ಬಾಗ್ನಲ್ಲಿ ಮೈಸೂರು ದಸರಾ ದರ್ಬಾರ್ ನೋಡ ಬನ್ನಿ
ಟಿಕೆಟ್ ರೇಟ್ ಏನಿದೆ?
ಈ ಪ್ರದರ್ಶನ ವೀಕ್ಷಿಸಲು ವಯಸ್ಕರಿಗೆ 70 ರೂ. ಹಾಗೂ ಮಕ್ಕಳಿಗೆ 20 ರೂ. ನಿಗದಿಪಡಿಸಲಾಗಿದೆ. ಉದ್ಯಾನದ ಎಲ್ಲ ಪ್ರವೇಶ ದ್ವಾರಗಳಲ್ಲಿ ಟಿಕೆಟ್ ಲಭ್ಯವಿರಲಿವೆ. ಬೆಳಗ್ಗೆ 9 ರಿಂದ 6.30ರ ವರೆಗೆ ಮಾತ್ರ ಟಿಕೆಟ್ ನೀಡಲಾಗುವುದು. ಸಾರ್ವಜನಿಕರ ಹಿತದೃಷ್ಟಿಯಿಂದ ಒಂದು ಅಗ್ನಿ ಶಾಮಕ ದಳ, ಪ್ಯಾರಾ ಮೆಡಿಕಲ್ಫೋರ್ಸ್ ಒಳಗೊಂಡ 5 ಆಂಬುಲೆನ್ಸ್, 108 ಸಿಸಿ ಕ್ಯಾಮರಾ 37 ಪ್ರಥಮ ಚಿಕಿತ್ಸಾ ಪೆಟ್ಟಿಗೆ ಸೌಲಭ್ಯ ಕಲ್ಪಿಸಲಾಗಿದೆ.
ಸಿಎಂ ಏನಂದ್ರು?
ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು, ನಾಡಿನ ತುಂಬ ಹೆಸರುವಾಸಿಯಾಗಿರುವ ಲಾಲ್ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿ ವಿಶೇಷವಾಗಿ ವಿವೇಕಾನಂದರ ಬಗ್ಗೆ ಹೂವಿನಲ್ಲಿ ತೋರಿಸುತ್ತಿರುವುದು ಅದ್ಭುತ ಎನಿಸಿದೆ. ಸಾಧ್ಯವಾದಷ್ಟು ಹೆಚ್ಚು ಜನ ಆಗಮಿಸಿ ಕಣ್ತುಂಬಿಕೊಳ್ಳಬೇಕು ಎಂದು ಹೇಳಿದರು.