ಸುಂದರ ತಾಣವಾಗಬೇಕಿದೆ ಕೆಂಪೇಗೌಡರ ಈ ಐಕ್ಯ ಸ್ಥಳ, ಅವರು ಕಟ್ಟಿದ ಕೆರೆಗಳು...
ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ 511ನೇ ಜಯಂತಿಯನ್ನು (ಜೂ.27)ರಂದು ಆಚರಿಸಲಾಗುತ್ತಿದೆ. ಈ ಸಂದರ್ಭವೇ ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆಯ ಶಿಲಾನ್ಯಾಸ ಹಾಗೂ ಸೆಂಟ್ರಲ್ ಪಾರ್ಕ್ ಕಾಮಗಾರಿಯ ಭೂಮಿ ಪೂಜೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನಲ್ಲಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಮುಂದಿನ ದಿನಗಳಲ್ಲಿ 108 ಅಡಿ ಎತ್ತರದ ಕೆಂಪೇಗೌಡರ ಪ್ರತಿಮೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಅದ್ಭುತ ಸುಂದರ ತಾಣವೊಂದು ನಿರ್ಮಾಣವಾಗಲಿದ್ದು ಹಲವು ವೈಶಿಷ್ಟ್ಯಗಳಿಂದ ಜನಮನ ಸೆಳೆಯಲಿದೆ. ಆದರೆ ಇದೆಲ್ಲದರ ನಡುವೆ ಕೆಂಪೇಗೌಡರು ಐಕ್ಯವಾದ ಸ್ಥಳ ಮತ್ತು ಅವರು ನಿರ್ಮಿಸಿದ ಕೆರೆಗಳನ್ನು ಸರ್ಕಾರ ಅಭಿವೃದ್ಧಿ ಪಡಿಸುವ ಕಾರ್ಯಕ್ಕೆ ಮುಂದಾಗುವುದು ಕೂಡ ಅಷ್ಟೇ ಮುಖ್ಯವಾಗಿದೆ.
LIVE ಪ್ರಸಾರ: ಕೆಐಎಎಲ್ ನಲ್ಲಿ ಕೆಂಪೇಗೌಡ ಪ್ರತಿಮೆಗೆ ಭೂಮಿ ಪೂಜೆ
ನಿರ್ಲಕ್ಷ್ಯದಲ್ಲಿ ಕೆಂಪೇಗೌಡರ ಸಮಾಧಿ
ಕೆಂಪೇಗೌಡರು ಐಕ್ಯವಾಗಿರುವ ಮಾಗಡಿ ತಾಲೂಕಿನ ಕೆಂಪಾಪುರವು ಹಲವು ರೀತಿಯಲ್ಲಿ ಗಮನಾರ್ಹ ಸ್ಥಳವಾಗಿದ್ದು, ಇಲ್ಲಿ ಕೆಂಪೇಗೌಡರ ಸಮಾಧಿಯಿದೆ. ಜತೆಗೆ ಅವರು ನಿರ್ಮಿಸಿದ ಕೆಂಪಸಾಗರ ಕೆರೆಯೂ ಇದೆ. ಒಂದು ವೇಳೆ ಸಮಾಧಿ ಹಾಗೂ ಪಕ್ಕದ ಕೆರೆಯನ್ನು ಅಭಿವೃದ್ಧಿಗೊಳಿಸಿದ್ದೇ ಆದರೆ ಸುಂದರ ಪ್ರವಾಸಿ ತಾಣವಾಗುವುದರಲ್ಲಿ ಎರಡು ಮಾತಿಲ್ಲ.
ಸಮಾಧಿಯನ್ನು ಅಭಿವೃದ್ಧಿಗೊಳಿಸುವ ಮಾತುಗಳು ಕೆಂಪೇಗೌಡರ ಜನ್ಮದಿನದಂದು ಪ್ರತಿ ವರ್ಷವೂ ಕೇಳಿ ಬರುತ್ತಲೇ ಇರುತ್ತದೆ. ಕೆಲವು ದಿನಗಳ ಹಿಂದೆಯಷ್ಟೆ ಉಪ ಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಅವರು ಸಮಾಧಿ ಸ್ಥಳವನ್ನು 15 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸುವ ಭರವಸೆ ನೀಡಿದ್ದಾರೆ.ಭರವಸೆಗಳಲ್ಲೇ ಉಳಿದುಹೋದ ಅಭಿವೃದ್ಧಿ
ಇಂತಹ ಭರವಸೆಗಳ ಮಾತುಗಳು ಇಂದು ನಿನ್ನೆಯದಲ್ಲ. ಪ್ರತಿ ಸರ್ಕಾರಗಳು ಅಧಿಕಾರಕ್ಕೆ ಬಂದಾಗಲೆಲ್ಲ ಇದನ್ನು ಹೇಳುತ್ತಲೇ ಇವೆ. ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವಿದ್ದಾಗ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರವನ್ನು ರಚನೆ ಮಾಡಿ, ಮೊದಲ ಹಂತವಾಗಿ ಐದು ಕೋಟಿ ಹಣವನ್ನು ಮೀಸಲಿಟ್ಟಿದ್ದರು. ಆದರೆ ಅದು ಕೇವಲ ಘೋಷಣೆಯಾಗಿಯೇ ಉಳಿದು ಹೋಯಿತು. ಒಂದು ರೂಪಾಯಿ ಕೂಡ ಬಳಕೆಯಾಗಲೇ ಇಲ್ಲ.
ಇನ್ನು ಕೆಂಪೇಗೌಡರ ಸಮಾಧಿ ಪತ್ತೆಯಾದ ಬಳಿಕ ಮೊದಲ ಬಾರಿಗೆ ಕೆಂಪಾಪುರಕ್ಕೆ ಭೇಟಿ ನೀಡಿ ಕೆಂಪೇಗೌಡ ಪ್ರಾಧಿಕಾರ ರಚನೆಯಾಗಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಆಗ್ರಹಿಸಿದ್ದರಲ್ಲದೆ, ಆ ಮೂಲಕ ಕೆಂಪಾಪುರ ಸಮಾಧಿ ಅಭಿವೃದ್ಧಿ ಹಾಗೂ ಕೆಂಪೇಗೌಡರು ಕಟ್ಟಿಸಿರುವ ಕೆರೆ, ಐತಿಹಾಸಿಕ ದೇವಸ್ಥಾನಗಳು ಕೂಡ ಅಭಿವೃದ್ಧಿಯಾಗಬೇಕೆಂದು ಒತ್ತಾಯಿಸಿದ್ದರು.
ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ನಿರ್ಮಾಣಕ್ಕೆ ಪೂಜೆ
ಶಿಥಿಲಾವಸ್ಥೆಯಲ್ಲಿ ಸಮಾಧಿ ಗೋಪುರ
ಇವತ್ತು ಕೆಂಪೇಗೌಡರ ಸಮಾಧಿ ಶಿಥಿಲಾವಸ್ಥೆಯನ್ನು ತಲುಪಿದೆ. ಇಲ್ಲಿರುವ ಗೋಪುರ ಕುಸಿದು ಬೀಳುವ ಹಂತದಲ್ಲಿದೆ. ಕಲ್ಲಿನ ಕಂಬಗಳು ಮುರಿದು ಬೀಳುವಂತಿದೆ. ಇನ್ನು ಕೆಂಪೇಗೌಡರು ಕಟ್ಟಿಸಿದ ಮಾಗಡಿ ಪಟ್ಟಣದ ಸೋಮೇಶ್ವರ ದೇವಸ್ಥಾನದ ಬಸವೇಶ್ವರ ಗೋಪುರವೂ ಕುಸಿಯುವಂತಾಗಿದೆ. ಇಲ್ಲಿರುವ ಸೋಮೇಶ್ವರ ದೇವಸ್ಥಾನವು ಕೆಂಪೇಗೌಡರ ಕಾಲದ್ದಾಗಿದ್ದು, ಅಂದಿನಿಂದ ಇಂದಿನವರೆಗೂ ಪೂಜಾ ಕೈಂಕರ್ಯಗಳನ್ನು ಮಾಡುತ್ತಲೇ ಬರಲಾಗುತ್ತಿದೆ. ದೇವಾಲಯ ನಿರ್ಮಾಣಗೊಂಡಿರುವ ಸ್ಥಳವು ನಿಸರ್ಗ ಸುಂದರವಾಗಿದೆ.
ಕೆಂಪೇಗೌಡರು ನಿರ್ಮಿಸಿದ ಕೆಂಪಸಾಗರ ಕೆರೆ
ಇದಲ್ಲದೆ ಕೆಂಪೇಗೌಡರು ನಿರ್ಮಿಸಿರುವ ಕೆಂಪಸಾಗರ ಕೆರೆಯೂ ತನ್ನದೇ ಇತಿಹಾಸವನ್ನು ಹೊಂದಿದೆ. 1674ರಲ್ಲಿ ಜನ ಜಾನುವಾರುಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ಕೆರೆಯನ್ನು ನಿರ್ಮಿಸಲಾಗಿದೆ. ವಿಶಾಲ ಪ್ರದೇಶದಲ್ಲಿ ನಿರ್ಮಾಣವಾಗಿರುವ ಕೆರೆಗೆ ಹಿಂದಿನ ಕಾಲದಲ್ಲಿ ಮಹತ್ವದ ಸ್ಥಾನ ನೀಡಲಾಗಿತ್ತು. ವಿಜಯದಶಮಿಯ ದಿನದಂದು ಈ ಕೆರೆಗೆ ಬಂದು ಕೆಂಪೇಗೌಡರು ಪೂಜೆ ಸಲ್ಲಿಸಿಕೊಂಡು ಹೋಗುತ್ತಿದ್ದರಂತೆ. ಕೆಂಪಸಾಗರ ಕೆರೆಯ ನೀರನ್ನು ಪವಿತ್ರ ಗಂಗೆ ಎಂದೇ ಭಾವಿಸಿರುವ ಜನತೆ ಹೊರ ಜಿಲ್ಲೆಗಳಿಂದಲೂ ಬಂದು ಪೂಜೆ ಸಲ್ಲಿಸುವುದನ್ನು ಕಾಣಬಹುದಾಗಿದೆ. ಹೀಗಿರುವಾಗ ಸರ್ಕಾರ ಇದನ್ನು ಅಭಿವೃದ್ಧಿ ಮಾಡಿದ್ದೇ ಆದರೆ ಕೆಂಪೇಗೌಡರ ಐಕ್ಯ ಸ್ಥಳವೂ ಸುಂದರ ತಾಣವಾಗುವುದರಲ್ಲಿ ಎರಡು ಮಾತಿಲ್ಲ.