ಸಾಫ್ಟ್ ವೇರ್ ಇಂಜಿನಿಯರ್ ದೋಚಿದ ಆಟೊ ಚಾಲಕ
ಬೆಂಗಳೂರು, ನ. 26: ಕೆಲಸ ಮುಗಿಸಿ ಆಟೊ ಹತ್ತಿ ಮನೆ ಸೇರೋಣ ಎಂದುಕೊಳ್ಳುವ ಮಹಿಳೆಯರಿಗೂ ಬೆಂಗಳೂರು ಸುರಕ್ಷಿತವಲ್ಲ ಎಂದು ಸಾಬೀತಾಗಿದೆ. ಮನೆಗೆ ತೆರಳುತ್ತಿದ್ದ ಮಹಿಳಾ ಸಾಫ್ಟ್ ವೇರ್ ಇಂಜಿನಿಯರ್ ಒಬ್ಬರ ಮೇಲೆ ಹಲ್ಲೆ ಮಾಡಿದ ಆಟೊ ಚಾಲಕರಿಬ್ಬರು ಮಾಂಗಲ್ಯ ಸರ, ಉಂಗುರ ಮತ್ತು ನಗದನ್ನು ದೋಚಿದ್ದಾರೆ.
ದೇವರಚಿಕ್ಕನಹಳ್ಳಿ ಮುಖ್ಯರಸ್ತೆಯ ಪರಿವಾರ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದ ಮಧುಮಿತಾ ಅವರ ಮೇಲೆ ಹಲ್ಲೆ ಮಾಡಿ ಆಭರಣ ದೋಚಲಾಗಿದೆ. ಜೆಪಿನಗರದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಮಧುಮಿತಾ ಕೆಲಸ ಮುಗಿಸಿಕೊಂಡು ಮನೆಗೆ ಹೋಗಲು ಜೆಪಿನಗರದ ಬಳಿ ಆಟೋ ಹತ್ತಿದ್ದರು.[ಬೆಂಗಳೂರುː 5 ಜನ ಡ್ರಾಪ್ ದರೋಡೆಕೋರರ ಬಂಧನ]
ಮಧುಮಿತಾ ಅವರನ್ನು ಕೂರಿಸಿಕೊಂಡ ನಂತರ ಸ್ವಲ್ಪ ದೂರ ಹೋದ ಮೇಲೆ ಆಟೊದೊಳಕ್ಕೆ ಮತ್ತೊಬ್ಬನನ್ನು ಹತ್ತಿಸಿಕೊಳ್ಳಲಾಗಿದೆ. ಆತ ಚಾಲಕನ ಪಕ್ಕದಲ್ಲಿಯೇ ಆಸೀನನಾಗಿದ್ದಾನೆ. ಆಟೊವನ್ನು ನೇರವಾಗಿ ಮೈಕೋ ಲೇಔಟ್ನ ವಿಜಯಬ್ಯಾಂಕ್ ಪೆಟ್ರೋಲ್ ಬಂಕ್ ಬಳಿಯ ನಿರ್ಜನ ಪ್ರದೇಶಕ್ಕೆ ತಂದು ಆಟೊ ಚಾಲಕ ಮತ್ತು ಮೊದಲೇ ಹತ್ತಿದ್ದ ದುಷ್ಕರ್ಮಿ ಸೇರಿ ಮಧುಮಿತಾ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾರೆ.
ಈ ಸಂದರ್ಭ ಮಧುಮಿತಾ ಕೂಗಿಕೊಳ್ಳಲು ಯತ್ನಿಸಿದಾಗ ಬೆದರಿಸಿದ ದುಷ್ಕರ್ಮಿಗಳು ಮಾಂಗಲ್ಯಸರ, ಬ್ರಾಸ್ಲೇಟ್, ಎರಡು ಉಂಗುರ, ಮೊಬೈಲ್, ಡೆಬಿಟ್ಕಾರ್ಡ್ ಕಸಿದು ಕೊಂಡಿದ್ದಾರೆ. ಅಲ್ಲದೇ ಕಾಲುಂಗುರವನ್ನು ಬಿಚ್ಚಿಸಿಕೊಂಡು ಆಟೊದಿಂದ ಹೊರಕ್ಕೆ ನೂಕಿ ಪರಾರಿಯಾಗಿದ್ದಾರೆ.[ಬೆಂಗಳೂರು ಮನೆಗಳ್ಳರ ಬಂಧನ, ಅಪಾರ ಹಣ ವಶ]
ಮೈಕೋಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದ ಆಟೊ ಸಾಗಿದ ಮಾರ್ಗದ ಸಿಸಿಟಿವಿ ಕ್ಯಾಮರಾದ ದೃಶ್ಯಾವಳಿ ಆಧರಿಸಿ ದುಷ್ಕರ್ಮಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಲಾಗಿದೆ ಎಂದು ಡಿಸಿಪಿ ರೋಹಿಣಿ ಮಾಹಿತಿ ನೀಡಿದ್ದಾರೆ.