ಲಂಚ ತಗೊಂಡು ಬಿಲ್ಡಿಂಗ್ ನಿಂದ ಜಿಗಿದು ಕಾಲು ಮುರಿದುಕೊಂಡ ಪೇದೆ
ಬೆಂಗಳೂರು, ಜನವರಿ 12: ಲಂಚದ ಆಸೆಗೆ ಬಿದ್ದು ಒಬ್ಬ ಮಹಿಳಾ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹಾಗೂ ಮುಖ್ಯ ಪೇದೆ ಜೀವನ ಹಾಳು ಮಾಡಿಕೊಂಡಿದ್ದಾರೆ. ಲಂಚ ಸ್ವೀಕರಿಸುವ ವೇಳೆ ಎಸಿಬಿ ಪೊಲೀಸರಿಗೆ ಹೆದರಿ ಪೊಲೀಸ್ ಠಾಣೆಯ ಮಹಡಿಯಿಂದ ಜಿಗಿದು ಒಬ್ಬ ಕಾನ್ ಸ್ಟೇಬಲ್ ಕಾಲು ಮುರಿದುಕೊಂಡಿದ್ದಾರೆ. ಲಂಚ ಸ್ವೀಕರಿಸಿ ಹೆಡ್ ಕಾನ್ಸ್ಟೇಬಲ್ ಲಂಚ ಸ್ವೀಕರಿಸಿ ಸಿಕ್ಕಿಬಿದ್ದಿದ್ದಾರೆ. ಮತ್ತು ಇನ್ನೇನು ಹದಿನೈದು ದಿನದಲ್ಲಿ ಹಸಮಣೆ ಸೇರಬೇಕಿದ್ದ ಮಹಿಳಾ ಸಬ್ ಇನ್ಸ್ ಪೆಕ್ಟರ್ ಇದೇ ಲಂಚ ಪ್ರಕರಣದಲ್ಲಿ ಪಾಲು ಪಡೆದು ಸಪ್ತಪದಿ ತುಳಿಯುವ ಹೊತ್ತಲ್ಲಿ ಜೈಲು ಸೇರಿದ್ದಾಳೆ.
ಈ ಪ್ರಕರಣಕ್ಕೆ ಸಾಕ್ಷಿಯಾಗಿದ್ದು ಚೆನ್ನೈ ರಸ್ತೆಯಲ್ಲಿರುವ ಬೈಯಪ್ಪನಹಳ್ಳಿ ಪೊಲೀಸ್ ಠಾಣೆ. ಹಸಮಣೆ ಹದಿನೈದು ದಿನ ಇಟ್ಟುಕೊಂಡು ಜೈಲು ಸೇರಿದ ಮಹಿಳಾ ಪಿಎಸ್ಐ ಹೆಸರು ಸೌಮ್ಯ. ಚಿಕ್ಕಬಳ್ಳಾಪುರ ಮೂಲದ ಈಕೆ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಕಳೆದ ಎರಡು ವರ್ಷದಿಂದ ಸಬ್ ಇನ್ಸ್ಪೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಇದೇ ಠಾಣೆಯ ಜೆ.ಪಿ. ರೆಡ್ಡಿ ಲಂಚ ಸ್ವೀಕರಿಸಿ ಸಿಕ್ಕಿಬಿದ್ದ ಮುಖ್ಯ ಪೇದೆ. ಎಸಿಬಿ ದಾಳಿಗೆ ಹೆದರಿ ಠಾಣೆಯ ಮಹಡಿಯಿಂದ ಜಿಗಿದು ಕುಮಾರ್ ಎಂಬ ಪೇದೆ ಕಾಲು ಮುರಿದುಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೈಸೂರು: ಲಂಚ ಪಡೆಯುತ್ತಿದ್ದ ವೇಳೆ ಪುರಸಭೆ ಮುಖ್ಯಾಧಿಕಾರಿ ಎಸಿಬಿ ಬಲೆಗೆ
ನಡೆದಿದ್ದೇನು ? :
ಕಳವು ಮೊಬೈಲ್ ಖರೀದಿಸಿದ ಆರೋಪಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರನ್ನು ವಿಚಾರಣೆಗೆ ಕರೆಸಿದ್ದರು. ಮೊಬೈಲ್ ಪಡೆದುಕೊಂಡಿದ್ದ ಸೌಮ್ಯ, ಈ ಪ್ರಕರಣದಿಂದ ಕೈ ಬಿಡಬೇಕಾದರೆ ಒಂದು ಲಕ್ಷ ರೂಪಾಯಿ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಇದರಿಂದ ನೊಂದ ವ್ಯಕ್ತಿಯ ಪತ್ನಿ ಎಸಿಬಿಗೆ ದೂರು ನೀಡಿದ್ದರು.
ಇವತ್ತು ಹಣ ತಲುಪಿಸುವಂತೆ ಮುಖ್ಯ ಪೇದೆ ರೆಡ್ಡಿ ಸೂಚಿಸಿದ್ದರು.
ಎಸಿಬಿ ಪೊಲೀಸರು ಮಫ್ತಿಯಲ್ಲಿ ಹೋಗಿದ್ದರು. ಒಂದು ಲಕ್ಷ ರೂಪಾಯಿ ಲಂಚ ಸ್ವೀಕರಿಸಿ ಠಾಣೆಯಲ್ಲಿದ್ದ ಕಬ್ಬಿಣದ ಪೆಟ್ಟಿಗೆಯಲ್ಲಿ ಹಣ ಬಚ್ಚಿಡಲಾಗಿತ್ತು. ಇದೇ ಬೇಳೆ ಬೆಂಗಳೂರು ನಗರ ವಿಭಾಗದ ಎಸಿಬಿ ಪೊಲೀಸರ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ.
ಮದುವಣಗಿತ್ತಿ ಸೆರೆ ಮನೆಗೆ:
ಇನ್ನು ಮೂರು ವರ್ಷದ ಹಿಂದೆ ಮಹಿಳಾ ಸಬ್ ಇನ್ ಸ್ಪೆಕ್ಟರ್ ನೇಮಕವಾಗಿದ್ದ ಚಿಕ್ಕಬಳ್ಳಾಪುರ ಮೂಲದ ಸೌಮ್ಯ ಎರಡು ವರ್ಷದ ಹಿಂದಷ್ಟೇ ಪೋಸ್ಟಿಂಗ್ ಪಡೆದಿದ್ದರು. ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ನಿಯೋಜನೆಗೊಂಡಿದ್ದರು. ಸೌಮ್ಯ ಅವರ ಮದುವೆ ಮಾತುಕತೆ ಕೂಡ ಮುಗಿದಿತ್ತು. ಮುಂದಿನ ಹದಿನೈದು ದಿನದಲ್ಲಿ ಸೌಮ್ಯ ಹಸಮಣೆ ಏರುತ್ತಿದ್ದರು. ಆದರೆ, ಕದ್ದ ಮೊಬೈಲ್ ಗೊತ್ತಿಲ್ಲದೇ ಖರೀದಿಸಿದ್ದ ವ್ಯಕ್ತಿಯ ಪತ್ನಿಯಿಂದ ಲಂಚಕ್ಕೆ ಬೇಡಿಕೆ ಇಟ್ಟು ಎಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಹಸಮಣೆ ಏರಬೇಕಿದ್ದ ನವ ಮಧು ಮಗಳು ಮಾನ ಮರ್ಯಾದೆ ಕಳೆದುಕೊಂಡು ಈಗ ಜೈಲಿಗೆ ಹೋಗಿದ್ದಾಳೆ. ಇಬ್ಬರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ಕೇಸು ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.
ಪೊಲೀಸ್ ಇನ್ಸ್ ಪೆಕ್ಟರ್ ವಿರುದ್ಧ ತನಿಖೆ :
ಇನ್ನು ಯಾವುದೇ ಅಪರಾಧ ಪ್ರಕರಣ ಪೊಲೀಸ್ ಇನ್ಸ್ ಪೆಕ್ಟರ್ ಗೆ ಗೊತ್ತಿಲ್ಲದೇ ದಾಖಲಾಗಲ್ಲ. ಈ ಪ್ರಕರಣದಲ್ಲಿ ಇನ್ ಸ್ಪೆಕ್ಟರ್ ಶಾಮೀಲಾಗಿರುವ ಸಂಶಯ ವ್ಯಕ್ತವಾಗಿದೆ. ಈ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದು ಎಸಿಬಿ ಬೆಂಗಳೂರು ನಗರ ಘಟಕದ ಎಸ್ಪಿ ಕುಲದೀಪ್ ಕುಮಾರ್ ಅರ್ . ಜೈನ್ ತಿಳಿಸಿದ್ದಾರೆ.