ಕುಂದಲಹಳ್ಳಿಯಲ್ಲಿ 4 ಪಥದ ಸಿಗ್ನಲ್ ಮುಕ್ತ ರಸ್ತೆ ಕಾಮಗಾರಿ: ಟ್ರಾಫಿಕ್ ಜಾಮ್
ಬೆಂಗಳೂರು, ಮಾರ್ಚ್ 14: ಕುಂದಲಹಳ್ಳಿಯಲ್ಲಿ ನಾಲ್ಕು ಪಥದ ಸಿಗ್ನಲ್ ಮುಕ್ತ ರಸ್ತೆ ಕಾಮಗಾರಿ ಹಾಗೂ ಟಂಡರ್ ಪಾಸ್ ಕಾಮಗಾರಿ ನಡೆಯುತ್ತಿರುವ ಕಾರಣ ವಿಪರೀತ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ.
ಬೆಂಗಳೂರು ನಗರ ಟ್ರಾಫಿಕ್ ಪೊಲೀಸರನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದು, ಮಾಹಿತಿ ನೀಡಿದೇ ಕಾಮಗಾರಿ ಆರಭಿಸಲು ಅನುಮತಿ ನೀಡಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟ್ರಾಫಿಕ್ ಹೆಚ್ಚಳದಿಂದ ತಗ್ಗಿದ ರಸ್ತೆ ಅಪಘಾತಗಳ ಸಂಖ್ಯೆ
ಎಲಿವೇಟೆಡ್ ಕಾರಿಡಾರ್ ಮಾಡುವ ಉದ್ದೇಶದಿಂದ ಕುಂದಲಹಳ್ಳಿ ಬಳಿ ನಾಲ್ಕು ಪಥದ ಅಂಡರ್ಪಾಸ್ ಯೋಜನೆಗೆ ಒಂದು ವರ್ಷದ ಹಿಂದೆ ಚಾಲನೆ ಸಿಕ್ಕಿತ್ತು. ಭೂಸ್ವಾಧೀನ ಸೇರಿದಂತೆ ನಾನಾ ಕಾರಣಗಳಿಂದ ಕಾಮಗಾರಿಗೆ ಚಾಲನೆ ಸಿಕ್ಕಿರಲಿಲ್ಲ. 20 ಕೋಟಿ ರೂ ಯೋಜನಾ ವೆಚ್ಚದ ಈ ಕಾಮಗಾರಿಯು ಕೆಲ ದಿನಗಳ ಹಿಂದೆ ಆರಂಭವಾಗಿದ್ದು, ಈ ಪ್ರದೇಶದಲ್ಲಿ ಸಂಚಾರ ದಟ್ಟಣೆಗೆ ಕಾರಣವಾಗಿದೆ.
ಕಳೆದ ವಾರಾಂತ್ಯದಲ್ಲಿ ಕನಿಷ್ಠ ಎರಡು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದರಿಂದ ಬೇಸರಗೊಂಡ ನಾಗರಿಕರು ಟ್ರಾಫಿಕ್ ಪೊಲೀಸರ ಕಾರ್ಯ ವೈಖರಿಯಿಂದ ಅಸಮಾಧಾನಗೊಂಡಿದ್ದರು.
ಕಾಮಗಾರಿ ಆರಂಭ ಮಾಡುವ ಮೊದಲೇ ಸಾರ್ವಜನಿಕರಿಗೆ ಯಾವುದೇ ಮಾಹಿತಿ ನೀಡಿಲ್ಲ. ಅಲ್ಲದೆ ಸಂಚಾರ ದಟ್ಟಣೆ ಹೆಚ್ಚುವ ಸೂಚನೆ ಇದ್ದರೂ ಪರ್ಯಾಯ ಮಾರ್ಗ ಸೂಚಿಸಿಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೊರವರ್ತುಲ ರಸ್ತೆಯ ಇಸ್ರೋ ಜಂಕ್ಷನ್ ಸೇರಿದಂತೆ ನಾನಾ ಪ್ರದೇಶಗಳಲ್ಲಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜನೆ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.