ರಾಜಕಾರಣಿಗಳನ್ನು ಕೆಣಕಿದ ಶಂಕರ ಬಿದರಿ ಗುಂಡೇಟು!
ಬೆಂಗಳೂರು, ನ.23 : "ಭ್ರಷ್ಟ ರಾಜಕಾರಣಿಗಳನ್ನು ಸಾರ್ವಜನಿಕವಾಗಿ ಗುಂಡಿಕ್ಕಿ ಕೊಲ್ಲಬೇಕು" ಎಂಬ ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಶಂಕರ್ ಬಿದರಿ ಹೇಳಿಕೆಗೆ ತಿರುಗೇಟು ನೀಡಿರುವ ಮಾಜಿ ಸಿಎಂ ಮತ್ತು ಪ್ರತಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ, ಮೊದಲು ಶಂಕರ ಬಿದರಿ ಅವರಿಗೆ ಗುಂಡಿಕ್ಕಬೇಕು ಎಂದು ಹೇಳಿದ್ದಾರೆ. ಕೆಲವು ಹುಚ್ಚರು ಮಾತ್ರ ಇಂತಹ ಹೇಳಿಕೆ ನೀಡುತ್ತಾರೆ ಎಂದು ಬಿದರಿ ಅವರನ್ನು ಲೇವಡಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ಮಾತನಾಡಿದ ಅವರು, "ಭ್ರಷ್ಟ ರಾಜಕಾರಣಿಗಳನ್ನು ಹಾಗೂ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಸಾರ್ವಜನಿಕವಾಗಿ ಗುಂಡಿಕ್ಕಿ ಕೊಲ್ಲಬೇಕು" ಎಂದು ಹೇಳಿರುವ ಬಿದರಿ ಅವರಿಗೆ ಬುದ್ಧಿ ಇಲ್ಲ. ಕೆಲವು ಹುಚ್ಚರು ಮಾತ್ರ ಇಂತಹ ಸಾಹಸ ಮಾಡುತ್ತಾರೆ. ಅವರನ್ನು ಬಂಧಿಸಿ ಇಲ್ಲವೇ ರಕ್ಷಣೆ ಕೊಡಿ ಎಂದು ವ್ಯಂಗ್ಯವಾಡಿದರು.
ಶಂಕರ ಬಿದರಿ ಒಬ್ಬರು ನಿವೃತ್ತ ಪೊಲೀಸ್ ಅಧಿಕಾರಿ ಎಂಬುದನ್ನು ಮರೆತು ಇಂತಹ ಪ್ರಚೋದನಾಕಾರಿಯಾದ ಹೇಳಿಕೆ ನೀಡುತ್ತಿದ್ದಾರೆ, ಇದು ಅವರ ಘನತೆಗೆ ಧಕ್ಕೆ ತರುವ ಹೇಳಿಕೆಯಲ್ಲ ಎಂದು ಕುಮಾರಸ್ವಾಮಿ ವಿಶ್ಲೇಷಿಸಿದರು. ಇಂತಹ ಹೇಳಿಕೆಯಿಂದ ಅವರು ಸಮಾಜಕ್ಕೆ ಎಂತಹ ಸಂದೇಶ ತಿಳಿಸುತ್ತಿದ್ದಾರೆ ಎಂದು, ಎಚ್ಡಿಕೆ ಪ್ರಶ್ನಿಸಿದರು. (ಶಂಕರ ಬಿದರಿ ಹೇಳಿದ್ದೇನು)
ಭ್ರಷ್ಟ ರಾಜಕಾರಣಿಯಾಗಲಿ ಅಥವಾ ಐಎಎಸ್, ಐಪಿಎಸ್ ಅಧಿಕಾರಿಗಳಾಗಲಿ ಅವರನ್ನು ಸಾರ್ವಜನಿಕವಾಗಿ ಗುಂಡಿಕ್ಕಿ ಕೊಲ್ಲಬೇಕು ಎಂಬುದು ಬೇಜಾವಬ್ದಾರಿ ಹೇಳಿಕೆಯಾಗಿದೆ. ಇಂತಹ ಹೇಳಿಕೆ ನೀಡಿದ ಅವರನ್ನು ತಕ್ಷಣ ಬಂಧಿಸಿ ಎಂದು ಕುಮಾರಸ್ವಾಮಿ ಆಗ್ರಹಿಸಿದರು. (ಶಂಕರ ಬಿದರಿ ಹೇಳಿಕೆಗೆ ವಿರೋಧಗಳು)
ಮೊದಲು ಅವರಿಗೆ ಗುಂಡಿಕ್ಕಬೇಕು
ಭ್ರಷ್ಟ ರಾಜಕಾರಣಿಗಳನ್ನು ಹಾಗೂ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಸಾರ್ವಜನಿಕವಾಗಿ ಗುಂಡಿಕ್ಕಿ ಕೊಲ್ಲಬೇಕು ಎಂದು ಹೇಳಿರುವ ಶಂಕರ ಬಿದರಿ ಅವರಿಗೆ ಬುದ್ಧಿ ಇಲ್ಲ ಎಂದು ಪ್ರತಿಪಕ್ಷನಾಯಕ ಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ. ಕೆಲವು ಹುಚ್ಚರು ಮಾತ್ರ ಇಂತಹ ಸಾಹಸ ಮಾಡುತ್ತಾರೆ, ಮೊದಲು ಅವರಿಗೆ ಗುಂಡಿಕ್ಕಬೇಕು. ಇಂತಹ ಹೇಳಿಕೆ ನೀಡುವ ಅವರನ್ನು ತಕ್ಷಣ ಬಂಧಿಸಬೇಕು ಎಂದು ಎಚ್ಡಿಕೆ ಆಗ್ರಹಿಸಿದ್ದಾರೆ.
ಇದು ಹತಾಶೆಯ ಮಾತು
ಶಂಕರ ಬಿದರಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಕ್ತಾರ ಸುರೇಶ್ ಕುಮಾರ್, ಇದು ಹತಾಶೆಯ ಮಾತು, ಭ್ರಷ್ಟಾಚಾರ ತಡೆಗಟ್ಟಲು ಅನೇಕ ಕಾನೂನುಗಳಿವೆ, ಅವರನ್ನು ಗುಂಡಿಕ್ಕಿ ಹತ್ಯೆ ಮಾಡಬೇಕು ಎಂಬುದು ಹತಾಶೆಯ ಹೇಳಿಕೆ ಎಂದು ಹೇಳಿದ್ದಾರೆ. ಕೆಲವು ರಾಜಕೀಯ ಪಕ್ಷಗಳಿಗೆ ಸೇರಿ ಎಲ್ಲಿಯೂ ನೆಲೆ ಸಿಗದೆ ಬಿದರಿ ಹತಾರಾಗಿದ್ದಾರೆ ಎಂದು ಸುರೇಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಯಾವತ್ತೋ ಪ್ರಾಣ ಕಳೆದುಕೊಳ್ಳಬೇಕಿತ್ತು
ಭ್ರಷ್ಟಾಚಾರಿಗಳನ್ನು ಸಾರ್ವಜನಿಕ ಪ್ರದೇಶದಲ್ಲಿ ಗುಂಡಿಟ್ಟು ಸಾಯಿಸಬೇಕೆಂದಿರುವ ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದರಿಯ ಹೇಳಿಕೆಗೆ ಹಿರಿಯ ವಕೀಲ ಮತ್ತು ವಿಚಾರವಾದಿ ಎ.ಕೆ.ಸುಬ್ಬಯ್ಯನವರು ತಿರುಗೇಟು ನೀಡಿದ್ದು, ಬಿದರಿಯವರು ಹೇಳಿರುವಂತೆ ಭ್ರಷ್ಟರನ್ನು ಗುಂಡಿಟ್ಟೇ ಸಾಯಿಸುವ ಕಟ್ಟುನಿಟ್ಟಿನ ಕಾನೂನು ಜಾರಿಯಲ್ಲಿದ್ದಿದ್ದರೆ, ಅವರು ಯಾವತ್ತೋ ಪ್ರಾಣ ಕಳೆದುಕೊಳ್ಳಬೇಕಿತ್ತು, ಇಷ್ಟುದಿನ ಬದುಕುತ್ತಿರಲಿಲ್ಲಎಂದು ಪರೋಕ್ಷ ಟಾಂಗ್ ನೀಡಿದ್ದಾರೆ.
ಭ್ರಷ್ಟರಿಗೆ ಸಾರ್ವಜನಿಕವಾಗಿ ಗುಂಡಿಕ್ಕಿ
ಭ್ರಷ್ಟ ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳನ್ನು ಸಾರ್ವಜನಿಕವಾಗಿ ಗುಂಡಿಕ್ಕಿ ಹತ್ಯೆ ಮಾಡಬೇಕು ಎಂದು ನಿವೃತ್ತ ಐಪಿಎಸ್ ಅಧಿಕಾರಿ ಶಂಕರ ಬಿದರಿ ಹೇಳಿದ್ದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತಿದೆ. ಭ್ರಷ್ಟಚಾರದಲ್ಲಿ ತೊಡಗುವ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನು ಸಾರ್ವಜನಿಕವಾಗಿ ಗುಂಡಿಕ್ಕಿ ಹತ್ಯೆ ಮಾಡಬೇಕು ಎಂದು ಹೇಳಿಕೆ ನೀಡಿ ವಿವಾದ ಹುಟ್ಟುಹಾಕಿದ್ದರು.