ಹಲಸೂರು ಕೆರೆಯಲ್ಲಿ ಶೀಘ್ರ ಬೋಟಿಂಗ್ ಸೌಲಭ್ಯ
ಬೆಂಗಳೂರು, ಅಕ್ಟೋಬರ್, 19: ಹಲಸೂರು ಕೆರೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ರಾಜ್ಯ ಪ್ರವಾಸೋದ್ಯಮ ಇಲಾಖೆ ಹೆಜ್ಜೆ ಇಟ್ಟಿದೆ. ಕೆರೆಯಲ್ಲಿ ಶೀಘ್ರವೇ ಬೋಟಿಂಗ್ ಸೌಲಭ್ಯ ಆರಂಭಿಸಲು ಮುಂದಾಗಿದೆ.
ಕೆರೆ ಅಭಿವೃದ್ಧಿಗಾಗಿ ಬಿಬಿಎಂಪಿ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದು, ಕೆರೆಯಲ್ಲಿ ದೋಣಿ ವಿಹಾರ ಏರ್ಪಡಿಸಿಲು ನಿರ್ಧರಿಸಿದೆ. ಮತ್ತು ಇದರ ಹೊಣೆಗಾರಿಕೆಯನ್ನು ಕೆಎಸ್ ಟಿಡಿಸಿಗೆ ವಹಿಸಿದೆ.
ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದು, ಎಂಟು ದೋಣಿಗಳನ್ನು ಖರೀದಿಸಲು ನಿರ್ಧರಿಸಿದ್ದಾರೆ. ದೋಣಿಗಳು ಬಂದ ನಂತರ ಪರಿಶೀಲಿಸಿ, ಪ್ರಾಯೋಗಿಕ ಸಂಚಾರ ನಡೆಸಿ 3-4 ತಿಂಗಳು ಬಳಿಕ ದೋಣಿ ವಿಹಾರ ಆರಂಭಿಸಲಾಗುವುದು ಎಂದು ಇಲಾಖೆ ತಿಳಿಸಿದೆ.[ಹಲಸೂರು ಕೆರೆ ಸಂರಕ್ಷಣೆ ಹೊಣೆ ಯಾರದ್ದು?]
5ಲಕ್ಷ ರೂ. ವಾರ್ಷಿಕ ಗುತ್ತಿಗೆ:
ದೋಣಿ ವಿಹಾರಕ್ಕೆ ಅನುಮತಿ ಕೋರಿ ಕೆಎಸ್ ಟಿಡಿಸಿ ಸಲ್ಲಿಸಿದ್ದ ಮನವಿಯನ್ನು ಬಿಬಿಎಂಪಿ ಪುರಸ್ಕರಿಸಿದ್ದು, ವಾರ್ಷಿಕವಾಗಿ 5 ಲಕ್ಷ ರೂ. ಮೊತ್ತಕ್ಕೆ ಗುತ್ತಿಗೆ ನಿಗದಿಪಡಿಸಿದೆ.
ಕೆಎಸ್ ಟಿಡಿಸಿಯೂ ಈ ಹಿಂದೆಯೂ ಸಹ ಹಲಸೂರು ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ಕಲ್ಪಿಸಿತ್ತು. ಇದಕ್ಕಾಗಿ ಇಲಾಖೆಗೆ ವಾರ್ಷಿಕವಾಗಿ 2ಲಕ್ಷ ರೂ. ಗುತ್ತಿಗೆ ಕಟ್ಟುತ್ತಿತ್ತು. ಗುತ್ತಿಗೆ ಅವಧಿ ಮುಗಿದಿದ್ದರಿಂದ ಬೋಟಿಂಗ್ ಸೌಲಭ್ಯ ಸ್ಥಗಿತಗೊಳಿಸಿತ್ತು.
ಬೋಟ್ ಖರೀದಿಗೆ ಟೆಂಡರ್ ಆಹ್ವಾನ:
ಬೋಟ್ ಖರೀದಿಸಲು ಪ್ರವಾಸೋದ್ಯಮ ಇಲಾಖೆ ಟೆಂಡರ್ ಆಹ್ವಾನಿಸಿದ್ದು, ನಾಲ್ಕು ಜನರು ಪ್ರಯಾಣಿಸಬಹುದಾದ ಆರು ಹಾಗು ಇಬ್ಬರು ಪ್ರಯಾಣಿಸಬಹುದಾದ 2 ಪೆಡಲ್ ಬೋಟ್ ಗಳನ್ನು ಸರಬರಾಜು ಮಾಡುವಂತೆ ಸಂಸ್ಥೆಗಳಲ್ಲಿ ತಿಳಿಸಿದೆ.
ಟೆಂಡರ್ ಪಡೆದಿರುವ ಸಂಸ್ಥೆ ಎರಡು ತಿಂಗಳ ಅವಧಿಯೊಳಗೆ ಬೋಟ್ ಗಳನ್ನು ಪೂರೈಸಬೇಕು ಎಂದು ಇಲಾಖೆ ತಿಳಿಸಿದೆ.