ಓಣಂ ಪ್ರಯುಕ್ತ ಕೆಎಸ್ಆರ್ಟಿಸಿಯಿಂದ ವಿಶೇಷ ಬಸ್
ಬೆಂಗಳೂರು, ಆ.26 : ಓಣಂ ಹಬ್ಬದ ಪ್ರಯುಕ್ತ ಕೆಎಸ್ಆರ್ಟಿಸಿ ಬೆಂಗಳೂರಿನಿಂದ ಕೇರಳದ ವಿವಿಧ ನಗರಗಳಿಗೆ ವಿಶೇಷ ಬಸ್ ಸಂಚಾರವನ್ನು ಆರಂಭಿಸಿದೆ. ಆ.26ರಿಂದ ಸೆ.1ರ ತನಕ ಈ ಬಸ್ಸುಗಳು ಸಂಚಾರ ನಡೆಸಲಿವೆ.
ಬೆಂಗಳೂರಿನಿಂದ ಕೇರಳದ ಪ್ರಮುಖ ಸ್ಥಳಗಳಾದ ಕಣ್ಣೂರು, ಕೋಯಿಕ್ಕೋಡ್, ಎರ್ನಾಕುಲಂ, ಪಾಲಕ್ಕಾಡ್, ತ್ರಿಶೂರ್, ಕೊಟ್ಟಾಯಂ ಸೇರಿದಂತೆ ಪ್ರಮುಖ ಸ್ಥಳಗಳಿಗೆ ವಿಶೇಷ ಬಸ್ಸುಗಳು ಸಂಚಾರ ನಡೆಸಲಿವೆ. ಗಣಕೀಕೃತ ಬುಕ್ಕಿಂಗ್ ಕೌಂಟರ್ ಮೂಲಕ ಮುಂಗಡವಾಗಿ ಟಿಕೆಟ್ ಕಾಯ್ದಿರಿಸಬಹುದಾಗಿದೆ. [ಮಣಿಪಾಲ-ಬೆಂಗಳೂರು ಫ್ಲೈ ಬಸ್ ದರ ಪಟ್ಟಿ]
4 ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೆಟ್ ಬುಕ್ ಮಾಡಿದಲ್ಲಿ ಶೇ 5ರಷ್ಟು ರಿಯಾಯಿತಿ ಮತ್ತು ಹೋಗುವ ಮತ್ತು ಬರುವ ಪ್ರಯಾಣದ ಟಿಕೆಟ್ ಏಕಕಾಲಕ್ಕೆ ಬುಕ್ ಮಾಡಿದರೆ ಶೇ 10ರಷ್ಟು ರಿಯಾಯಿತಿ ನೀಡಲಾಗುತ್ತದೆ. [ನಾಸಿಕ್ ಗೆ ಬಸ್ ಸೇವೆ ಆರಂಭಿಸಿದ KSRTC]
ವಿಶೇಷ ಬಸ್ಸುಗಳಲ್ಲಿ ಟಿಕೆಟ್ ಕಾಯ್ದಿಸಲು ಪ್ರಯಾಣಿಕರು www.ksrtc.in ವೆಬ್ಸೈಟ್ಗೆ ಭೇಟಿ ನೀಡಬಹುದಾಗಿದೆ. ಶಾಂತಿನಗರ ಮತ್ತು ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ವಿಶೇಷ ಬಸ್ಸುಗಳು ಸಂಚಾರ ನಡೆಸಲಿವೆ ಎಂದು ಕೆಎಸ್ಆರ್ಟಿಸಿ ಪ್ರಕಟಣೆ ತಿಳಿಸಿದೆ.
ಕೆಎಸ್ಆರ್ಟಿಸಿಯ 160 ಬಸ್ಸುಗಳು ಪ್ರತಿದಿನ ಕೇರಳ ಮತ್ತು ಕರ್ನಾಟಕದ ನಡುವೆ ಸಂಚಾರ ನಡೆಸುತ್ತವೆ. ಈಗ ಓಣಂ ಹಬ್ಬದ ಅಂಗವಾಗಿ ವಿಶೇಷ ಬಸ್ ಸೇವೆ ಆರಂಭಿಸಲಾಗಿದೆ. ಕೇರಳಕ್ಕೆ ತೆರಳುವ ರೈಲುಗಳು ಸಹ ಪ್ರಯಾಣಿಕರಿಂದ ತುಂಬಿ ಹೋಗಿವೆ.