ಯಾರದ್ದೋ ಪರೀಕ್ಷೆ ಇನ್ಯಾರೋ ಬರೆಯೋಕೆ ಹೋಗಿ ಸಿಕ್ಕಿಬಿದ್ರು !
ಬೆಂಗಳೂರು, ನವೆಂಬರ್ 23: ಕೆಎಸ್ಆರ್ ಪಿ ಕಾನ್ಸ್ಟೇಬಲ್ ನೇಮಕಾತಿ ಸಂಬಂಧ ಬ್ಲೂಟೂತ್ ಉಪಕರಣದಿಂದ ನಕಲು ಮಾಡುತ್ತಿದ್ದ ಒಬ್ಬ ಅಭ್ಯರ್ಥಿ ಸಿಕ್ಕಿಬಿದ್ದಿದ್ದಾನೆ. ಮತ್ತೆರಡು ಪ್ರತ್ಯೇಕ ಪ್ರಕರಣದಲ್ಲಿ ಅಭ್ಯರ್ಥಿಗಳ ಪರವಾಗಿ ಬೇರೆಯವರು ಪರೀಕ್ಷೆ ಬರೆಯಲು ಹೋಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಪೂರ್ವ ವಿಭಾಗದ ಇಂದಿರಾನಗರ ಹಾಗೂ ಜೀವನ್ ಭೀಮಾನಗರ ಠಾಣೆಗಳ ವ್ಯಾಪ್ತಿಯಲ್ಲಿಮೂರು ಪ್ರತ್ಯೇಕ ಪ್ರಕರಣ ದಾಖಲಾಗಿವೆ. ಸರ್ಕಾರಿ ಹುದ್ದೆ ಗಿಟ್ಟಿಸಿಕೊಳ್ಳಲು ಸಾಹಸ ಮಾಡಲು ಹೋಗಿ ಇದೀಗ ಸೆರೆ ಮನೆ ಅತಿಥಿಗಳಾಗಿದ್ದಾರೆ.
ಬ್ಲೂಟೂತ್ ಬಾಯ್ ಸೆರೆ: ಕಿವಿಯಲ್ಲಿ ಪುಟ್ಟ ಎಲೆಕ್ಟ್ರಾನಿಕ್ ಬ್ಲೂ ಟೂತ್ ಮತ್ತು ಇಯರ್ ಪೋನ್ ಬಳಸಿ ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ನಕಲು ಮಾಡಲು ಹೋಗಿ ಅಭ್ಯರ್ಥಿಯೊಬ್ಬ ಜೈಲು ಪಾಲಾಗಿದ್ದಾನೆ. ಭಾನುವಾರ ರಾಜ್ಯದೆಲ್ಲೆಡೆ ಕೆಎಸ್ಆರ್ ಪಿ ಪೊಲೀಶ್ ಕಾನ್ಸ್ಟೇಬಲ್ ನೇಮಕಾತಿ ಲಿಖಿತ ಪರೀಕ್ಷೆ ಆಯೋಜಿಸಲಾಗಿತ್ತು. ಇಂದಿರಾಣಗರದ ಕೈರಳಿನಿಕೇತನ್ ಎಜುಕೇಷನ್ ಟ್ರಸ್ಟ್ನ ಶಾಲೆಯಲ್ಲಿ ಪರೀಕ್ಷೆ ಆರಂಭವಾಗಿತ್ತು. ಬಾಗಲಕೋಟೆಯ ಟಕ್ಕಳಕಿ ಗ್ರಾಮದ ಹನುಮಂತ ಗಂಗಪ್ಪ ಬಿಲ್ಲೂರ್ ಎಂಬಾತ ಪರೀಕ್ಷೆ ಬರೆಯಲು ಬಂದಿದ್ದಾನೆ. ಪರೀಕ್ಷೆ ಬರೆಯುವಾಗ ಕಿವಿಯಲ್ಲಿ ಬ್ಲೂ ಟೂತ್ ಇಟ್ಟುಕೊಂಡಿದ್ದು, ಅದಕ್ಕೆ ಸಂಬಂಧಿಸಿದ ಎಲೆಕ್ಟ್ರಾನಿಕ್ ಉಪಕರಣ ಜೇಬಿನಲ್ಲಿಟ್ಟುಕೊಂಡಿದ್ದಾರೆ. ಯಾರಿಗೂ ಕಾಣದಂತೆ ಕಿವಿಗೆ ಹಾಕುವ ಚಿಕ್ಕ ಬ್ಲೂಟೂತ್ ಉಪಕರಣದ ನೆರವಿನಿಂದ ಪರೀಕ್ಷಾ ಕೇಂದ್ರದ ಹೊರಗಿರುವ ವ್ಯಕ್ತಿಗೆ ಕರೆ ಮಾಡಿ ಉತ್ತರ ತಿಳಿದುಕೊಂಡು ಪರೀಕ್ಷೆ ಬರೆಯುತ್ತಿದ್ದ. ಪರೀಕ್ಷಾ ಕೇಂದ್ರದ ಸಿಬ್ಬಂದಿಗೆ ಹನಮಂತನ ನಡವಳಿಕೆ ಬಗ್ಗೆ ಅನುಮಾನಗೊಂಡು ಪರಿಶೀಲಿಸಿದಾಗ ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ ಸಂಗತಿ ಹೊರ ಬಿದ್ದಿದೆ. ಎಲೆಕ್ಟ್ರಾನಿಕಕ್ ಬ್ಲೂ ಟೂತ್ ಉಪಕರಣ ಬಳಸಿ ಮೂರನೇ ವ್ಯಕ್ತಿಗೆ ಕರೆ ಮಾಡಿ ಆತ ಹೇಳಿದ ಉತ್ತರಗಳನ್ನು ಲಿಖಿತ ಪರೀಕ್ಷೆಯಲ್ಲಿ ಬರೆದಿರುವುವು ವಿಚಾರಣೆ ವೇಳೆ ಗೊತ್ತಾಗಿದೆ. ಈ ಸಂಬಂಧ ಆರೋಪಿಯನ್ನು ಬಂಧಿಸಿರುವ ಇಂದಿರಾಣಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ನಕಲು ಮಾಡಲು ಸಹಕರಿಸಿದವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ನಕಲು ಮಾಡುತ್ತಿದ್ದ ನಕಲಿಗಳ ಬಂಧನ: ಇನ್ನು ಎರಡು ಪ್ರತ್ಯೇಕ ಪ್ರಕರಣದಲ್ಲಿ ಯಾರದ್ದೋ ಪರೀಕ್ಷೆಯನ್ನು ಬೇರೆ ಅಭ್ಯರ್ಥಿಗಳು ಬರೆಯಲು ಯತ್ನಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಕೈರಳಿ ಎಜುಕೇಷನ್ ಟ್ರಸ್ಟ್ ಸೆಂಟರ್ ನಲ್ಲಿ ಕೆಎಸ್ಆರ್ ಪಿ/ ಐಆರ್ ಬಿ ಹುದ್ದೆ ನೇಮಕಾತಿ ಪರೀಕ್ಷೆ ನಡೆಯುತ್ತಿತ್ತು. ಸಾಗರ್ ವಡ್ಡರ್ ಎಂಬ ಅಭ್ಯರ್ಥಿಯ ಪರವಾಗಿ ಬೆಳಗಾವಿಯ ಗೋಕಾಕ್ ತಾಲೂಕಿನ ಲೋಳಸೂರಿನ ಗುರುನಾಥ್ ವೆಡ್ಡರ್ ಎಂಬಾತ ಬರೆಯುತ್ತಿದ್ದ. ಮೇಲಾಧಿಕಾರಿಗಳ ಕಚೇರಿಯಿಂದ ಬಂದ ಮಾಹಿತಿ ಆಧಾರದ ಮೇಲೆ ಗುರುನಾಥ್ ವಡ್ಡರ್ ನನ್ನು ವಿಚಾರಣೆ ನಡೆಸಿದಾಗ ತನ್ನ ಸ್ನೇಹಿತ ರಾಮು ಎಂಬುವರ ಮೂಲಕ ಸಾಗರ್ ವಡ್ಡರ್ ಪರಿಚಯವಾಗಿದ್ದಾನೆ. ಅತನ ಸೂಚನೆ ಮೇರೆಗೆ ಗುರುನಾಥ್ ವಡ್ಡರ್ ಎಂಬಾತ ಪರೀಕ್ಷೆ ಬರೆಯಲು ಬಂದು ಸಿಕ್ಕಿಬಿದ್ದಿದ್ದಾನೆ. ಈ ಹಿಂದೆಯು ಅನೇಕ ಪರೀಕ್ಷೆಗಳಲ್ಲಿ ಬೇರೆಯವರ ಪರೀಕ್ಷೆ ಬರೆದಿರುವ ವಿಷಯವನ್ನು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ.
Recommended Video
ಇಂತದ್ದೇ ಮತ್ತೊಂದು ಪ್ರಕರಣದಲ್ಲಿ ಜೀವನಭೀಮಾನಗರ ಠಾಣೆ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಜೀವನಭೀಮಾನಗರದ ಸೆಕ್ರೇಡ್ ಹಾರ್ಟ್ ಬಾಲಕಿಯರ ಪ್ರೌಢಶಾಲೆಯಲ್ಲಿ ಸಿದ್ಧಾರೂಢ ವೈ. ಬನಾಜ್ ಎಂಬುವರ ಪರೀಕ್ಷೆಯನ್ನು ಗೋಕಾಕ್ನ ಮಹಾಂತೇಶ ನಂದಿ ಎಂಬಾತ ಬರೆಯುತ್ತಿರುವ ಮಾಹಿಸಿ ಸಿಕ್ಕಿದೆ. ಮಹಾಂತೇಶ ನಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸರ್ಕಾರಿ ಕೆಲಸ ಕೊಡಿಸುವ ಸಲುವಾಗಿ ಮಹಾಂತೇಶ್ ಬೇರೆಯವರ ಪರೀಕ್ಷೆ ಬರೆಯುತ್ತಿದ್ದ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಜೀವನ ಭೀಮಾನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.