ಸರ್ಕಾರಿ ಶಾಲೆ ವಿದ್ಯಾರ್ಥಿನಿಯರಿಗೆ ಕರಾಟೆ ಕಲಿಸಲಿಕ್ಕೆ ಬರಲಿದ್ದಾರೆ KSRP ಪೊಲೀಸ್
ಬೆಂಗಳೂರು, ಮಾರ್ಚ್ 02 : ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಹೆಣ್ಣು ಮಕ್ಕಳಿಗೆ ಒಂದು ಗುಡ್ ನ್ಯೂಸ್. ಆಪತ್ಕಾಲದಲ್ಲಿ ನಿಮ್ಮನ್ನು ಕಾಪಾಡಲಿಕ್ಕೆ ಇನ್ಮುಂದೆ ಬೇರೆ ಯಾರ ನೆರವು ಅಗತ್ಯ ಬೀಳಲ್ಲ. ನಿಮಗೆ ನೀವೇ ಸಾಕು. ಹೌದು. ಸರ್ಕಾರಿ ಶಾಲಾ ವಿದ್ಯಾರ್ಥಿನಿಯರು ಆಪತ್ಕಾಲದಲ್ಲಿ ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳುವಂತಹ ಶಕ್ತಿವಂತರನ್ನಾಗಿಸಲು ಪೊಲೀಸರೇ ಪ್ಲಾನ್ ಮಾಡಿದ್ದಾರೆ. ಕರ್ನಾಟಕ ರಾಜ್ಯ ಮೀಸಲು ಪಡೆಯ ಮಹಿಳಾ ಪೊಲೀಸರು ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಇನ್ಮುಂದೆ ಕರಾಟೆ ತರಬೇತಿ ನೀಡಲಿದ್ದಾರೆ. ಕಷ್ಟ ಕಾಲದಲ್ಲಿ ಸ್ವ ರಕ್ಷಣೆ ಮಾಡಿಕೊಳ್ಳುವ ಬಗ್ಗೆ ಸರ್ಕಾರಿ ಶಾಲಾ ಹೆಣ್ಣು ಮಕ್ಕಳಿಗೆ ಕರಾಟೆ ಕಲಿಸಿಕೊಡುವ ಜತೆಗೆ ಪಾಠವೂ ಮಾಡಲಿದ್ದಾರೆ.
ಗೃಹ ಸಚಿವರಿಂದ ಯೋಜನೆಗೆ ಚಾಲನೆ:
ಪೊಲೀಸರಿಂದ ಸರ್ಕಾರಿ ಶಾಲಾ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ನೀಡುವ ಮಹತ್ವಾಕ್ಷಾಂಕ್ಷಿ ಯೋಜನೆಯನ್ನು ರಾಜ್ಯ ಮೀಸಲು ಪಡೆ ಜಾರಿಗೆ ತಂದಿದೆ. ಮಾರ್ಚ್ 9 ರಂದು ರಾಜ್ಯ ಗೃಹ ಸಚಿವರು ಪ್ರಾಯೋಗಿಕವಾಗಿ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ. ಮೊದಲ ಹಂತದಲ್ಲಿ ಬೆಂಗಳೂರು, ಬೆಳಗಾವಿಯ ಆಯ್ದ ಸರ್ಕಾರಿ ಶಾಲೆಗಳಲ್ಲಿ ತರಬೇತಿ ಸಿಗಲಿದೆ. ನಂತರ ನಗರದ ಪ್ರದೇಶದ ಸರ್ಕಾರಿ ಶಾಲೆಯ ಹೆಣ್ಣು ಮಕ್ಕಳಿಗೆ ಈ ತರಬೇತಿ ಸಿಗಲಿದೆ. ಕರ್ನಾಟಕ ರಾಜ್ಯ ಮೀಸಲು ಪಡೆಯ ಮಹಿಳಾ ಪೊಲೀಸರು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿನಿಯರಿಗೆ ತರಬೇತಿ ನೀಡಲಿದ್ದಾರೆ. ಜಿಗಣಿಯ ಸರ್ಕಾರಿ ಶಾಲೆ, ಹೊಂಬೇಗೌಡನಗರ ಸರ್ಕಾರಿ ಪ್ರೌಢಶಾಲೆ ಸೇರಿದಂತೆ ಬೆಂಗಳೂರಿನಲ್ಲಿ ಹದಿನೈದಕ್ಕೂ ಹೆಚ್ಚು ಸರ್ಕಾರಿ ಶಾಲೆ ವಿದ್ಯಾರ್ಥಿನಿಯರಿಗೆ ತರಬೇತಿ ಸಿಗಲಿದೆ. ಅದೇ ರೀತಿ ಬೆಳಗಾವಿಯ ಆಯ್ದ ಸರ್ಕಾರಿ ಶಾಲೆ ಹೆಣ್ಣು ಮಕ್ಕಳಿಗೂ ಸ್ವಯಂ ರಕ್ಷಣೆ ತರಬೇತಿ ಸಿಗಲಿದೆ.
ಕೆಎಸ್ಆರ್ಪಿ ಪೊಲೀಸರಿಗೆ ಹೊಸ ಟಾಸ್ಕ್:
ಪ್ರತಿಭಟನೆ, ಮುಷ್ಕರ, ಗಲಾಟೆ ವೇಳೆ ಮಾತ್ರ ನಿಯೋಜನೆಗೊಳ್ಳುತ್ತಿದ್ದ ಕರ್ನಾಟಕ ರಾಜ್ಯ ಮೀಸಲು ಪಡೆಯ ಪೊಲೀಸ್ ಸಿಬ್ಬಂದಿ ಪೂರ್ಣ ಬದಲಾಗಿದ್ದಾರೆ. ಮೊದಲ ಹಂತದಲ್ಲಿ ತೂಕ ಇಳಿಸುವ ಟಾಸ್ಕ್ ನೀಡಲಾಗಿತ್ತು. ತೂಕ ಇಳಿಸಿದ ಬಳಿಕ ಫಿಟ್ ಅಂಡ್ ಸ್ಮಾರ್ಟ್ ಘೋಷವಾಖ್ಯದೊಂದಿಗೆ ಮೀಸಲು ಪಡೆಯ ಸಿಬ್ಬಂದಿಗೆ ನಾನಾ ಕೌಶಲ್ಯ ತರಬೇತಿ ನೀಡಲಾಗುತ್ತಿದೆ. ಕೆಎಸ್ಆರ್ ಪಿ ಮೀಸಲು ಪಡೆಯ ಮಹಿಳಾ ಸಿಬ್ಬಂದಿಯನ್ನು ಕರಾಟೆ ಫೈಟರ್ಸ್ ಗಳನ್ನಾಗಿ ತಯಾರು ಮಾಡಲಾಗಿದೆ. ಬೆಂಗಳೂರಿನಲ್ಲಿ ಒಂದು ಬ್ಯಾಚ್ ಹಾಗೂ ಬೆಳಗಾವಿಯಲ್ಲಿ ಒಂದು ಬ್ಯಾಚ್ ಕರಾಟೆ ಜತೆಗೆ ಆಪತ್ಕಾಲದಲ್ಲಿ ಸ್ವಯಂ ರಕ್ಷಣೆ ಬಗ್ಗೆ ತರಬೇತಿ ಪಡೆದು ಪರಿಣಿತರಾಗಿದ್ದಾರೆ.
ಸ್ವಯಂ ರಕ್ಷಣೆಗೆ ಪ್ರೇರಣೆ
ರಾಜ್ಯ ಮೀಸಲು ಪಡೆಯ ಎರಡು ಬ್ಯಾಚ್ ಗಳು ಕರಾಟೆ ತರಬೇತಿ ಪಡೆಯುವ ಮೂಲಕ ಕಮಾಂಡೋಗಳಾಗಿ ಬದಲಾಗಿದ್ದಾರೆ. ಎದೆ ಮಟ್ಟಕ್ಕೆ ಕಾಲಲ್ಲಿ ಒದೆಯಬಲ್ಲರು. ಮೊಣಕೈಯಲ್ಲಿ ಹೊಟ್ಟೆಗೆ ಗುದ್ದಿ ಎಂಥವರನ್ನಾದರೂ ಕೆಳಗೆ ಬೀಳಿಸಬಲ್ಲರು. ಮುಷ್ಠಿ ಗುದ್ದು ನೀಡಿ ಎಂತಹ ಕಿರಾತಕನನ್ನು ಬೇಕಾದರೂ ಎದರುರಿಸಬಲ್ಲರು. ಕರಾಟೆಯಲ್ಲಿ ತರಬೇತಿ ಪಡೆದು ಮೀಸಲು ಪಡೆಯ ಮಹಿಳಾ ಸಿಬ್ಬಂದಿ "ಕರಾಟೆ ಪೊಲೀಸ್ " ಆಗಿ ರೂಪಾಂತರಗೊಂಡಿದ್ದಾರೆ. ಮೊದಲ ಹಂತದಲ್ಲಿ ಬೆಳಗಾವಿಯಲ್ಲಿ ಒಂದು ಬ್ಯಾಚ್, ಬೆಂಗಳೂರಿನಲ್ಲಿ ಒಂದು ಬ್ಯಾಚ್ ತಯಾರಾಗಿದೆ. ಹಂತ ಹಂತವಾಗಿ ರಾಜ್ಯದ ಮೀಸಲು ಪಡೆಯ ಮಹಿಳಾ ಸಿಬ್ಬಂದಿಗೆ ಇದೇ ರೀತಿ ಕರಾಟೆ ತರಬೇತಿ ಸಿಗಲಿದೆ. ಕಮಾಂಡೋಗಳ ಮಾದರಿ ತಯಾರಾಗಿರುವ ಮೀಸಲು ಪಡೆಯ ಮಹಿಳಾ ಸಿಬ್ಬಂದಿಯೇ ಇದೀಗ ಸರ್ಕಾರಿ ಶಾಲೆ ವಿದ್ಯಾರ್ಥಿನಿಯರಿಗೆ ತರಬೇತಿ ನೀಡಲಿದ್ದಾರೆ. ಕರ್ನಾಟಕ ರಾಜ್ಯ ಮೀಸಲು ಪಡೆಯ ಉನ್ನತ ಪೊಲೀಸ್ ಅಧಿಕಾರಿ ಈ ವಿಷಯವನ್ನು "ಒನ್ ಇಂಡಿಯಾ ಕನ್ನಡ"ಕ್ಕೆ ತಿಳಿಸಿದ್ದಾರೆ.
ಅಲೋಕ್ ಕುಮಾರ್ ದೂರದೃಷ್ಟಿ :
ರಾಜ್ಯದಲ್ಲಿ ಸೂಪರ್ ಕಾಪ್ ಎಂದೇ ಖ್ಯಾತಿ ಪಡೆದಿರುವ ಕರ್ನಾಟಕ ರಾಜ್ಯ ಮೀಸಲು ಪಡೆಯ ಹೆಚ್ಚವರಿ ಪೊಲೀಸ್ ಮಹಾ ನಿರ್ದೇಶಕರು ಅಧಿಕಾರ ವಹಿಸಿಕೊಂಡ ಬಳಿಕ ಮೀಸಲು ಪಡೆಯ ಸಿಬ್ಬಂದಿಯ ಕಾರ್ಯಶೈಲಿಯನ್ನೇ ಬದಲಾಯಿಸಿದ್ದಾರೆ. ಬಂದೋಬಸ್ತ್ ಗೆ ನಿಯೋಜನೆಗೊಂಡರೂ ಬಸ್ ನಲ್ಲಿ ಕೂತು ಇಸ್ಪೀಟ್ ನಿಂದ ಕಾಲ ಕಳೆಯುತ್ತಿದ್ದರು. ಇನ್ನು ದೇಹ ದಂಡನೆ ಮಾಡದೇ ಹೊಟ್ಟೆ ಬೆಳೆಸಿಕೊಂಡಿದ್ದರು. ಮೊದಲ ಹಂತದಲ್ಲಿ ಹೊಟ್ಟೆ ಬೆಳೆಸಿಕೊಂಡಿದ್ದ ಸಿಬ್ಬಂದಿ ತೂಕ ಇಳಿಸುವ ಯೋಜನೆ ರೂಪಿಸಿದ್ದರು. ತೂಕ ಇಳಿಸಿಕೊಂಡು ಪೊಲೀಸ್ ಸಿಬ್ಬಂದಿ ಸ್ಮಾರ್ಟ್ ಜತೆಗೆ ಆರೋಗ್ಯವಂತರಾಗಿ ಬದಲಾಗಿದ್ದರು. ಅದೇ ರೀತಿ ಮೀಸಲು ಪಡೆಯ ಮಹಿಳಾ ಪೊಲೀಸ್ ಸಿಬ್ಬಂದಿಗೆ ಕರಾಟೆ ತರಬೇತಿ ಕೊಡಿಸಿ ಕಮಾಂಡೋ ಮಾದರಿ ತಯಾರು ಮಾಡಿಸಿದ್ದಾರೆ. ಅಲೋಕ್ ಕುಮಾರ್ ಅವರ ದೂರ ದೃಷ್ಟಿಯಿಂದ ಇದೀಗ ಕೆಎಸ್ ಆರ್ಪಿ ಪಡೆ ವಿಶೇಷ ಪೊಲೀಸ್ ಪಡೆಯಾಗಿ ರೂಪಾಂತರಗೊಳ್ಳುತ್ತಿದೆ.
Recommended Video
ಮಕ್ಕಳ ಸುರಕ್ಷತೆ ಅಗತ್ಯ:
ರಾಜಧಾನಿ ಬೆಂಗಳೂರು ನಂತಹ ನಗರಗಳಲ್ಲಿ ಹೆಣ್ಣು ಮಕ್ಕಳು ಓಡಾಡುವುದೇ ಕಷ್ಟ. ಶಾಲೆಗೆ ಹೋದರೆ ಬರುವ ವರೆಗೂ ಪೋಷಕರಿಗೆ ಭಯ. ಇನ್ನು ಆಪತ್ತು ಕಾಲದಲ್ಲಿ ಅವರನ್ನು ಅವರು ರಕ್ಷಣೆ ಮಾಡಿಕೊಳ್ಳಲು ಅಸಾಧ್ಯ. ತಕ್ಷಣಕ್ಕೆ ಪೊಲೀಸರು ಬಂದು ಕಾಪಾಡುತ್ತಾರೆ ಎಂಬ ನಂಬಿಕೆಯಿಲ್ಲ. ಇಂತಹ ಕಾಲದಲ್ಲಿ ಸ್ವಯಂ ರಕ್ಷಣೆಯೊಂದೇ ಪರಿಹಾರ ಮಾರ್ಗ. ಇದನ್ನು ಅರಿತ ಕರ್ನಾಟಕ ರಾಜ್ಯ ಮೀಸಲು ಪಡೆಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಕುಮಾರ್, ಮೊದಲ ಹಂತದಲ್ಲಿ ಮಹಿಳಾ ಸಿಬ್ಬಂದಿಗೆ ಕರಾಟೆ ತರಬೇತಿ ಮೂಲಕ ಸ್ವಯಂ ರಕ್ಷಣೆ ಮಾಡಿಕೊಳ್ಳುವ ತರಬೇತಿ ಕೊಡಿಸಿದ್ದಾರೆ. ಇದೀಗ ತರಬೇತಿ ಪಡೆದ ಮಹಿಳಾ ಸಿಬ್ಬಂದಿ ಗಲಭೆ, ಮುಷ್ಕರ ವೇಳೆಯಲ್ಲೂ ಫ್ರಂಟ್ ಲೈನ್ ನಲ್ಲಿ ನಿಂತು ಕೆಲಸ ಮಾಡಬಲ್ಲರು ! ಕೆಲಸ ಇಲ್ಲದ ವೇಳೆ ಶಾಲಾ ಮಕ್ಕಳಿಗೆ ತರಬೇತಿಯನ್ನೂ ಕೊಡಬಲ್ಲರು. ಹೀಗೆ ನಿರುಪಯುಕ್ತವಾಗುತ್ತಿದ್ದ ಪೊಲೀಸ್ ಪಡೆಯ ಶಕ್ತಿಯನ್ನು ಸದ್ಬಳಕೆ ಮಾಡಿಕೊಳ್ಳುವ ಐಡಿಯಾ ಯಶಸ್ವಿಯಾಗಿ ವರ್ಕೌಟ್ ಆಗಿದೆ.