ಕೆಎಸ್ ಈಶ್ವರಪ್ಪ ಪಿಎ ವಿನಯ್ ಕಿಡ್ನಾಪ್ ಕೇಸ್, ಸಿಸಿಬಿಯಿಂದ ತನಿಖೆ
ಬೆಂಗಳೂರು, ಜನವರಿ 29: ವಿಧಾನಪರಿಷತ್ ವಿಪಕ್ಷ ನಾಯಕ, ಬಿಜೆಪಿ ಮುಖಂಡ ಕೆಎಸ್ ಈಶ್ವರಪ್ಪ ಅವರ ಆಪ್ತ ಸಹಾಯಕ ವಿನಯ್ ಅವರ ಮೇಲೆ ಹಲ್ಲೆ ನಡೆಸಿ, ಕಿಡ್ನಾಪ್ ಮಾಡುವ ಯತ್ನ ಪ್ರಕರಣದ ತನಿಖೆಯನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಕೈಗೊಳ್ಳಲಿದ್ದಾರೆ.
ವಿನಯ್ ಅಪಹರಣ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಸಹಾಯಕ ಎನ್. ಆರ್ ಸಂತೋಷ್ ಅವರು ಪ್ರಮುಖ ಆರೋಪಿಯಾಗಿದ್ದಾರೆ. ಸಂತೋಷ್ ಅವರ ಕೈವಾಡವಿರುವುದು ತನಿಖೆಯಲ್ಲಿ ಬಯಲಾದ ಬಳಿಕ ಪೊಲೀಸರು, ಸಂತೋಷ್ ವಿರುದ್ಧ ಚಾರ್ಜ್ ಶೀಟ್ ಕೂಡಾ ಸಲ್ಲಿಸಿದ್ದಾರೆ.
ಕೆಎಸ್ ಈಶ್ವರಪ್ಪ ಅವರ ಪಿಎ ವಿನಯ್ ರನ್ನು ಅಪಹರಿಸಲು ಯತ್ನ
ವಿಚಾರಣೆ ವೇಳೆ ಪೊಲೀಸರಿಗೆ ಸಂತೋಷ್ ಸರಿಯಾದ ಸಹಕಾರ ನೀಡಿರಲಿಲ್ಲ. ಈ ಪ್ರಕರಣದಲ್ಲಿ ಸಂತೋಷ್ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ. ಆದರೆ, ಜಾಮೀನು ರದ್ದುಗೊಳಿಸುವಂತೆ ಕೋರಿ ಪೊಲೀಸರು ಕೋರ್ಟ್ ಮೆಟ್ಟಿಲೇರಿದ್ದರು.
2017ರ ಮೇ.11 ರಂದು ರಾಜಾಜಿನಗರದ ಇಸ್ಕಾನ್ ದೇವಾಲಯದ ಬಳಿ 8 ಮಂದಿಯ ತಂಡವೊಂದು, ವಿನಯ್ ಅವರನ್ನು ಕಿಡ್ನಾಪ್ ಮಾಡಲು ಪ್ರಯತ್ನಿಸಿತ್ತು. ಈ ಸಂಬಂಧ ಅದೇ ದಿನ ವಿನಯ್ ಮಹಾಲಕ್ಷೀ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಸಿಸಿಬಿಗೆ ವರ್ಗಾಯಿಸುವಂತೆ ಪೊಲೀಸ್ ಆಯುಕ್ತರಿಗೆ ಮನವಿ
'ಯಡಿಯೂರಪ್ಪ ಮನೆಯಲ್ಲೇ ಸಂತೋಷ್ ಆಶ್ರಯ ಪಡೆದಿದ್ದರು ಎನ್ನಲಾಗಿದೆ. ಈ ಕುರಿತು ಯಡಿಯೂರಪ್ಪ ಅವರಿಗೆ ನೋಟಿಸ್ ನೀಡಲಾಗಿತ್ತು. ಆದರೆ, ಯಡಿಯೂರಪ್ಪ ವಿಚಾರಣೆಗೆ ಹಾಜರಾಗಲಿಲ್ಲ. ಈ ಹಿನ್ನೆಲೆ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ವಿನಯ್ ಅವರು ಮನವಿ ಸಲ್ಲಿಸಿದ್ದರು.
ಈ ಪ್ರಕರಣದ ಪ್ರಮುಖ ಆರೋಪಿಗಳು
2017ರ ಮೇ.11 ರಂದು ರಾಜಾಜಿನಗರದ ಇಸ್ಕಾನ್ ದೇವಾಲಯದ ಬಳಿ 8 ಮಂದಿಯ ತಂಡವೊಂದು, ವಿನಯ್ ಅವರನ್ನು ಕಿಡ್ನಾಪ್ ಮಾಡಲು ಪ್ರಯತ್ನಿಸಿತ್ತು. ಬಿ.ಎಸ್.ಯಡಿಯೂರಪ್ಪ ಆಪ್ತ ಸಹಾಯಕ ಎನ್.ಆರ್.ಸಂತೋಷ್ ಮೊದಲ ಆರೋಪಿ. ಬಿಜೆಪಿ ಯುವಮೋರ್ಚಾ ಬೆಂಗಳೂರು ಘಟಕದ ಕಾರ್ಯದರ್ಶಿ ರಾಜೇಂದ್ರ ಅರಸ್, ರೌಡಿ ಶೀಟರ್ಗಳಾದ ಪ್ರಶಾಂತ್, ಉಮಾಕಾಂತ್, ಚೆಲುವಾ, ಅಭಿಷೇಕ್, ಅರವಿಂದ್, ಅಯ್ಯಪ್ಪ, ಸೆಲ್ವಿ, ಇಂದ್ರೇಶ್, ಶಿವಪ್ಪ, ಅರವಿಂದ್ ಇತರ ಆರೋಪಿಗಳು.
ಸಂತೋಷ್ ವಿರುದ್ಧ ಚಾರ್ಜ್ ಶೀಟ್
ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿತ್ತು. ಮಲ್ಲೇಶ್ವರಂ ಉಪ ವಿಭಾಗದ ಎಸಿಪಿ ಎ.ಆರ್.ಬಡಿಗೇರ್ ಅವರ ನೇತೃತ್ವದಲ್ಲಿ ತನಿಖೆ ನಡೆಯಿತು. ತನಿಖಾಧಿಕಾರಿ ಎ.ಆರ್.ಬಡಿಗೇರ್ ಬೆಂಗಳೂರಿನ 7ನೇ ಎಸಿಎಂಎಂ ನ್ಯಾಯಾಲಯಕ್ಕೆ 760 ಪುಟಗಳ ಮೊದಲ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ
ಪ್ರಕರಣ ರದ್ದು ಮಾಡಲು ಕೋರಿ ಸಂತೋಷ್ ಮನವಿ
ಎನ್.ಆರ್.ಸಂತೋಷ್ ಅವರು ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದು ಮಾಡಲು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಪೊಲೀಸರು ಸಂತೋಷ್ ವಿಚಾರಣೆಗೆ ಸಹಕಾರ ನೀಡುತ್ತಿಲ್ಲ. ಅವರ ಮೊಬೈಲ್ ಪರಿಶೀಲನೆಗೆ ಸಿಗುತ್ತಿಲ್ಲ. ಆದ್ದರಿಂದ, ಅವರ ಜಾಮೀನು ರದ್ದುಪಡಿಸಬೇಕು ಎಂದು ಸೆಷನ್ಸ್ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.