ಹಿಂದಿ ಫಲಕಕ್ಕೆ ಕಪ್ಪು ಮಸಿ ಬಳಿದ ರಕ್ಷಣಾ ವೇದಿಕೆ
ಬೆಂಗಳೂರು, ಜುಲೈ 06 : ಕನ್ನಡಿಗರ ಮೇಲಿನ ಹಿಂದಿ ಹೇರಿಕೆಯ ವಿರುದ್ಧದ ಚಳವಳಿ, ಉರಿಯುತ್ತಿರುವ ಬೆಂಕಿಗೆ ಕೊಪ್ಪರಿಗೆ ಗಟ್ಟಲೆ ತುಪ್ಪ ಸುರಿದಂತೆ ಬೆಂಗಳೂರಿನಲ್ಲಿ ಎಲ್ಲೆಡೆ ಹಬ್ಬಿಕೊಳ್ಳುತ್ತಿದೆ.
ಒಂದು ಕಡೆ ಕನ್ನಡದ ಬಳಕೆ ಎಲ್ಲ ಪ್ರದೇಶಗಳಲ್ಲಿ, ಕಚೇರಿಗಳಲ್ಲಿ, ವಾಣಿಜ್ಯ ಮಳಿಗೆಗಳಲ್ಲಿ ಆಗಬೇಕು ಎಂಬ ಅಭಿಯಾನ ಮುಂದುವರಿಯುತ್ತಿದ್ದರೆ, ಹಿಂದಿ ಭಾಷೆಯಲ್ಲಿ ಬರೆದಿರುವ ಫಲಕಗಳಿಗೆ ಮಸಿ ಬಳಿಯುವ ಚಳವಳಿ ಆರಂಭವಾಗಿದೆ.
ಕನ್ನಡಿಗರಿಗೆ ಗೆಲುವು: ನಮ್ಮ ಮೆಟ್ರೋ ಹಿಂದಿ ಬೋರ್ಡ್ ಗೆ ಬಿತ್ತು ಮಸಿ
ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಬೆಂಗಳೂರಿನ ಕೃಷ್ಣರಾಜಪುರದ ಬಳಿಯಿರುವ ಇಕೋ ಟೆಕ್ ಪಾರ್ಕ್ ಬಳಿಯಿರುವ ಒಂದು ಅಂಗಡಿಗೆ ನುಗ್ಗಿ ಹಿಂದಿಯಲ್ಲಿ ಬರೆದ ಅಕ್ಷರಗಳಿಗೆ ಮಸಿಯನ್ನು ಬಳಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಓಯೆ ಅಮೃತಸರ ಎಂದು ಹಿಂದಿಯಲ್ಲಿ ಬರೆದಿದ್ದ ಬೋರ್ಡಿಗೆ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಕಪ್ಪು ಬಣ್ಣವನ್ನು ಹಚ್ಚಿ, ಕನ್ನಡವಿಲ್ಲದಿದ್ದರೆ ಏನಾಗುತ್ತದೆಂಬ ಎಚ್ಚರಿಕೆಯನ್ನು ಹಿಂದಿ ಪ್ರೇಮಿಗಳಿಗೆ ರವಾನಿಸಿದ್ದಾರೆ.
ಇದಕ್ಕೆ ಉತ್ತರ ಭಾರತೀಯನೊಬ್ಬ, ನನ್ ಮಕ್ಕಳಾ ಇಷ್ಟೊಂದು ಅಸಲಿಯತ್ತು ಇದ್ದರೆ ಅಲ್ಲಿಯೇ ಗಳಿಸಿರಿ, ಅಲ್ಲಿಯದನ್ನೇ ತಿನ್ನಿರಿ. ದಿಲ್ಲಿ ಮುಂಬೈಗೆ ಏಕೆ ಸಾಯಲು ಬರುತ್ತೀರಿ? ಎನ್ನುವ ಕನ್ನಡಿಗರ ಸ್ವಾಭಿಮಾನವನ್ನು ಕೆಣಕುವಂತೆ ಪ್ರತಿಕ್ರಿಯಿಸಿದ್ದಾನೆ.
#WATCH Karnataka Rakshana Vedike members deface Hindi nameplate of a restaurant in a mall near Bengaluru's Eco tech park pic.twitter.com/LzuBvB6kDs
— ANI (@ANI_news) July 6, 2017
ಮತ್ತೊಬ್ಬ ಉತ್ತರ ಭಾರತೀಯ, ದೆಹಲಿ ಜನರು ಕನ್ನಡ ಮತ್ತು ಕನ್ನಡಕ್ಕೆ ಗೌರವ ಕೊಡುತ್ತಾರೆ ಎಂದು 'ದೆಹಲಿ ಕನ್ನಡ ಸೀನಿಯರ್ ಸೆಕಂಡರಿ ಸ್ಕೂಲ್' ಎಂದು ಬರೆಯಲಾಗಿರುವ ಫಲಕವನ್ನು ಟ್ವಿಟ್ಟರಿನಲ್ಲಿ ಹಾಕಿದ್ದಾನೆ. ಹಿಂದಿಗೂ ಸ್ವಲ್ಪ ಗೌರವ ಕೊಡಿ ಎಂದು ಕೇಳಿದ್ದಾರೆ.
ಹಿಂದಿ ಬೋರ್ಡಿನ ಮೇಲೆ ಮಸಿಯನ್ನೇನೋ ಬಳಿಯುತ್ತಿದ್ದಾರೆ. ಆದರೆ, ಹಿಂದಿ ಮಾತನಾಡುವವರ ಬಾಯಿಗೆ ಇವರೇನು ಪಟ್ಟಿ ಹಾಕುತ್ತಾರಾ ಎಂದು ಮಗದೊಬ್ಬ ಪ್ರಶ್ನಿಸಿದ್ದಾನೆ. ಆದರೆ, ಕರ್ನಾಟಕ ರಕ್ಷಣಾ ವೇದಿಕೆಯ ಈ ಕ್ರಮಕ್ಕೆ ಕನ್ನಡಿಗರಿಂದ ಅಂತಹ ಪ್ರಶಂಸೆ ವ್ಯಕ್ತವಾಗುತ್ತಿಲ್ಲ.