ಜನವರಿ 13ರಿಂದ ಕೆಆರ್ ಎಸ್ ನಿಂದ ನಾಲೆಗಳಿಗೆ ನೀರು ಹರಿಸಲು ತೀರ್ಮಾನ
ಬೆಂಗಳೂರು, ಜನವರಿ 11: ಜನವರಿ 13ರ ಶನಿವಾರದಿಂದ ಕೃಷ್ಣರಾಜ ಸಾಗರ ಜಲಾಶಯದ ಅಚ್ಚುಕಟ್ಟು ವ್ಯಾಪ್ತಿಯ ನಾಲೆಗಳಿಗೆ ನೀರು ಹರಿಸಲು ತೀರ್ಮಾನಿಸಲಾಗಿದೆ.
ವಸತಿ ಸಚಿವ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆದ ಕೃಷ್ಣರಾಜ ಸಾಗರ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಕೆಆರ್ಎಸ್ಗೆ ಶತಕದ ಸಂಭ್ರಮ, 100 ಅಡಿ ತಲುಪಿದ ನೀರಿನ ಮಟ್ಟ
ಕೆಆರ್ ಎಸ್ ನೀರು ಸಂಗ್ರಹಣೆಯ ಪರಿಮಾಣವನ್ನು ಪರಿಗಣಿಸಿ ಕುಡಿಯುವ ನೀರು ಹಾಗೂ ಸದ್ಯ ಬೆಳೆದು ನಿಂತಿರುವ ಬೆಳೆಗಳಿಗೆ ಜನವರಿ 13ರಿಂದ ಅಚ್ಚುಕಟ್ಟಿನ ನಾಲೆಗಳಲ್ಲಿ ಕಟ್ಟುಪದ್ಧತಿಯಡಿ ನೀರು ಬಿಡಲಾಗುವುದು. ರೈತರು ಕುಡಿಯಲು ಹಾಗೂ ಬೆಳೆಗಳಿಗೆ ಮಾತ್ರ ನೀರನ್ನು ಮಿತವಾಗಿ ಉಪಯೋಗಿಸುವಂತೆ ಅಧಿಕಾರಿಗಳು ಮನವಿ ಮಾಡುವಂತೆ ತಿಳಿಸಲಾಯಿತು.
ಬನ್ನಾರಿಯಮ್ಮನ್ ಸಕ್ಕರೆ ಕಾರ್ಖಾನೆಗೆ ರೈತರು ಕಬ್ಬು ಸರಬರಾಜು ಮಾಡಿದ ಸಾಗಾಣಿಕೆಯ ವೆಚ್ಚ 2.35 ಕೋಟಿ ರುಪಾಯಿ ಬಿಡುಗಡೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸಚಿವ ಎಂ.ಕೃಷ್ಣಪ್ಪ ನಿರ್ದೇಶನ ನೀಡಿದರು.
ಸಂಸದ ಸಿ.ಎಸ್.ಪುಟ್ಟರಾಜು, ಶಾಸಕರಾದ ಕೆ.ಎಸ್.ಪುಟ್ಟಣ್ಣಯ್ಯ, ಜಿ.ಟಿ.ದೇವೇಗೌಡ, ಜಿಲ್ಲಾಧಿಕಾರಿ ಎನ್.ಮಂಜುಶ್ರೀ, ಜಂಟಿ ಕೃಷಿ ನಿರ್ದೇಶಕಿ ರಾಜಸುಲೋಚನಾ, ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಅಭಿಯಂತರ ವಿಜಯ್ ಕುಮಾರ್ ಹಾಗೂ ಜಿಲ್ಲಾಮಟ್ಟದ ಆಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.