'ಬೀದಿ ಬಿಕ್ಷುಕ' ಪೊಲೀಸ್ ಕಾನ್ಸ್ಟೇಬಲ್ ಚಳಿ ಬಿಡಿಸಿದ ಕೆಆರ್ಎಸ್
ಬೆಂಗಳೂರು, ಜೂ. 25: ಹೋಟೆಲ್ ನಲ್ಲಿ ಊಟ ಪಾರ್ಸಲ್ ಮಾಡಿಸಿಕೊಂಡು ಬಿಲ್ ಕೊಡದೇ ತೆರಳುತ್ತಿದ್ದ ಬೆಂಗಳೂರಿನ ಪೊಲೀಸ್ ಪೇದೆಗೆ ಕೆಅರ್ಎಸ್ ಕಾರ್ಯಕರ್ತರು ಸೆರೆ ಹಿಡಿದು ಮಾನ ಹರಾಜು ಹಾಕಿದ್ದಾರೆ. ಘಟನೆ ಕುರಿತು ಕೆಆರ್ಎಸ್ ಕಾರ್ಯಕರ್ತರು ಸೆರೆ ಹಿಡಿದಿರುವ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
ವಿಜಯನಗರ ಸಮೀಪದ ಹೋಟೆಲ್ಗೆ ಹೋಗಿರುವ ಪೊಲೀಸ್ ಕಾನ್ಸ್ಟೇಬಲ್ ಮಂಜನಾಥ್ ಊಟ ಪಾರ್ಸಲ್ ಕಟ್ಟಿಸಿಕೊಂಡಿದ್ದಾರೆ. ಆದರೆ, ಹಣ ನೀಡದೇ ಅಲ್ಲಿಂದ ವಾಪಸು ಹೋಗುತ್ತಿದ್ದರು. ಇದನ್ನು ರಹಸ್ಯವಾಗಿ ಮೊಬೈಲ್ನಲ್ಲಿ ಸೆರೆ ಹಿಡಿದಿರುವ ಕೆಅರ್ಎಸ್ ಪಕ್ಷದ ಕಾರ್ಯಕರ್ತರೊಬ್ಬ ಸಾರ್ವಜನಿಕವಾಗಿ ಪೇದೆಗೆ ಮಂಗಳಾರತಿ ಮಾಡಿದ್ದಾರೆ. ಕೆಆರ್ಎಸ್ ಕಾರ್ಯಕರ್ತ ಅವಾಜ್ಗೆ ಹೆದರಿ ಆನಂತರ ಹೋಟೆಲ್ ಮಾಲೀಕನಿಗೆ ಬಿಲ್ ಪಾವತಿ ಮಾಡಿ ತೆರಳಿದ್ದಾನೆ. ಪಲ್ಸರ್ ಬೈಕ್ ನಲ್ಲಿ ಪೊಲೀಸ್ ಎಂದು ಸ್ಟಿಕ್ಕರ್ ಅಂಟಿಸಿಕೊಂಡಿರುವ ಪೇದೆ, ಕೆಆರ್ಎಸ್ ಕಾರ್ಯಕರ್ತನ ಮಾತಿಗೆ ಉತ್ತರ ಕೊಡಲಾಗದೇ ಬಿಲ್ ಪಾವತಿ ಮಾಡಿ ತೆರಳಿದ್ದಾರೆ.
ಸಾರ್ವಜನಿಕರ ಆಕ್ರೋಶ:
ಈ ವಿಡಿಯೋ ನೋಡಿ ಬೆಂಗಳೂರಿನ ನಿವಾಸಿಗಳು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೊಯ್ಸಳ , ಚೀತಾ, ಬೀಟ್ ಪೊಲೀಸರ ವಸೂಲಿ ದಂಧೆಯ ಬಗ್ಗೆ ನಾನಾ ಅಭಿಪ್ರಾಯಗಳನ್ನು ದಾಖಲಿಸಿ ಪೊಲೀಸ್ ಇಲಾಖೆಯ ಗಮನ ಸೆಳೆದಿದ್ದಾರೆ. ಇದನ್ನು ನೋಡಿದರೆ ಹೀಗಲಾದರೂ ಹಿರಿಯ ಪೊಲೀಸ್ ಅಧಿಕಾರಿಗಳು ಪುಡಿ ರೋಲ್ ಕಾಲ್ ದಂಧೆಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಆತ್ಮ ವಿಮರ್ಶೆ ಮಾಡಿಕೊಳ್ಳುವಂತಿದೆ.
ಬೀದಿ ಬದಿ ಅಂಗಡಿ ಮಾಲೀಕರಿಂದ ಬೀಟ್ ಪೊಲೀಸರು, ಚೀತಾ, ಹೊಯ್ಸಳ ಪೊಲೀಸರು ತಲಾ ಹತ್ತು, ಇಪ್ಪತ್ತು ರೂಪಾಯಿ ಸಂಗ್ರಹಿಸುವ ದೃಶ್ಯ ಗಳು ಸಾಮಾನ್ಯವಾಗಿ ಕಂಡು ಬರುತ್ತವೆ. ಪೊಲೀಸರಿಗೆ ಹಣ ನೀಡದಿದ್ದರೆ ಏನಾದರೂ ಕಿರಿಕ್ ಮಾಡಿ ಅಂಗಡಿ ಖಾಲಿ ಮಾಡಿಸುತ್ತಾರೆ ಎನ್ನುವ ಭಯದಲ್ಲಿ ಅನಿವಾರ್ಯವಾಗಿ ಎಲ್ಲಾ ಅಂಗಡಿಯವರು ಕೊಡುತ್ತಾರೆ. ಹೀಗಾಗಿ ಹಣ ಕೊಟ್ಟವರು ಯಾರೂ ಪೊಲೀಸರನ್ನು ಎದುರು ಹಾಕಿಕೊಂಡು ದೂರು ಕೊಡಲು ಮುಂದೆ ಬರಲ್ಲ ಎಂದು ಬೀದಿ ಬಂದಿ ಅಂಗಡಿ ವ್ಯಾಪಾರಿ ಹೇಳುವ ಮಾತು.
ಹಿರಿಯ ಅಧಿಕಾರಿಗಳ ಆತ್ಮವಿಮರ್ಶೆ:
ಇನ್ನು ಕೆಲವು ಹಿರಿಯ ಅಧಿಕಾರಿಗಳು ಸಹ ಐಶಾರಾಮಿ ಹೋಟೆಲ್, ರೆಸಾರ್ಟ್ ಬುಕ್ ಮಾಡಿದ್ರೂ ಪೊಲೀಸರು ಎಂಬ ಕಾರಣಕ್ಕೆ ಹಣ ಕೊಡದೇ ವಾಪಸು ಬರುವುದು ಸರ್ವೆ ಸಾಮಾನ್ಯ. ಬರುವ ಸಂಬಳದಲ್ಲಿ ಪೊಲೀಸರು ಪ್ರಾಮಾಣಿಕ ಜೀವನ ನಡೆಸುವುದನ್ನು ಕರಗತ ಮಾಡಿಕೊಳ್ಳಬೇಕು. ಈ ಬೀದಿಯಲ್ಲಿ ವಸೂಲಿ ಮಾಡುವುದನ್ನು ಮೊದಲು ನಿಲ್ಲಿಸಬೇಕು. ಪುಟ್ ಪಾತ್ ನಲ್ಲಿ ವ್ಯಾಪಾರ ಮಾಡಿದವರಿಂದ ಹಣ ಪಡೆದು ಬದುಕುವ ಅನಿವಾರ್ಯತೆ ಪೊಲೀಸರಿಗೆ ಏನಿರುತ್ತೆ ? ಬೀದಿಯಲ್ಲಿ ವ್ಯಾಪಾರ ಮಾಡಿದವರಿಂಗಿತಲೂ ನಿಕೃಷ್ಟವಾಗಿರುತ್ತದೆಯೇ ? ಈ ಬಗ್ಗೆ ಪೊಲೀಸರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದು ಹಿರಿಯ ಪೊಲೀಸ್ ಅಧಿಕಾರಿ ಈಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ವಾಚಾಮಗೋಚರ ಬೈಯ್ಗುಳ:
ಕೆಆರ್ಎಸ್: ಒಂದು ನಿಮಿಷ. ಪಾರ್ಸಲ್ ತಗೊಂಡ್ರಲ್ಲ, ಯಾಕೆ ದುಡ್ಡು ಕೊಡಲಿಲ್ಲ ?
ಪೇದೆ: ಮರೆತೋದೆ ಸರ್.
ಕೆಆರ್ಎಸ್ : ಮರೆತೋದಾ ? ಏನು ಹೆಸರು ?
ಪೇದೆ: ಮಂಜು, ಮಂಜು ಸರ್...
ಕೆಆರ್ಎಸ್: ಐಡಿ ಕಾರ್ಡ್ ತೋರ್ಸು, ಏ. ಐಡಿ ಕಾರ್ಡ್ ತೋರ್ಸು, ಮಾತಾಡಬೇಡ. ಮೈಂಟೇನ್ ಡಿಸ್ಟೆನ್ಸ್..
ಪೇದೆ: ಆಯ್ತು ಸರ್.
ಕೆಅರ್ಎಸ್: ಮಂಜು, ಯಾವ ಸ್ಟೇಷನ್ ವಿಜಯನಗರ ನಾ ಸರಸ್ವತಿನಗರ ನಾ ? ಹೊಟ್ಟೆಗೆ ಏನು ತಿಂತೀರಾ ? ಅನ್ನ ತಿಂತೀಯಾ ..ಲ್ ತಿಂತೀಯ ? ನಾಚಿಕೆ ಆಗಲ್ಲವಾ ? ಕೆಅರ್ಎಸ್ ಪಕ್ಷದ ವಿಡಿಯೋಗಳು ನೋಡ್ತಿಲ್ಲವಾ ?
ಪೇದೆ: ಆಯ್ತು ಸರ್. ಸಾರಿ ಇಲ್ಲಿ ಕೇಳಿ..
ಕೆಆರ್ಎಸ್ : ಏಯ್, ಏನು ಸಾರಿ ಹೇಳು... ಸಾರಿ ಹೇಳು.. ಅಲ್ಲಿ ದುಡ್ಡು ಕೊಡೋ.. ಕೊಡೋ
ಪೇದೆ: ಸಾರ್.. ಇಲ್ಲಿಕೇಳಿ..
ಕೆಆರ್ಎಸ್ : ಏಯ್ .. ಮಾತಾಡಬೇಡ.. ಮಾತಾಡಬೇಡ. ಹೋಗಿ ಅಲ್ಲಿ ದುಡ್ಡು ಕೊಡು.. ರಾ..ಕಲ್. ಪೊಲೀಸರು ಹೆಸರು ಕೆಡಿಸಿಕೊಳ್ತಿದ್ದೀರಾ. ಯೂಸ್ಲೆಸ್ ಫೆಲೋಸ್...