ಬಸವನಗುಡಿಯ ಶ್ರೀಪುತ್ತಿಗೆ ಮಠದಲ್ಲಿ ವೈಭವದ ಶ್ರೀಕೃಷ್ಣ ಲೀಲೋತ್ಸವ
ಬೆಂಗಳೂರು, ಆಗಸ್ಟ್ 23 : ಅಸುರಾರಿ, ಬಾಲಮುಕುಂದನ ಜನ್ಮದಿನ ಗೋಕುಲಾಷ್ಟಮಿ ಪ್ರಯುಕ್ತ ಬಸವನಗುಡಿಯ ಉಡುಪಿ ಶ್ರೀಪುತ್ತಿಗೆ ಮಠದ ಗೋವರ್ಧನಗಿರಿ ಕ್ಷೇತ್ರದಲ್ಲಿ ಆಗಸ್ಟ್ 26ರಂದು ವೈಭವದ 'ಶ್ರೀಕೃಷ್ಣ ಜಯಂತೀ ಮತ್ತು ಶ್ರೀಕೃಷ್ಣ ಲೀಲೋತ್ಸವ' ನೆರವೇರಲಿದೆ.
ಇದಕ್ಕೆ ಪೂರ್ವಭಾವಿಯಾಗಿ ಆಗಸ್ಟ್ 19ರಿಂದಲೇ 'ಅಷ್ಟಮಾವತಾರಿಗೆ ಅಷ್ಟೋತ್ಸವ' ನಡೆಯುತ್ತಿದ್ದು, ಆಗಸ್ಟ್ 24ರ ಸಂಜೆ 6ರಿಂದ 7 ಗಂಟೆಯವರೆಗೆ ನಡೆಯುವ ಜ್ಞಾನೋತ್ಸವದಲ್ಲಿ ಡಾ.ಎನ್. ವೆಂಕಟೇಶಾಚಾರ್ಯ ಅವರಿಂದ 'ಕುರುಕ್ಷೇತ್ರದಲ್ಲಿ ಶ್ರೀಕೃಷ್ಣ' ವಿಷಯದ ಕುರಿತು ಉಪನ್ಯಾಸ ಆಯೋಜಿಸಲಾಗಿದೆ. ಬಳಿಕ ರಾತ್ರಿ 7ರಿಂದ 8.30ರವರೆಗೆ ಕುಮಾರಿ ತುಷಾರಾ ಎಲ್.ಆಚಾರ್ಯ ಮತ್ತು ತಂಡದಿಂದ 'ಶ್ರೀನಿವಾಸ ಕಲ್ಯಾಣ' ಹರಿಕಥಾ ಕಾಲಕ್ಷೇಪ ನಡೆಯಲಿದೆ.
ಆ.25ರ ಅಷ್ಟೋತ್ಸವದಲ್ಲಿ..
ಆಗಸ್ಟ್ 25ರಂದು ಬೆಳಗ್ಗೆ 7ರಿಂದ ಆರಂಭಗೊಳ್ಳುವ ಕೀರ್ತನೋತ್ಸವದೊಂದಿಗೆ ಶ್ರೀಕೃಷ್ಣ ಜಯಂತಿ ಆರಂಭಗೊಳ್ಳಲಿದೆ. ಇದರಂಗವಾಗಿ ಮಧ್ಯಾಹ್ನ 3ರಿಂದ ರಾತ್ರಿ 11 ಗಂಟೆವರೆಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ.
ಇದೇ ದಿನ ಸಂಜೆ 4.30ರಿಂದ 5.30ರವರೆಗೆ 'ಶ್ರೀಕೃಷ್ಣ ಮತ್ತು ಭಾರತೀಯ ಸಂಸ್ಕೃತಿ' ಎಂಬ ವಿಚಾರದ ಕುರಿತು ಖ್ಯಾತ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರು ತಮ್ಮ ಮನೋಜ್ಞ ಚಿಂತನಾ ಲಹರಿ ಹರಿಸಲಿದ್ದಾರೆ. ಬಳಿಕ ಪುತ್ತಿಗೆ ಶ್ರೀಗಳಿಂದ ಶ್ರೀಕೃಷ್ಣನಿಗೆ ತುಳಸಿಯ ಅರ್ಚನೆ, ಮಹಾಪೂಜೆ ನೆರವೇರಲಿದ್ದು, ರಾತ್ರಿ 11.58ಕ್ಕೆ ಶ್ರೀಗಳು, ಶ್ರೀಕೃಷ್ಣನಿಗೆ ಅರ್ಘ್ಯಪ್ರದಾನ ಮಾಡುವ ಮೂಲಕ ಶ್ರೀಕೃಷ್ಣ ಜಯಂತ್ಯುತ್ಸವ ಸಮಾಪನಗೊಳ್ಳಲಿದೆ.
ಆ.26ಕ್ಕೆ ಶ್ರೀಕೃಷ್ಣ ಲೀಲೋತ್ಸವ.. ಗೋವರ್ಧನಗಿರಿಧಾರಿಗೆ ರಜತ ರಥ ಸಮರ್ಪಣೆ
ಶ್ರೀಕೃಷ್ಣಾಷ್ಟಮಿಯ ಪ್ರಯುಕ್ತ ಬಸವನಗುಡಿಯ ಶ್ರೀಗೋವರ್ಧನಗಿರಿಯಲ್ಲಿ ಅದ್ದೂರಿ ಶ್ರೀಕೃಷ್ಣಲೀಲೋತ್ಸವ ನಡೆಯಲಿದೆ. ಮಧ್ಯಾಹ್ನ 12ರಿಂದ ಸಂಜೆ 4 ಗಂಟೆವರೆಗೆ ಶ್ರೀಪುತ್ತಿಗೆಮಠದಲ್ಲಿ ಮೊಸರು ಕುಡಿಕೆ ಸ್ಪರ್ಧೆ, ಚಿಣ್ಣರಿಗಾಗಿ ಮುದ್ದುಕೃಷ್ಣರ ಸ್ಪರ್ಧೆ ನಡೆಯಲಿದೆ. ಸಂಜೆ 5ಕ್ಕೆ ಪುತ್ತಿಗೆ ಶ್ರೀಗಳು ಶ್ರೀಗೋವರ್ಧನ ಗಿರಿಧಾರಿಗೆ ರಜತ ರಥ ಸಮರ್ಪಿಸಲಿದ್ದಾರೆ. ನಂತರ ವೈಭವೋಪೇತ ವಿಟ್ಲಪಿಂಡಿ ಮತ್ತು ಮೊಸರು ಕುಡಿಕೆ ಉತ್ಸವ ನೆರವೇರಲಿದೆ.
ಮಾಹಿತಿಗೆ ಸಂಪರ್ಕಿಸಿ: 9845820775