'ದೇವರ ಮೇಲೆ ಭಾರ ಹಾಕಿದ ಶ್ರೀರಾಮುಲು': ಕೃಷ್ಣ ಬೈರೇಗೌಡ ಗರಂ
ಬೆಂಗಳೂರು, ಜುಲೈ 16: ಕೊರೊನಾ ವೈರಸ್ ನಿರ್ವಹಿಸುವ ವಿಚಾರದಲ್ಲಿ ದೇವರ ಮೇಲೆ ಭಾರ ಹಾಕಿದ ಶ್ರೀರಾಮುಲು ಅವರ ಹೇಳಿಕೆಯನ್ನು ಕಾಂಗ್ರೆಸ್ ಮಾಜಿ ಸಚಿವ ಕೃಷ್ಣ ಬೈರೇಗೌಡ ಖಂಡಿಸಿದ್ದಾರೆ.
ಕೊವಿಡ್ ನಿರ್ವಹಣೆ ವಿಚಾರಕ್ಕೆ ಸಂಬಂಧಪಟ್ಟಂತೆ ನಿನ್ನೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಸಂದರ್ಭದಲ್ಲಿ ಶ್ರೀರಾಮುಲು ಅವರು 'ಕೊರೊನಾ ನಿಯಂತ್ರಣ ಯಾರ ಕೈಯಲ್ಲಿದೆ? ಆ ಭಗವಂತನೇ ಕಾಪಾಡಬೇಕು'' ಎಂದು ಹೇಳಿದ್ದರು. ಈ ಹೇಳಿಕೆ ಈಗ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ಶ್ರೀರಾಮುಲು ಸವಾಲು
'ವಕ್ರ ಮಾರ್ಗದಲ್ಲಿ ಆಡಳಿತವನ್ನು ಕಸಿದುಕೊಂಡಷ್ಟು ಸುಲಭವಲ್ಲ ಅಧಿಕಾರ ನಡೆಸುವುದು. ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಕೊವಿಡ್ ದುರಂತದ ಸಂದರ್ಭದಲ್ಲಿ ಹಣ ಸಂಪಾದಿಸುಲು ಅಧಿಕಾರದಲ್ಲಿದ್ದೀರಾ? ನೀವು ಅಸಮರ್ಥ ಎಂದು ಒಪ್ಪಿಕೊಂಡಿದ್ದೀರಾ' ಎಂದು ಕೃಷ್ಣ ಬೈರೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಕರ್ನಾಟಕವನ್ನು ದೇವರ ಕೈಗೆ ಬಿಟ್ಟಿದ್ದೀರಾ. ಹಾಗಾದ್ರೆ ಮುಂದಿನ ಕೆಲಸವನ್ನು ಮಾಡಿ. ರಾಜೀನಾಮೆ ಕೊಟ್ಟು ಮನೆಗೆ ಹೋಗಿ'' ಎಂದು ಒತ್ತಾಯಿಸಿದ್ದಾರೆ.
ಇದೇ ವಿಚಾರವಾಗಿ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಸಹ ಪ್ರತಿಕ್ರಿಯಿಸಿದ್ದು, ''ಶ್ರೀರಾಮುಲು ಅವರ ಹೇಳಿಕೆ ಯಡಿಯೂರಪ್ಪ ಸರ್ಕಾರದ ಸಾಮರ್ಥ್ಯ ಬಹಳ ಕಳಪೆ ಎಂದು ಪ್ರತಿಫಲಿಸುತ್ತದೆ. ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಸಾಧ್ಯವಾಗದ ಸರ್ಕಾರ ನಮಗೆ ಏಕೆ ಬೇಕು?'' ಎಂದು ಪ್ರಶ್ನಿಸಿದ್ದಾರೆ.
ಈ ವಿವಾದಾತ್ಮಕ ಹೇಳಿಕೆಗೆ ಬಗ್ಗೆ ಶ್ರೀರಾಮುಲು ಸ್ಪಷ್ಟನೆ ನೀಡಿದ್ದು, ''ನಮ್ಮೆಲ್ಲರ ಮೇಲೆ ದೇವರ ಕೃಪೆ ಇರಲಿ'' ಎಂದು ನಾನು ಹೇಳಿದ್ದು. ಅದನ್ನು ತಪ್ಪಾಗಿ ಅರ್ಥೈಸಲಾಗಿದೆ. ಮುಖ್ಯಮಂತ್ರಿ ಜೊತೆ ಸೇರಿ ನಾವೆಲ್ಲರೂ ಹಗಲಿರಳೂ ಕೆಲಸ ಮಾಡುತ್ತಿದ್ದೇವೆ'' ಎಂದಿದ್ದಾರೆ.