ಜಿಕೆವಿಕೆ ಆವರಣದಲ್ಲಿ ಕೃಷಿ ಮೇಳ, ಸಾವಯವ ಊಟ ಸೇವಿಸಿ
ಬೆಂಗಳೂರು, ನವೆಂಬರ್ 10: ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣ (ಜಿಕೆವಿಕೆ) ದಲ್ಲಿ ನವೆಂಬರ್ 16 ರಿಂದ 19ರವರೆಗೆ 'ಕೃಷಿ ಮೇಳ' ಆಯೋಜಿಸಲಾಗಿದೆ.
ಜಿಕೆವಿಕೆ ಮುಖ್ಯದ್ವಾರದಿಂದ ಕೃಷಿ ಮೇಳದ ಸ್ಥಳಕ್ಕೆ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ರಿಯಾಯಿತಿ ದರದಲ್ಲಿ ಸಾವಯವ ಊಟದ ವ್ಯವಸ್ಥೆ ಮಾಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
'ಕೃಷಿ, ಜಲಾನಯನ ಅಭಿವೃದ್ಧಿ, ತೋಟಗಾರಿಕೆ, ರೇಷ್ಮೆ, ಅರಣ್ಯ, ಪಶುಸಂಗೋಪನೆ, ಮೀನುಗಾರಿಕೆ, ಕೃಷಿ ಮಾರುಕಟ್ಟೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳು, ಕರ್ನಾಟಕ ಹಾಲು ಮಹಾಮಂಡಳಿ ಆಶ್ರಯದಲ್ಲಿ ಮೇಳ ನಡೆಯುತ್ತಿದೆ' ಎಂದು ವಿಶ್ವವಿದ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಕೃಷಿ ಮೇಳದ ಆಕರ್ಷಣೆಗಳು: ಕಬ್ಬು, ಮೇವಿನ ಅಲಸಂದೆ, ಮುಸುಕಿನ ಜೋಳ, ಅಲಸಂದೆ, ತೊಗರಿ, ದಂಟು, ನೇರಳೆ, ಸ್ವೀವಿಯ ರೆಬುಡಿಯ ಹೊಸ ತಳಿಗಳು ಮೇಳದಲ್ಲಿ ಬಿಡುಗಡೆಗೊಳ್ಳಲಿವೆ.
ಸಮಗ್ರ ಕೃಷಿ ಪದ್ಧತಿ ಕುರಿತ ವಿಚಾರಸಂಕಿರಣ, ಅನ್ನದಾತರಿಗೆ ಸನ್ಮಾನ, ಕೃಷಿ ವಸ್ತು ಪ್ರದರ್ಶನ, ರೈತರ ಸಮಸ್ಯೆಗಳಿಗೆ ತಜ್ಞರಿಂದ ಸಲಹೆ, ರೈತರಿಂದ ರೈತರಿಗಾಗಿ ಚರ್ಚಾಗೋಷ್ಠಿ, ಕೃಷಿ ಪರಿಕರ ಹಾಗೂ ಪ್ರಕಟಣೆಗಳ ಮಾರಾಟ ಮೇಳದಲ್ಲಿ ಕಾಣಬಹುದು.
'ಈ ಬಾರಿ ಮೇಳದಲ್ಲಿ 175 ಕೃಷಿ ಎಂಜಿನಿಯರಿಂಗ್, 65 ಪಶು ಸಂಗೋಪನೆ, 40 ಆಹಾರ ಮಳಿಗೆಗಳು ಸೇರಿ 300ಕ್ಕೂ ಹೆಚ್ಚು ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಸುಮಾರು 15 ಲಕ್ಷಕ್ಕೂ ಹೆಚ್ಚು ರೈತರು ಮೇಳದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ' ಎಂದು ವಿಶ್ವವಿದ್ಯಾಲಯ ಹೇಳಿದೆ.