ರಸ್ತೆ ಕಾಮಗಾರಿ: ಮರ ಕಡಿಯುವ ಬದಲು ಸ್ಥಳಾಂತರಕ್ಕೆ ನಿರ್ಧಾರ
ಬೆಂಗಳೂರು ಜು.10: ಕರ್ನಾಟಕ ಲೋಕೊಪಯೋಗಿ ಇಲಾಖೆ (ಪಿಡಬ್ಲುಡಿ) ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಹಸಿರು ಉಪಕ್ರಮದ ಭಾಗವಾಗಿ ರಾಜ್ಯದಲ್ಲಿ ರಸ್ತೆ ಕಾಮಗಾರಿ ಅಥವಾ ಹೆದ್ದಾರಿ ವಿಸ್ತರಣೆ ಕಾಮಗಾರಿ ಕೈಗೆತ್ತಿಕೊಳ್ಳುವಾಗ ಮರಗಳನ್ನು ಕಡಿಯದೇ ಅವುಗಳನ್ನು ಬೇರೆಡೆ ಸ್ಥಳಾಂತರಿಸಲು ನಿರ್ಧರಿಸಿದೆ.
ರಾಷ್ಟ್ರೀಯ ಹೆದ್ದಾರಿ-4 (ಎನ್ಎಚ್-4)ರಲ್ಲಿನ ಬೂದಿಗೆರೆ ಕ್ರಾಸ್ ನಿಂದ ನೆಲಮಂಗಲ, ಅಲ್ಲಿಂದ ಗೊಲ್ಲಹಳ್ಳಿ, ರಾಜನಕುಂಟೆಯಿಂ ದೇವನಹಳ್ಳಿ, ಹಾರೋಹಳ್ಳಿಯಿಂದ ಬಿಡದಿ- ಜಿಗಣಿ, ಜಿಗಣಿಯಿಂದ ಬನ್ನೇರುಘಟ್ಟ- ಆನೇಕಲ್, ಆನೇಕಲ್ ನಿಂದ ಅತ್ತಿಬೆಲೆ ರಸ್ತೆಯುದ್ದಕ್ಕೂ ಇದ್ದ ಸುಮಾರು 1,500 ಮರಗಳನ್ನು ಈಗಾಗಲೇ ಲೋಕೊಪಯೋಗಿ ಇಲಾಖೆ ಬೇರೆಡೆಗೆ ಯಶಸ್ವಿಯಾಗಿ ಸ್ಥಳಾಂತರ ಮಾಡಿದೆ. ರಸ್ತೆ ಅಭಿವೃದ್ಧಿ ಹಿನ್ನೆಲೆಯಲ್ಲಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಈಗಾಗಲೇ 1500 ಮರ ಸ್ಥಳಾಂತರ
ಉದ್ದೇಶಿತ 155 ಕಿ.ಮೀ. ರಸ್ತೆ ಆಸು ಪಾಸು ಇದ್ದ ಒಟ್ಟು ಸುಮಾರು 2,100 ಮರಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಗುರುತಿಸಲಾಗಿದೆ. ಈ ಪೈಕಿ ಈಗಾಗಲೇ 1,500 ಮರಗಳನ್ನು ಸ್ಥಳಾಂತರ ಮಾಡಲಾಗಿದೆ ಎಂದು ಪಿಡಬ್ಲ್ಯುಡಿ ಸಚಿವ ಸಿಸಿ ಪಾಟೀಲ್ ಮಾಹಿತಿ ನೀಡಿದ್ದಾರೆ.
ಜೆಪಿ ನಗರ ದೇಗುಲದಲ್ಲಿ 1 ಲಕ್ಷ ಆಟದ ಸಾಮಗ್ರಿ ಬಳಸಿ ವಿಶೇಷ ಆಲಂಕಾರ
ರಾಜ್ಯದಾದ್ಯಂತ ಹಲವಾರು ರಸ್ತೆ ವಿಸ್ತರಣೆ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿರುವುದರಿಂದ, ಸಾವಿರಾರು ಮರಗಳನ್ನು ಕಡಿಯಬೇಕಾಗುತ್ತದೆ. ಇದು ಮನಗಂಡ ಇಲಾಖೆ ಮರ ಕಡಿಯದೇ ಸ್ಥಳಾಂತರಿಸಲು ಮುಂದಾಗಿರುವುದು ಪರಿಸರ ಪ್ರೇಮಿಗಳಲ್ಲಿ ಸಂತಸ ಮೂಡಿಸಿದೆ. ಅದೇ ರೀತಿ ಭವಿಷ್ಯದಲ್ಲಿ ರಾಜ್ಯದಲ್ಲಿ ಕೈಗೊಳ್ಳಲಿರುವ ರಸ್ತೆ ಅಭಿವೃದ್ಧಿ ಯೋಜನೆಗಳಲ್ಲಿ ಮರಗಳ ಸ್ಥಳಾಂತರಕ್ಕೆ ಆದ್ಯತೆ ನೀಡಲಿದ್ದೇವೆ ಎಂದು ಅವರು ತಿಳಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ನಿಗಮದ ವ್ಯವಸ್ಥಾಪಕ ನಿರ್ದೇಶಕ ಆರ್.ಶಿವಪ್ರಸಾದ್ ಅವರು, ಉದ್ದೇಶಿತ ಮರಗಳನ್ನು ಮಂಡೂರು, ಹೊಸಕೋಟೆ, ಬೆಟ್ಟಗಟ್ಟೆ, ಹೆಸರಘಟ್ಟ, ಮೈಲನಹಳ್ಳಿ, ಸೊಣ್ಣೇನಹಳ್ಳಿ, ದಿಬ್ಬೂರು ಸೇರಿದಂತೆ ಮತ್ತಿತರ ಗ್ರಾಮಗಳ ಸಮೀಪದಲ್ಲಿರುವ ಅರಣ್ಯ ಪ್ರದೇಶಗಳಲ್ಲಿ ಸ್ಥಳಾಂತರಿಸಲಾಗಿದೆ. ಇದಕ್ಕಾಗಿ ಸಾಕಷ್ಟು ಸಮಯ ವ್ಯಯಿಸಿದ್ದೇವೆ ಎಂದರು.
ಮರ ಸ್ಥಳಾಂತರಕ್ಕಾಗಿ ತಜ್ಞರ ಸಮಿತಿ ರಚನೆ
ರಸ್ತೆ ಅಭಿವೃದ್ಧಿ ಪ್ರಸ್ತಾವನೆಗೂ ಮುನ್ನವೆ ಲೋಕೋಪಯೋಗಿ ಇಲಾಖೆ ಮರಗಳ ಸ್ಥಳಾಂತರ ಕುರಿತು ಅಧ್ಯಯನ ನಡೆಸಲು ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ತಜ್ಞರ ಸಮಿತಿ ರಚಿಸಲಾಗಿತ್ತು. ತಜ್ಞರ ಸಮಿತಿ ನೀಡಿದ ವರದಿ, ಮಾರ್ಗದರ್ಶನ ಮೇರೆಗೆ ಮರಗಳನ್ನು ಸ್ಥಳಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.
ಯಶವಂತಪುರ- ಹೊಸೂರು ರೈಲು ಪುನಶ್ಚೇತನಕ್ಕೆ ಚಿಂತನೆ
ಈಗಾಗಲೇ ಸ್ಥಳಾಂತರಗೊಂಡ 1,500 ಮರಗಳಿಗೆ ಯಾವುದೇ ರೀತಿಯ ಹಾನಿಯಾಗದಂತೆ ಹಾಗೂ ಅವುಗಳನ್ನು ಇತರೆಡೆಗೆ ತೆಗೆದೊಯ್ದು ನೆಟ್ಟಾಗ ಪುನಃ ಬೆಳೆಯುವಂತೆ ಎಚ್ಚರವಹಿಸಿ ಬೇರುಗಳಿಗೆ ಹಾನಿ ಮಾಡದ ಹಾಗೆ ಒಯ್ಯಲಾಗಿದೆ. ಮುಖ್ಯವಾಗಿ ಮರಗಳು ಒಂದೆಡೆ ಯಿಂದ ಮತ್ತೊಂದೆಡೆ ಸ್ಥಳಾಂತರಿಸುವಾಗ ಅದರ ಬೆಳವಣಿಗೆ ದೃಷ್ಟಿಯಿಂದ ಅಲ್ಲಿನ ಮಣ್ಣು ಮರಕ್ಕೆ ಸರಿ ಹೊಂದುತ್ತದೆ ಎಂಬುದನ್ನು ಪರೀಕ್ಷೆಗಳ ಮೂಲಕ ಖಚಿತಪಡಿಸಿಕೊಳ್ಳಲಾಗಿದೆ.
ಶಾಲೆ, ಕಾಲೇಜು, ನ್ಯಾಯಾಲಯ ಕಟ್ಟಡಗಳ ನಿರ್ಮಾಣ ಕಾಮಗಾರಿ ಆರಂಭಿಸುವಾಗಲು ಸಹ ಆ ಜಾಗದಲ್ಲಿಇ ಇರುವ ಮರಗಳನ್ನು ಕಡ್ಡಾಯವಾಗಿ ಸ್ಥಳಾಂತರಿಸುವಂತೆ ಲೋಕೋಪಯೋಗಿ ಇಲಾಖೆ ಸುತ್ತೋಲೆ ಹೊರಡಿಸಿದೆ ಎಂದು ಮೂಲಗಳು ತಿಳಿಸಿವೆ.