ಕೆ.ಆರ್.ಪುರ: ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ, ಮತ್ತೆ ಬೈರತಿ ಬಸವರಾಜ್ ಗೆಲುವಿಗೆ ದಾರಿ?
ಬೆಂಗಳೂರು, ನ 4: ಡಿಸೆಂಬರ್ ಐದಕ್ಕೆ ನಿಗದಿಯಾಗಿರುವ ಹದಿನೈದು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬೆಂಗಳೂರು ನಗರ ವ್ಯಾಪ್ತಿಯ ಕೆ.ಆರ್.ಪುರ ಕ್ಷೇತ್ರ ಕೂಡಾ ಒಂದು.
ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟಿನಿಂದ ಸ್ಪರ್ಧಿಸಿದ್ದ ಬೈರತಿ ಬಸವರಾಜ (ಬಿ.ಎ.ಬಸವರಾಜ), ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ, ಆಯ್ಕೆಯಾಗಿದ್ದರು. ಆದರೆ, ಪಕ್ಷದ ವಿರುದ್ದ ಸಟೆದು, ರಾಜೀನಾಮೆ ನೀಡಿದ್ದರು.
15 ಕ್ಷೇತ್ರದ ಉಪ ಚುನಾವಣೆ; 8 ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ
ಅನರ್ಹ ಶಾಸಕರಲ್ಲಿ ಒಬ್ಬರಾಗಿರುವ ಬೈರತಿ, ಮುಂದಿನ ತಿಂಗಳು ನಡೆಯಲಿರುವ ಉಪಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಲು ಮುಂದಾಗಿದ್ದಾರೆ. ಬದಲಾವಣೆ ಏನಂದರೆ, (ಸುಪ್ರೀಂಕೋರ್ಟ್ ತೀರ್ಪು ವ್ಯತಿರಿಕ್ತವಾಗಿ ಬರದೇ ಇದ್ದರೆ), ಕಾಂಗ್ರೆಸ್ ಬದಲು, ಬಿಜೆಪಿ ಟಿಕೆಟಿನಿಂದ ಬೈರತಿ ಸ್ಪರ್ಧಿಸುವ ಸಾಧ್ಯತೆಯಿದೆ.
ಸುಪ್ರೀಂ ಅಂಗಣದಲ್ಲಿಂದು ಬಿಎಸ್ವೈ ಆಡಿಯೋ: ಅನರ್ಹರನ್ನು ದೇವರೇ ಕಾಪಾಡಬೇಕು!
ಹದಿನೈದು ಕ್ಷೇತ್ರಗಳ ಪೈಕಿ, ಎಂಟು ಕ್ಷೇತ್ರಗಳಿಗೆ ಕಾಂಗ್ರೆಸ್ ತನ್ನ ಹುರಿಯಾಳನ್ನು ಘೋಷಿಸಿಯಾಗಿದೆ. ತಮಗೆ ಬೇಕಾದವರಿಗೆ ಟಿಕೆಟ್ ಸಿಗಲಿಲ್ಲ ಎಂದು ಅವರ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದೂ ಆಗಿದೆ. ಕೆ.ಆರ್.ಪುರನಲ್ಲಿ ಕೂಡಾ ಇದೇ ಕಥೆ.
ನಂದೀಶ್ ರೆಡ್ಡಿಯವರನ್ನು ಸಮಾಧಾನ ಪಡಿಸಿದ ಯಡಿಯೂರಪ್ಪ
ಕೆ.ಆರ್.ಪುರಂ ಕ್ಷೇತ್ರದಿಂದ, ಬೈರತಿ ಬಸವರಾಜ್, ಹೋದ ವರ್ಷದ ಚುನಾವಣೆಯಲ್ಲಿ, ಕಟ್ಟಾ ಸಂಘ ಪರಿವಾರದ ಮುಖಂಡರೂ ಆಗಿರುವ ನಂದೀಶ್ ರೆಡ್ಡಿ ಎದುರು, 32,729 ಮತಗಳ ಅಂತರದಿಂದ ಗೆದ್ದಿದ್ದರು. ನಂದೀಶ್ ರೆಡ್ಡಿ ಇಲ್ಲಿನ ಟಿಕೆಟ್ ಆಕಾಂಕ್ಷಿಯಾಗಿದ್ದರು. ಇವರನ್ನು ಸಮಾಧಾನ ಪಡಿಸಲು, ಯಡಿಯೂರಪ್ಪ ಹರಸಾಹಸ ಪಡುತ್ತಿದ್ದರು. ಕೊನೆಗೆ,ಎ ಬಿಎಂಟಿಸಿಗೆ ಅಧ್ಯಕ್ಷರನ್ನಾಗಿ ನಂದೀಶ್ ರೆಡ್ಡಿಯವರನ್ನು ನೇಮಿಸಿ ಸರಕಾರ ಆದೇಶ ಹೊರಡಿಸಿದೆ. ಸಂಪುಟ ದರ್ಜೆಯ ಸ್ಥಾನಮಾನವನ್ನು ನಂದೀಶ್ ಗೆ ನೀಡುವ ಮೂಲಕ, ಅವರ ಸಿಟ್ಟನ್ನು ಶಮನಗೊಳಿಸುವ ಕೆಲಸವನ್ನು ಯಡಿಯೂರಪ್ಪ ಮಾಡಿದ್ದರು.
ಎಂಎಲ್ಸಿ ನಾರಾಯಣಸ್ವಾಮಿಯವರಿಗೆ ಟಿಕೆಟ್
ಕಾಂಗ್ರೆಸ್, ಈ ಕ್ಷೇತ್ರದಲ್ಲಿ ಸ್ಪರ್ಧಿಸಲು ಎಂಎಲ್ಸಿ ಎಂ.ನಾರಾಯಣಸ್ವಾಮಿಯವರಿಗೆ ಟಿಕೆಟ್ ನೀಡಿದೆ. ಆದರೆ, ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಬಯಸಿದ್ದ ಟಿಕೆಟ್ ಒಬ್ಬರಿಗೆ, ಸಿಕ್ಕಿದ್ದು ಇನ್ನೊಬ್ಬರಿಗೆ. ಹಾಗಾಗಿ, ಕಾಂಗ್ರೆಸ್ ಕಾರ್ಯಕರ್ತರು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಕಳೆದ ಶನಿವಾರ (ನ 2) ಕೆ.ಆರ್.ಪುರ ಅಸೆಂಬ್ಲಿ ಕ್ಷೇತ್ರದ ಮತದಾರರಲ್ಲಿ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಈ ಸಂಬಂಧ ಕ್ಷಮೆಯಾಚಿಸಿದ್ದೂ ಆಗಿದೆ. (ಚಿತ್ರದಲ್ಲಿ: ನಾರಾಯಣಸ್ವಾಮಿ)
ಡಿ.ಕೆ.ಮೋಹನ್ ಬಾಬು
ಕ್ಷೇತ್ರದಲ್ಲಿ ಡಿ.ಕೆ.ಮೋಹನ್ ಬಾಬು ಟಿಕೆಟ್ ಗಾಗಿ ಇನ್ನಿಲ್ಲದ ಪ್ರಯತ್ನ ನಡೆಸಿದ್ದರು. ಒಂದು ಹಂತಕ್ಕೆ ಟಿಕೆಟ್ ಸಿಗುವ ಬಗ್ಗೆ ಭರವಸೆಯೂ ಕೆಪಿಸಿಸಿಯಿಂದ ಸಿಕ್ಕಿತ್ತು ಎಂದು ಹೇಳಲಾಗುತ್ತಿದೆ. ಬಾಬು ಅವರಿಗೆ ಟಿಕೆಟ್ ನೀಡದೇ ಇರುವುದಕ್ಕೆ ಕಾರ್ಯಕರ್ತರು ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮುಂದೆನೇ ಆಕ್ರೋಶ ವ್ಯಕ್ತಪಡಿಸಿದ್ದರು. ಹಾಲಿ ಎಂಎಲ್ಸಿ ನಾರಾಯಣ್ ಸ್ವಾಮಿಗೆ ಟಿಕೆಟ್ ನೀಡಿದ್ದು ಎಷ್ಟು ಸರಿ ಎಂದು ಕಾರ್ಯಕರ್ತರು ಏರು ಧ್ವನಿಯಲ್ಲಿ ಪ್ರಶ್ನಿಸಿದ್ದರು. (ಚಿತ್ರದಲ್ಲಿ : ಡಿಕೆ ಮೋಹನ್ ಬಾಬು)
2013ರ ಚುನಾವಣೆ
2013ರ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಕೃಷ್ಣಪ್ಪ ಅವರನ್ನು ಬದಿಗೆ ತಳ್ಳಿ, ಬೈರತಿಗೆ ಟಿಕೆಟ್ ನೀಡಿದ್ರಿ. ಅವರು ಪಕ್ಷಕ್ಕೆ ಕೈಕೊಟ್ಟರು. ಈಗ ನಾರಾಯಣಸ್ವಾಮಿಗೆ ಟಿಕೆಟ್ ನೀಡಿದ್ದೀರಾ? ಎಲ್ಲವನ್ನೂ ನೀವೇ ನಿರ್ಧರಿಸುವಂತಿದ್ದರೆ, ನಾವೆಲ್ಲಾ ಕಾರ್ಯಕರ್ತರು ಯಾಕೆ ಬೇಕು ಎನ್ನುವ ಪ್ರಶ್ನೆ ಸಿದ್ದರಾಮಯ್ಯಗೆ ಎದುರಾಗಿದೆ. ಮೋಹನ್ ಬಾಬು ಅವರಿಗೆ ಟಿಕೆಟ್ ನೀಡಿದ್ದರೆ, ಗೆಲುವು ಸುಲಭವಾಗುತ್ತಿತ್ತು ಎನ್ನುವ ಮಾತು ಕಾರ್ಯಕರ್ತರಿಂದ ಕೇಳಿ ಬಂದಿದೆ.
ಬೈರತಿಯನ್ನು ನಂಬಿ ನಾನು ಮೋಸ ಹೋದೆ, ಸಿದ್ದರಾಮಯ್ಯ
"ಬೈರತಿಯನ್ನು ನಂಬಿ ನಾನು ಮೋಸ ಹೋದೆ, ಅವನು ನನಗೆ ದ್ರೋಹ ಮಾಡಿದ" ಎನ್ನುವ ಮಾತನ್ನೇನೋ ಸಿದ್ದರಾಮಯ್ಯ ಆಡಿದ್ದಾರೆ. ಆದರೆ, ನಾರಾಯಣಸ್ವಾಮಿಗೆ ಟಿಕೆಟ್ ನೀಡಿ, ಉಪಚುನಾವಣೆಯಲ್ಲಿ ಬೈರತಿ ಬಸವರಾಜು ಗೆಲುವಿಗೆ ಕಾಂಗ್ರೆಸ್ ದಾರಿಮಾಡಿಕೊಟ್ಟಿತೇ ಎನ್ನುವ ಸಂಶಯ ಕ್ಷೇತ್ರದ ಮತದಾರರಲ್ಲಿ ಕಾಡುತ್ತಿದೆ. ಯಾಕೆಂದರೆ, ಬೈರತಿ ಬಸವರಾಜ ಅವರ ಪರಮಾಪ್ತರಲ್ಲಿ ಒಬ್ಬರು ನಾರಾಯಣಸ್ವಾಮಿ.