ಕೆಆರ್ ಪುರಂ ಉಪಚನಾವಣೆಗೆ ವಿಭಿನ್ನ ವೇಷ ಧರಿಸಿ 101 ಕಾಂಗ್ರೆಸ್ ಕಾರ್ಯಕರ್ತರಿಂದ ಅರ್ಜಿ
ಬೆಂಗಳೂರು ಅಕ್ಟೋಬರ್ 21: ಕೆ ಆರ್ ಪುರಂ ಉಪ ಚುನಾವಣೆಗೆ ಈ ಬಾರಿಯಾದರೂ ಸಾಮಾನ್ಯ ಕಾರ್ಯಕರ್ತರನ್ನು ಪರಿಗಣಿಸಿ ಎಂದು ಆಗ್ರಹಿಸಿ ಕೆ ಆರ್ ಪುರ ವಿಧಾನಸಭಾ ಕ್ಷೇತ್ರದ 101 ಜನ ಕಾಂಗ್ರೆಸ್ ಕಾರ್ಯಕರ್ತರು ವಿಭಿನ್ನ ವೇಷಗಳಲ್ಲಿ ಅರ್ಜಿ ಸಲ್ಲಿಸಿ ಗಮನ ಸೆಳೆದರು.
ಚುನಾಯಿತ ಪ್ರತಿನಿಧಿಗಳು ಹಣ ಹಾಗೂ ತಮ್ಮ ಸ್ವಾರ್ಥಕ್ಕೋಸ್ಕರವಾಗಿ ಸಾಮಾನ್ಯ ಕಾರ್ಯಕರ್ತರನ್ನು ಮರೆತು ಹಣ ಕ್ಕಾಗಿ ಮಾರಾಟವಾಗುತ್ತಿದ್ದಾರೆ. ಈ ವ್ಯವಸ್ಥೆಯನ್ನು ಬದಲಾಯಿಸಲು ಪಕ್ಷದ ಬಗ್ಗೆ ನಿಷ್ಠೆ ಹಾಗೂ ಶ್ರದ್ಧೆಯನ್ನು ಹೊಂದಿರುವ ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ನೀಡಬೇಕು. ಇಂತಹ ರಾಜಕಾರಣಿಗಳ ಬಣ್ಣ ಬಯಲು ಮಾಡುವುದು ನಮ್ಮ ಉದ್ದೇಶವಾಗಿದೆ ಎಂದು ಕರ್ನಾಟಕ ರೈತರ ಮತ್ತು ವ್ಯಾಪಾರಿಗಳ ಒಕ್ಕೂಟದ ಅಧ್ಯಕ್ಷ ಎಲೆ ಶ್ರೀನಿವಾಸ್ ತಿಳಿಸಿದರು.
Recommended Video
ಚುನಾವಣಾ ಸಂಧರ್ಭದಲ್ಲಿ ಪುಡಿಗಾಸು ಉದುರಿಸಿ ಆಯ್ಕೆಯಾಗಿ ಸಾವಿರಾರು ಕೋಟಿ ಅಕ್ರಮವಾಗಿ ಹಣ ಮಾಡಿಕೊಂಡು ಇವರು ತಮ್ಮ ಕ್ಷೇತ್ರದ ಮತದಾರರಿಗೆ ಹಾಗೂ ಸಂವಿಧಾನಕ್ಕೆ ದ್ರೋಹ ಬಗೆದಿದ್ದಾರೆ.
ಜೊತೆಗೆ ರೈತರು, ಕಾರ್ಮಿಕರು ದೀನ ದಲಿತರ ಪರ ಯಾವುದೇ ಜನಪರ ಕಾಳಜಿ ಇಲ್ಲದ, ಯಾವುದೇ ತತ್ವ ಸಿದ್ದಾಂತಗಳೂ ಇಲ್ಲದ ಇವರು 20 - 30 ಕೋಟಿ ರೂಪಾಯಿಗಳಿಗೆ ಮಾರಾಟವಾಗಿರುವುದು ಎಲ್ಲಾ ಗುಟ್ಟಾಗೇನೂ ಇಲ್ಲ.
ತಮ್ಮ ಅಕ್ರಮ ಹಣವನ್ನು ಬಳಸಿ ಚುನಾವಣೆಯಲ್ಲಿ ಆಯ್ಕೆ ಆಗುವ ಇವರು ಚುನಾವಣೆಗಳನ್ನು ದುಬಾರಿ ಮಾಡಿ ಬಡಜನ, ಸಾಮಾನ್ಯರು, ಯೋಗ್ಯರು ಚುನಾವಣೆ ಎಂದರೆ ದೂರು ಉಳಿಯುವ ಹಂತಕ್ಕೆ ತಲುಪಿದ್ದಾರೆ. ಇಂತಹ ತತ್ವರಹಿತ ರಾಜಕಾರಣಿಗಳಿಗೆ ಮತದಾರರಾದ ನಾವು ಸೂಕ್ತ ಉತ್ತರ ನೀಡದೆ ಹೋದರೆ ಮುಂದಿನ ದಿನಗಳು ಕರಾಳವಾಗುವುದರಲ್ಲಿ ಸಂಶಯವಿಲ್ಲ ಎಂದರು.
ಕೆ ಆರ್ ಪುರದ ಸಂತೇ ಮೈದಾನದಿಂದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಗೆ ಆಗಮಿಸಿದ ವಿಭಿನ್ನ ವೇಷಧಾರಿ ಕಾರ್ಯಕರ್ತರು 101 ಅರ್ಜಿಯನ್ನು ಸಲ್ಲಿಸಿದರು. ಈ ಬಾರಿಯಾದರೂ ಯಾವುದೇ ಅತಿರೇಕದ ಮಾನದಂಡಗಳನ್ನು ಅನುಸರಿಸದೆ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಿ ಎಂದು ಆಗ್ರಹಿಸಿದರು.
ಇದೇ ವೇಳೆ ಕೆಪಿಸಿಸಿ ಕಚೇರಿಗೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ, ತಮಗೆ ಸಲ್ಲಿಸಿದ ಮನವಿಯನ್ನು ಪರಿಗಣಿಸುವುದಾಗಿ ಭರವಸೆ ನೀಡಿದರು.