ಕೆಆರ್ ಪುರಂ ಉಪ ಚುನಾವಣೆ: ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ಗಾಗಿ ಪ್ರತಿಭಟನೆ
ಬೆಂಗಳೂರು ಅಕ್ಟೋಬರ್ 18: ಮುಂಬರುವ ಕೆ ಆರ್ ಪುರಂ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ 101 ಜನ ಕಾರ್ಯಕರ್ತರು ಅರ್ಜಿ ಸಲ್ಲಿಸಲಿದ್ದು, ಇವರ ಪೈಕಿ ಒಬ್ಬರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿ ಅಕ್ಟೋಬರ್ 21 ರಂದು ಕೆ ಆರ್ ಪುರಂ ನಿಂದ ಕೆಪಿಸಿಸಿ ಕಚೇರಿಯವರೆಗೆ ವಿಭಿನ್ನ ವೇಷ ಧರಿಸಿ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರೈತರ ಮತ್ತು ವ್ಯಾಪಾರಿಗಳ ಒಕ್ಕೂಟದ ಅಧ್ಯಕ್ಷ ಎಲೆ ಶ್ರೀನಿವಾಸ್ ಹೇಳಿದ್ದಾರೆ. ಈ ಬಾರಿ ಕೆ ಆರ್ ಪುರಂ ನ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಿ ಎಂದು ವಿಭಿನ್ನವಾಗಿ ಪ್ರತಿಭಟಿಸುವುದಾಗಿ ತಿಳಿಸಿದರು
ನಗರದ ಪ್ರೆಸ್ ಕ್ಲಬ್ ನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಹಣವನ್ನು ನೀಡಿ ಮೋಸದಿಂದ ಗೆದ್ದು ಕ್ಷೇತ್ರದ ಅಭಿವೃದ್ದಿಯನ್ನು ಕಡೆಗಣಿಸಿದ ಜನಪ್ರತಿನಿಧಿಗಳ ಬಣ್ಣ ಬಯಲು ಮಾಡುವುದು ನಮ್ಮ ಉದ್ದೇಶವಾಗಿದೆ.
ಈ ಬಾರಿ ತಮ್ಮ ಸ್ವಾರ್ಥಕ್ಕೋಸ್ಕರವಾಗಿ ರಾಜೀನಾಮೆ ನೀಡಿದ ಜನಪ್ರತಿನಿಧಿಗಳ ವಿರುದ್ದವಾಗಿ ಸಾಮಾನ್ಯ ಕಾರ್ಯಕರ್ತರನ್ನು ಕಣಕ್ಕಿಳಿಸುವಂತೆ ಕೆಪಿಸಿಸಿ ಅಧ್ಯಕ್ಷರನ್ನು ಮನವಿ ಮಾಡುವುದು ನಮ್ಮ ಉದ್ದೇಶವಾಗಿದೆ. ಈ ಹಿನ್ನಲೆಯಲ್ಲಿ 101 ಜನ ಕೆಆರ್ ಪುರಂನ ಕಾರ್ಯಕರ್ತರು ಪಾದಯಾತ್ರೆಯ ಮೂಲಕ ಅರ್ಜಿಯನ್ನು ಸಲ್ಲಿಸಲಿದ್ದಾರೆ. ಈ ಕಾರ್ಯಕರ್ತರಲ್ಲಿ ಒಬ್ಬರನ್ನು ಆಯ್ಕೆ ಮಾಡಿ ಟಿಕೆಟ್ ನೀಡುವಂತೆ ಇದೇ ಸಂಧರ್ಭದಲ್ಲಿ ಕೋರಲಾಗುವುದು ಎಂದು ಹೇಳಿದರು.
ಚುನಾವಣಾ ಸಂದರ್ಭದಲ್ಲಿ ಪುಡಿಗಾಸು ಉದುರಿಸಿ ಆಯ್ಕೆಯಾಗಿ ಸಾವಿರಾರು ಕೋಟಿ ಅಕ್ರಮವಾಗಿ ಹಣ ಮಾಡಿಕೊಂಡು ಇವರು ತಮ್ಮ ಕ್ಷೇತ್ರದ ಮತದಾರರಿಗೆ ಹಾಗೂ ಸಂವಿಧಾನಕ್ಕೆ ದ್ರೋಹ ಬಗೆದಿದ್ದಾರೆ. ಜೊತೆಗೆ ರೈತರು, ಕಾರ್ಮಿಕರು ದೀನ ದಲಿತರ ಪರ ಯಾವುದೇ ಜನಪರ ಕಾಳಜಿ ಇಲ್ಲದ, ಯಾವುದೇ ತತ್ವ ಸಿದ್ದಾಂತಗಳೂ ಇಲ್ಲದ ಇವರು 20 - 30 ಕೋಟಿ ರೂಪಾಯಿಗಳಿಗೆ ಮಾರಾಟವಾಗಿರುವುದು ಎಲ್ಲಾ ಗುಟ್ಟಾಗೇನೂ ಇಲ್ಲ.
ತಮ್ಮ ಅಕ್ರಮ ಹಣವನ್ನು ಬಳಸಿ ಚುನಾವಣೆಯಲ್ಲಿ ಆಯ್ಕೆ ಆಗುವ ಇವರು ಚುನಾವಣೆಗಳನ್ನು ದುಬಾರಿ ಮಾಡಿ ಬಡಜನ, ಸಾಮಾನ್ಯರು, ಯೋಗ್ಯರು ಚುನಾವಣೆ ಎಂದರೆ ದೂರು ಉಳಿಯುವ ಹಂತಕ್ಕೆ ತಲುಪಿದ್ದಾರೆ. ಇಂತಹ ತತ್ವರಹಿತ ರಾಜಕಾರಣಿಗಳಿಗೆ ಮತದಾರರಾದ ನಾವು ಸೂಕ್ತ ಉತ್ತರ ನೀಡದೆ ಹೋದರೆ ಮುಂದಿನ ದಿನಗಳು ಕರಾಳವಾಗುವುದರಲ್ಲಿ ಸಂಶಯವಿಲ್ಲ ಎಂದರು.