ಸ್ವಪಕ್ಷೀಯರ ಮೇಲೆಯೇ ನಲಪಾಡ್ ಕಿರಿಕ್: ಡಿಕೆಶಿಗೆ ದೂರು?
ಬೆಂಗಳೂರು, ಜೂನ್ 7: ಕೆಪಿಸಿಸಿ ಯುವ ಘಟಕದ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಅವರಿಂದ ಪಕ್ಷಕ್ಕೆ ಅನುಕೂಲವಾಗುವ ಬದಲು ಇಮೇಜಿಗೆ ಧಕ್ಕೆ ಬಂದ ಉದಾಹರಣೆಗಳೇ ಹೆಚ್ಚು. ಇದಕ್ಕೆ ಈಗ ಇನ್ನೊಂದು ಸೇರ್ಪಡೆಯಾಗಿದೆ.
ಸ್ವಪಕ್ಷೀಯ ಮುಖಂಡರೊಬ್ಬರು ನಲಪಾಡ್ ರೌಡಿಸಂ ವರ್ತನೆ ತೋರುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರಿಗೆ ದೂರು ಸಲ್ಲಿಸಿದ್ದಾರೆ. ಬೆಂಗಳೂರು ಶಿಕ್ಷಕರ ಕ್ಷೇತ್ರದ ಪರಾಜಿತ ಅಭ್ಯರ್ಥಿ ಪ್ರವೀಣ್ ಪೀಟರ್ ಅವರು ನಲಪಾಡ್ ವಿರುದ್ದ ದೂರು ನೀಡಿದ್ದಾರೆ.
ಬಿಇಎಂಎಲ್ ಖಾಸಗೀಕರಣ ವಿರೋಧಿಸಿ ಸದನದಲ್ಲಿ ಹೋರಾಟ: ಶಾಸಕ ಎನ್ ಎ ಹ್ಯಾರಿಸ್
ಕಾಂಗ್ರೆಸ್ ಶಾಸಕ ಮತ್ತು ಮಾಜಿ ಸಚಿವ ಕೃಷ್ಣ ಭೈರೇಗೌಡರ ನೇತೃತ್ವದಲ್ಲಿ ನವಸಂಕಲ್ಪ ಶಿಬಿರ ನಡೆಯುತ್ತಿತ್ತು. ಹೆಚ್ಚೆಚ್ಚು ಯುವಕರನ್ನು ಪಕ್ಷದತ್ತ ಸೆಳೆಯುವ ಕೆಲಸವು ನಡೆಯಬೇಕು ಎನ್ನುವ ಚರ್ಚೆ ನಡೆಯುತ್ತಿತ್ತು. ಆ ವೇಳೆ ಪ್ರವೀಣ್ ಪೀಟರ್, ಯುವ ಘಟಕದ ಅಧ್ಯಕ್ಷರಿಗೆ ಒಳ್ಳೆಯ ಇಮೇಜ್ ಇರಬೇಕು, ಹಾಗಿದ್ದರೆ, ಯುವಕರನ್ನು ಪಕ್ಷಕ್ಕೆ ಕರೆತರಲು ಸುಲಭವಾಗುತ್ತದೆ ಎನ್ನುವ ಅಭಿಪ್ರಾಯವನ್ನು ಮಂಡಿಸಿದರು ಎಂಬುದು ಸುದ್ದಿ.
ಪ್ರವೀಣ್ ಪೀಟರ್ ಹೇಳಿಕೆಯಿಂದ ಸಿಟ್ಟಾದ ನಲಪಾಡ್ ಇವರು ನನ್ನ ಬಗ್ಗೆಯೇ ಮಾತನಾಡುತ್ತಿದ್ದಾರೆಂದು ಆಕ್ರೋಶ ಹೊರಹಾಕಿದ್ದಾರೆ. ಈ ಸಭೆಯ ನಂತರ ನನಗೆ ಬೆದರಿಕೆ ಕರೆಗಳು ಬರುತ್ತಿವೆ, ಇದು ನಲಪಾಡ್ ಕಡೆಯವರದ್ದೇ ಎಂದು ಪ್ರವೀಣ್ ಪೀಟರ್ ಅನುಮಾನ ವ್ಯಕ್ತ ಪಡಿಸಿದ್ದಾರೆ.
ಈ ಬಗ್ಗೆ ಪೀಟರ್ ಅವರು ಕೆಪಿಸಿಸಿ ಅಧ್ಯಕ್ಷರಿಗೆ ದೂರು ನೀಡಿದ್ದಾರೆಂದು ತಿಳಿದು ಬಂದಿದೆ. ಈ ಸಂಬಂಧ ಮಾಧ್ಯಮದವರು ಪ್ರಶ್ನಿಸಿದಾಗ, "ನನಗೂ ಅದಕ್ಕೂ ಏನೂ ಸಂಬಂಧವಿಲ್ಲ, ಈ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ" ಎಂದು ನಲಪಾಡ್ ಪ್ರತಿಕ್ರಿಯೆ ನೀಡಿದ್ದಾರೆ.
ಕಾಂಗ್ರೆಸ್ ನಾಯಕ ಎಂ. ಬಿ. ಪಾಟೀಲ್ ಮತ್ತು ಸಚಿವ ಅಶ್ವಥ್ ನಾರಾಯಣ ಭೇಟಿಯಾಗಿದ್ದ ಸಂದರ್ಭದಲ್ಲಿ ರಮ್ಯಾ ಮಾಡಿದ್ದ ಟ್ವೀಟ್ ವ್ಯಾಪಕ ಪರವಿರೋಧ ಚರ್ಚೆಗೆ ಕಾರಣವಾಗಿತ್ತು. ಆ ಸಂದರ್ಭದಲ್ಲಿ "ಯಾವುದಾದರೂ ಒಂದು ಕುರ್ಚಿ ಮೇಲೆ ಟವಲ್ ಹಾಕಲು ರಮ್ಯಾ ಬಂದಿದ್ದಾರಾ?" ಎಂದು ನಲಪಾಡ್ ವ್ಯಂಗ್ಯವಾಡಿದ್ದರು. ಇದಕ್ಕೆ, "ಜಾಮೀನಿನ ಮೇಲೆ ಹೊರಗಿರುವ ಹುಡುಗ ನನ್ನ ಪ್ರಾಮಾಣಿಕತೆಯನ್ನು ಪ್ರಶ್ನಿಸುತ್ತಿದ್ದಾನೆ"ಎಂದು ರಮ್ಯಾ ತಿರುಗೇಟು ನೀಡಿದ್ದರು.
Recommended Video