ನಟಿ ರಾಗಿಣಿ ದ್ವಿವೇದಿ ಈಗಲೂ ಬಿಜೆಪಿಯವರ ಸಂಪರ್ಕದಲ್ಲಿದ್ದಾರೆ
ಬೆಂಗಳೂರು, ಸೆ. 09: ಡ್ರಗ್ ಮಾಫಿಯಾ ನಂಟಿನ ಹಿನ್ನೆಲೆ ಬಂಧನಕ್ಕೆ ಒಳಗಾಗಿರುವ ನಟಿ ರಾಗಿಣಿ ವಿಚಾರದಲ್ಲಿ ಆರೋಪ-ಪ್ರತ್ಯಾರೋಪಗಳು ಹೆಚ್ಚಾಗಿವೆ. ನಟಿ ರಾಗಿಣಿ ನಮ್ಮ ಪಕ್ಷದ ಸದಸ್ಯರಲ್ಲ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಹೇಳಿಕೆಗೆ ಕೆಪಿಸಿಸಿ ಕಾಯಾಧ್ಯಕ್ಷ ಸಲೀಂ ಅಹ್ಮದ್ ಅವರು ವಿರೋಧ ವ್ಯಕ್ತಪಡಿಸಿದ್ದಾರೆ.
ಸಿಸಿಬಿಯಿಂದ ಬಂಧನಕ್ಕೆ ಒಳಗಾಗಿರುವ ನಟಿ ರಾಗಿಣಿ ದ್ವಿವೇದಿ ಹಾಗೂ ಬಿಜೆಪಿ ನಾಯಕರೊಂದಿಗಿನ ಒಡನಾಟದ ಕುರಿತು ಇದೇ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಸ್ಪೋಟಕ ಹೇಳಿಕೆ ಕೊಟ್ಟಿದ್ದಾರೆ. ಡ್ರಗ್ ಮಾಫಿಯಾ ನಂಟಿನ ಹಿನ್ನೆಲೆಯಲ್ಲಿ ಬಂಧನಕ್ಕೆ ಒಳಗಾಗಿರುವ ನಟಿ ರಾಗಿಣಿ ಅವರು ಇವತ್ತಿಗೂ ಬಿಜೆಪಿಯವರ ಸಂಪರ್ಕದಲ್ಲೇ ಇದ್ದಾರೆ ಎಂಬ ಗಂಭೀರ ಆರೋಪವನ್ನು ಮಾಡಿದ್ದಾರೆ. ಈಗ ತನಿಖೆ ನಡೆಯುತ್ತಿದೆ ಅದು ಮತ್ತಷ್ಟು ತೀವ್ರವಾಗಬೇಕು ಎಂದು ಆಗ್ರಹಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅವರು, ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ರಾಗಿಣಿ ಜೊತೆ ಚುನಾವಣೆಗಳಲ್ಲಿ ಪ್ರಚಾರ ಮಾಡಿದ್ದಾರೆ. ಹೀಗಿರುವಾಗ ಅವರು ಬಿಜೆಪಿ ಪಕ್ಷದ ಸದಸ್ಯರಲ್ಲ ಎಂದು ಹೇಳುತ್ತಾರೆ? ಸಚಿವ ಸಿ.ಟಿ. ರವಿ ಅವರು ಕೂಡ ಡ್ರಗ್ ತನಿಖೆಯಲ್ಲಿ ಒತ್ತಡವಿದೆ ಎಂದು ಹೇಳಿದ್ದರು ಎಂದಿದ್ದಾರೆ.
Recommended Video
ಯುವಕರು ದಾರಿ ತಪ್ಪಲು ಈ ಡ್ರಗ್ಸ್ ಮಾಫಿಯಾ ಕಾರಣವಾಗಿದೆ. ಸಿಎಂ ಯಡಿಯೂರಪ್ಪ, ಗೃಹ ಸಚಿವ ಬೊಮ್ಮಾಯಿ ಅವರು ವಿಶೇಷ ಟಾಸ್ಕ್ ಪೋರ್ಸ್ ರಚಿಸಬೇಕು. ಹೊಸ ಸಮಿತಿ ಮಾಡಿ ಡ್ರಗ್ ಮಾಫಿಯಾ ತಡೆಗಟ್ಟುವ ಬಗ್ಗೆ ಗಮನಹರಿಸಬೇಕು. ಬೆಂಗಳೂರು ವಿಶ್ವ ಡ್ರಗ್ ಸಿಟಿಯಾಗುತ್ತಿದೆ. ಮಾಫಿಯಾದಲ್ಲಿ ಯಾರೇ ಇರಲಿ ಅವರ ಮೇಲೆ ಕ್ರಮವಾಗಬೇಕು. ಡ್ರಗ್ಸ್ ದಂಧೆಗೆ ಕಡಿವಾಣ ಹಾಕಬೇಕು. ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಸಲೀಂ ಅಹ್ಮದ್ ಒತ್ತಾಯ ಮಾಡಿದ್ದಾರೆ.