ಪಕ್ಷ ವಿರೋಧಿ ಚಟುವಟಿಕೆ: ಕಾಂಗ್ರೆಸ್ನಿಂದ ರೋಷನ್ ಬೇಗ್ ಅಮಾನತು
Recommended Video
ಬೆಂಗಳೂರು, ಜೂನ್ 18: ಕಾಂಗ್ರೆಸ್ ಮುಖಂಡರ ವಿರುದ್ಧ ನಿರಂತರ ಹೇಳಿಕೆಗಳನ್ನು ನೀಡುತ್ತಿದ್ದ ಶಿವಾಜಿನಗರದ ಶಾಸಕ ರೋಷನ್ ಬೇಗ್ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ.
ಸತತ ಎಚ್ಚರಿಕೆಗಳನ್ನು ನೀಡಿದ್ದರೂ ಮತ್ತು ಶೋಕಾಸ್ ನೋಟಿಸ್ ಕೊಟ್ಟಿದ್ದರೂ ಅವುಗಳನ್ನು ನಿರ್ಲಕ್ಷಿಸಿ ಪಕ್ಷದ ನಾಯಕರ ವಿರುದ್ಧ ಹೇಳಿಕೆ ನೀಡುವುದನ್ನು ಮುಂದುವರಿಸಿದ್ದರು.
ಪಕ್ಷ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿರುವ ಹಿನ್ನೆಲೆಯಲ್ಲಿ ರೋಷನ್ ಬೇಗ್ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಕೆಪಿಸಿಸಿಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅನುಮತಿ ನೀಡಿದೆ. ತತ್ಕ್ಷಣದಿಂದಲೇ ಜಾರಿಗೆ ಬರುವಂತೆ ರೋಷನ್ ಬೇಗ್ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. ಈ ಸಂಬಂಧ ಅವರ ಪಕ್ಷ ವಿರೋಧಿ ಚಟುವಟಿಕೆಗಳ ಕುರಿತಂತೆ ವಿಚಾರಣೆ ನಡೆಸಲಾಗುವುದು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿ ವೈ ಘೋರ್ಪಡೆ ಅವರು ಹೊರಡಿಸಿರುವ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.
ರೋಷನ್ ಬೇಗ್ ವಿರುದ್ಧ ಹೈಕಮಾಂಡಿಗೆ ದೂರು ಸಲ್ಲಿಸಿದ ಕೆಪಿಸಿಸಿ
ರೋಷನ್ ಬೇಗ್ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಬಗ್ಗೆ ಕೆಪಿಸಿಸಿ ಹಲವು ಬಾರಿ ಹಿರಿಯ ನಾಯಕರೊಂದಿಗೆ ಮತ್ತು ಹೈಕಮಾಂಡ್ ಜತೆ ಮಾತುಕತೆ ನಡೆಸಿತ್ತು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಎಐಸಿಸಿಗೆ ಈ ಸಂಬಂಧ ದೂರು ಸಲ್ಲಿಸಿದ್ದರು.
ವೇಣುಗೋಪಾಲ್ ಬಫೂನ್
'ವೇಣುಗೋಪಾಲ್ ಅವರಂತಹ ಬಫೂನ್, ಸಿದ್ದರಾಮಯ್ಯ ಅವರಂತಹ ಅಹಂಕಾರಿ, ದಿನೇಶ್ ಗುಂಡೂರಾವ್ ಅವರಂತಹ ಫ್ಲಾಪ್ ಅಧ್ಯಕ್ಷರಿಂದ ಕಾಂಗ್ರೆಸ್ ಪಕ್ಷ ಉದ್ಧಾರವಾಗುವುದಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 79 ಸ್ಥಾನ ಬರುವುದಕ್ಕೆ ಕಾರಣವೇ ಲಿಂಗಾಯತ ಧರ್ಮ ಒಡೆದಿದ್ದು. ಇದರಿಂದಾಗಿ 25 ರಿಂದ 30 ಸ್ಥಾನಗಳನ್ನು ಕಳೆದುಕೊಳ್ಳಬೇಕಾಯಿತು. ಕಾಂಗ್ರೆಸ್ ಪಕ್ಷದಲ್ಲಿ ಹಿರಿಯರನ್ನು ಕಡೆಗಣಿಸಲಾಗುತ್ತಿದೆ' ಎಂದು ರೋಷನ್ ಬೇಗ್ ಟೀಕಿಸಿದ್ದರು.
ಇಳಿದು ಬಾ, ಇಳಿದು ಬಾ... ಸಿದ್ದರಾಮಯ್ಯಗೆ ಅಹಂಕಾರ ಇಳಿಯಿತೇ?: ರೋಷನ್ ಬೇಗ್
ಎನ್ಡಿಎ ಬೆಂಬಲಿಸಲು ಹಿಂದೇಟು ಹಾಕೊಲ್ಲ
ಸಮಯ, ಸಂದರ್ಭ ನೋಡಿ ನಾವು (ಮುಸ್ಲಿಮರು) ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ. ಅವಶ್ಯಕತೆ ಬಿದ್ದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟಕ್ಕೆ ಬೆಂಬಲಿಸಲು ನಾವು ಹಿಂಜರಿಯುವುದಿಲ್ಲ ಎಂದು ರೋಷನ್ ಬೇಗ್ ಎಚ್ಚರಿಕೆ ನೀಡಿದ್ದರು. ಒಂದು ವೇಳೆ ರಾಜ್ಯದಲ್ಲಿ ಕಾಂಗ್ರೆಸ್ ಸೋತರೆ ಅದಕ್ಕೆ ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ಅವರೇ ನೇರ ಕಾರಣ ಎಂದು ಲೋಕಸಭೆ ಚುನಾವಣೆಗೂ ಮುನ್ನ ಹೇಳಿದ್ದರು.
ಫ್ಲಾಪ್ ಷೋ ಆಗುವುದು ಗೊತ್ತಿತ್ತು
ಸ್ವಾಭಿಮಾನ ಉಳಿಸುವ ಕೆಲಸವನ್ನು ಕಾಂಗ್ರೆಸ್ ಮಾಡಿದರೆ ಮಾತ್ರ ಅವರಿಗೆ ನಮ್ಮ ಬೆಂಬಲ. ಕಾಂಗ್ರೆಸ್ ಪ್ರಚಾರದ ವೈಖರಿ ನೋಡಿದಾಗಲೇ, ಇದೊಂದು ಪಕ್ಕಾ ಫ್ಲಾಪ್ ಶೋ ಆಗುತ್ತೆ ಎನ್ನುವ ಅರಿವು ನನಗಾಗಿತ್ತು ರಾಜ್ಯದ ಒಂದೇ ಒಂದು ಕ್ಷೇತ್ರದಲ್ಲಿ ಮಾತ್ರ ಮುಸ್ಲಿಮರಿಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು ಎಂದು ಎಕ್ಸಿಟ್ ಪೋಲ್ ಸಮೀಕ್ಷೆ ಹೊರಬಿದ್ದ ಬಳಿಕ ಹೇಳಿದ್ದರು.
ಐಎಂಎ ಹಗರಣದಲ್ಲಿ ಭಾಗಿ ಆರೋಪ: ರೋಶನ್ ಬೇಗ್ ಹೇಳಿದ್ದು ಏನು?
ನೋಟಿಸ್ ಓದೊಲ್ಲ
ನನ್ನ ಹೇಳಿಕೆ ಬಗ್ಗೆ ಕೆಪಿಸಿಸಿಯಿಂದ ಶೋಕಾಸ್ ನೋಟಿಸ್ ಬಂದಿದೆ. ಅದನ್ನು ಓದಲು ಹೋಗಿಲ್ಲ. ನಾನು ಟೀಕಿಸಿದ ನಾಯಕರ ಅಣತಿಯಂತೆ ಅದನ್ನು ಕಳಿಸಲಾಗಿದೆ ಎಂಬುದು ಗೊತ್ತು. ಪ್ರತಿಪಕ್ಷದವರು ಕುದುರೆ ವ್ಯಾಪಾರ ಮಾಡುತ್ತಾರೆ ಎಂದು ಹೇಳುವ ನಾಯಕರು ಸಚಿವ ಸ್ಥಾನವನ್ನು ಇವರು ಹೇಗೆ ಮಾರಿಕೊಂಡರು ಎಂಬುದನ್ನು ಹೇಳುವುದಿಲ್ಲ. ಕಾಂಗ್ರೆಸ್ ಪಕ್ಷವನ್ನು ಮುನ್ನೆಡೆಸುವ ಹಲವು ಹಿರಿಯ ನಾಯಕರು ಇದ್ದಾರೆ. ಆದರೆ, ಅವರನ್ನು ಕಡೆಗಣಿಸಲಾಗಿದೆ. ನಾಯಕರ ವಿರುದ್ಧ ಆಡಿದ ಮಾತನ್ನು ಪಕ್ಷದ ವಿರುದ್ಧ ಆಡಿರುವುದು ಎಂದು ಅರ್ಥೈಸಲಾಗಿದೆ ಎಂದು ರೋಷನ್ ಬೇಗ್ ತಮಗೆ ಕೆಪಿಸಿಸಿ ಶೋಕಾಸ್ ನೋಟಿಸ್ ಕಳುಹಿಸಿದ ಬಳಿಕ ಟ್ವೀಟ್ ಮಾಡಿದ್ದರು.
ಐಎಂಎ ಹಗರಣದಲ್ಲಿ ಹೆಸರು
ಕಾಂಗ್ರೆಸ್ ವಿರೋಧಿ ಹೇಳಿಕೆಯ ನಡುವೆಯೇ ಸಾವಿರಾರು ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಐಎಂಎ ಹಗರಣದಲ್ಲಿ ರೋಷನ್ ಬೇಗ್ ಅವರ ಹೆಸರೂ ಕೇಳಿಬಂದಿದೆ. ಇದರಿಂದ ಕಾಂಗ್ರೆಸ್ಗೆ ಮತ್ತಷ್ಟು ಮುಜುಗರ ಉಂಟಾಗಿದೆ. ಐಎಂಎ ಜ್ಯುವೆಲರ್ಸ್ನ ಮನ್ಸೂರ್ ಖಾನ್ ಜತೆ ರೋಷನ್ ಬೇಗ್ ಲಕ್ಷಾಂತರ ರೂಪಾಯಿ ವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.