ಈ ಆರು ಸಚಿವರಿಗ್ಯಾಕೆ ಒಳಗೊಳಗೆ ಢವಢವ?; ಕೆಪಿಸಿಸಿ ವಕ್ತಾರ
ಬೆಂಗಳೂರು, ಮಾರ್ಚ್ 6: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿ.ಡಿ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ತಮ್ಮ ವಿರುದ್ಧ ಮಾಧ್ಯಮಗಳು ಯಾವುದೇ ಅವಹೇಳನಕಾರಿ ಮಾಹಿತಿ ಪ್ರಸಾರ ಮಾಡದಂತೆ ನಿರ್ಬಂಧ ಹೇರುವ ಸಂಬಂಧ ಆರು ಸಚಿವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಸಚಿವರಾದ ಶಿವರಾಮ್ ಹೆಬ್ಬಾರ್, ಬಿ.ಸಿ. ಪಾಟೀಲ್, ಎಸ್.ಟಿ. ಸೋಮಶೇಖರ್, ಡಾ. ಕೆ. ಸುಧಾಕರ್, ಡಾ. ಕೆ.ಸಿ. ನಾರಾಯಣಗೌಡ ಹಾಗೂ ಭೈರತಿ ಬಸವರಾಜ್ ಅವರು ಕೋರ್ಟ್ ಮೊರೆ ಹೋಗಿದ್ದಾರೆ. ಈ ಬಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ವಕ್ತಾರ ಹಾಗೂ ಸುಪ್ರೀಂ ಕೋರ್ಟ್ ವಕೀಲ ಸಂಕೇತ್ ಏಣಗಿ ಸುದ್ದಿಗೋಷ್ಟಿ ನಡೆಸಿದ್ದು, "ಆರು ಸಚಿವರು ತಮಗೆ ರಕ್ಷಣೆ ಕೊಡಿ ಎಂದು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇವರು ತಮ್ಮನ್ನೇ ರಕ್ಷಣೆ ಮಾಡಿಕೊಳ್ಳೋಕೆ ಆಗ್ತಿಲ್ಲ. ಜನರಿಗೆ ಇನ್ನೇನು ರಕ್ಷಣೆ ಕೊಡ್ತಾರೆ?" ಎಂದು ಪ್ರಶ್ನಿಸಿದ್ದಾರೆ.
ಮೇಟಿ ವಿವಾದ, ಸಿದ್ದರಾಮಯ್ಯ ದುಪ್ಪಟ ಎಳೆದಿದ್ದು ಏನಾಯ್ತು?: ಕಟ್ಟಾ ಪ್ರಶ್ನೆ
ಈ ಪ್ರಕರಣದ ಹಿಂದೆ ಕಾಂಗ್ರೆಸ್ ನವರು ಇದ್ದಾರೆ ಎಂಬ ಆರೋಪದ ಕುರಿತು ಮಾತನಾಡಿದ ಅವರು, "ಯತ್ನಾಳ್ ಈ ವಿಚಾರವಾಗಿ ಆರು ತಿಂಗಳ ಹಿಂದೆಯೇ ಮಾತನಾಡಿದ್ದರು. ಹಾಗಾದರೆ ಯತ್ನಾಳ್ ಕಾಂಗ್ರೆಸ್ ಪಕ್ಷದವರಾ? ಎಚ್.ವಿಶ್ವನಾಥ್ ಯೋಗೇಶ್ವರ್ ಮೇಲೆಯೇ ಆರೋಪಿಸುತ್ತಾರೆ. ಅವರೇನು ಕಾಂಗ್ರೆಸ್ ಪಕ್ಷದವರೇ? ಇಲ್ಲಿ ಕಾಂಗ್ರೆಸ್ ಕುತಂತ್ರ ಎಲ್ಲಿದೆ? ನಮ್ಮ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ" ಎಂದು ದೂರಿದ್ದಾರೆ. ಮುಂದೆ ಓದಿ...
"ಈ ಸಚಿವರಿಗೇಕೆ ಇಷ್ಟೊಂದು ಭೀತಿ?"
ಈ ಸಚಿವರಿಗೆ ತಾವು ತಪ್ಪು ಮಾಡಿರುವ ಸಂಗತಿ ಕಾಡುತ್ತಿರಬಹುದು. ಹೀಗಾಗೇ ಮೊದಲೇ ನ್ಯಾಯಾಲಯಕ್ಕೆ ಹೋಗಿದ್ದಾರೆ. ಏನೂ ತಪ್ಪು ಮಾಡದಿದ್ದರೆ ಯಾಕೆ ಹೋಗಬೇಕಿತ್ತು? ಕುಂಬಳ ಕಾಯಿ ಕಳ್ಳ ಅಂದ್ರೆ ಯಾಕೆ ಹೆಗಲು ಮುಟ್ಟಿಕೊಳ್ಳಬೇಕು? ಇವರನ್ನು ಯಾರಾದರೂ ಬ್ಲಾಕ್ ಮೇಲ್ ಮಾಡಿದ್ದರಾ? ಯಾಕೆ ಬ್ಲಾಕ್ ಮೇಲ್ ಮಾಡುತ್ತಾರೆ? ಇಷ್ಟೊಂದು ಭೀತಿ ಇವರಿಗೇಕೆ? ತಮ್ಮ ಸಿ.ಡಿ ಬಯಲಾಗುತ್ತದೆ ಅನ್ನುವ ಭಯವೇಕೆ? ಎಂದು ಸಾಲು ಸಾಲು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
"ಸಚಿವರಾದವರು ವೈಚಾರಿಕವಾಗಿ ಶುದ್ಧವಾಗಿರಬೇಕು"
ಇವರಿಗೆ ನಿಜವಾಗಿಯೂ ಅಂಥ ಆಕ್ಷೇಪಗಳಿದ್ದರೆ ಠಾಣೆಯಲ್ಲಿ ದೂರು ಸಲ್ಲಿಸಬಹುದಿತ್ತು. ಒಬ್ಬ ಸಚಿವ ಸ್ಥಾನದಲ್ಲಿರುವವರು ಮೊದಲು ವೈಚಾರಿಕವಾಗಿ ಶುದ್ಧವಾಗಿರಬೇಕು. ಬ್ಲಾಕ್ ಮೇಲ್ ಮಾಡುತ್ತಿದ್ದರೆ ಗಮನಕ್ಕೆ ತರಬೇಕು. ಸುಮ್ಮನೆ ಭಯವಿತ್ತು ಅಂತ ಯಾಕೆ ಹೋಗಬೇಕು? ನೀವು ಹರಿಶ್ಚಂದ್ರರಾಗಿದ್ದರೆ ಮಾಧ್ಯಮಗಳಿಗೆ ಏನು ಸಿಗುತ್ತದೆ? ನಿಮ್ಮ ವಿಷಯವನ್ನು ಏಕೆ ಬಿತ್ತರಿಸುತ್ತದೆ? ಹಾಗಿದ್ದೂ ಅಸತ್ಯ ಇದ್ದರೆ ಕೋರ್ಟ್ ಕಟಕಟೆ ಹತ್ತಬಹುದು. ಸುಮ್ಮನೆ ಮಾಧ್ಯಮಗಳ ಮೇಲೆ ಆರೋಪ ಮಾಡುತ್ತಿದ್ದಾರೆ. ನಿಮಗೆ ಹಾಗಾಗದಿದ್ದರೆ ರಾಜೀನಾಮೆ ಕೊಟ್ಟು ಹೊರಹೋಗಿ ಎಂದು ಸಚಿವರಿಗೆ ಸಂಕೇತ್ ಏಣಗಿ ಆಗ್ರಹಿಸಿದ್ದಾರೆ.
ಕೋರ್ಟ್ ಮೊರೆ ಹೋಗುತ್ತಿರುವ ಸಚಿವರಿಗೆ ಬಿಜೆಪಿ ಹೈಕಮಾಂಡ್ ಖಡಕ್ ಎಚ್ಚರಿಕೆ!
"ಇದೇನು ಸಿ.ಡಿ ಸರ್ಕಾರವೇ?"
ಇವರಿಗೆ ಯಾವುದೋ ಆತಂಕವಿದೆ. ಹಾಗಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಅವರ ಪಕ್ಷದ ಯೋಗೇಶ್ವರ್ ಬಗ್ಗೆಯೇ ವಿಶ್ವನಾಥ್ ಹೇಳಿದ್ದಾರೆ. 17 ಜನರ ಜೊತೆ ವಿಶ್ವನಾಥ್ ಗುರ್ತಿಸಿಕೊಂಡವರು. ಯೋಗೇಶ್ವರ್ ಅವರಿಗೆ, ಸಿ.ಡಿ ಇಟ್ಕೊಂಡೇ ಮಂತ್ರಿಯಾದವರು ಎಂದಿದ್ದರು. ಹಾಗಾಗಿ ಯಾವ ಸಿ.ಡಿ ಅಂತ ಬಹಿರಂಗ ಮಾಡಬೇಕು. ಆ ಸಿ.ಡಿಯಲ್ಲಿ ಇರುವುದು ಏನು? ಇದೇನು ಸಿ.ಡಿ ಸರ್ಕಾರವೇ ಎಂದು ಪ್ರಶ್ನಿಸಿರುವ ಅವರು, ಕರ್ನಾಟಕ ಸರ್ಕಾರವನ್ನು ಯಡಿಯೂರಪ್ಪ ನಡೆಸುತ್ತಿಲ್ಲ. ಯಾರೋ ಸಿ.ಡಿ ಇಟ್ಟುಕೊಂಡೇ ನಡೆಸುತ್ತಿರಬೇಕು ಎಂದು ವ್ಯಂಗ್ಯ ಮಾಡಿದ್ದಾರೆ.
ಎಫ್ಐ ಆರ್ ದಾಖಲಾಗದ ಬಗ್ಗೆ ಆಕ್ಷೇಪ
ಅನುಮಾನಸ್ಥರೇ ದೂರು ಕೊಡಬೇಕೆಂದಿಲ್ಲ. ಅವರ ಪರವಾಗಿ ಯಾರು ಬೇಕಾದರೂ ದೂರು ಕೊಡಬಹುದು. ಪುರಾವೆಗಳು ಇದ್ದರೆ ತಕ್ಷಣವೇ ಎಫ್ಐಆರ್ ಮಾಡಬೇಕು. ಇಲ್ಲಿ ಆಡಿಯೋ, ವಿಡಿಯೋ ಇರುವ ಸಿ.ಡಿಯಿದೆ. ಇದೆಲ್ಲವೂ ಎಫ್ಐಆರ್ ಹಾಕಲು ಮುಖ್ಯವಾಗಿರುತ್ತದೆ. ಆದರೆ ಇಲ್ಲಿಯವರೆಗೆ ಎಫ್ ಐಆರ್ ದಾಖಲಿಸಿಲ್ಲ. ಕಮೀಷನರ್ ಗೂ ಎಫ್ಐಆರ್ ಹಾಕಲು ಸಾಧ್ಯವಾಗಿಲ್ಲ. ಇಲ್ಲಿಯವರೆಗೆ ಅವರು ದೂರು ದಾಖಲಿಸಿಲ್ಲ. ಇದು ನ್ಯಾಯಾಂಗ ನಿಂದನೆಗೆ ಗುರಿಯಾಗಲಿದೆ. ಎಫ್ ಐಆರ್ ದಾಖಲಿಸದೆ ತನಿಖೆ ಮಾಡುತ್ತಿದ್ದಾರೆ. ಜೊತೆಗೆ ಪೊಲೀಸರು ಇನ್ನೂ ವಿಚಾರಣಾ ಹಂತದಲ್ಲೇ ಇದ್ದಾರೆ ಎಂದು ಪೊಲೀಸರ ಮೇಲೆ ದೂರಿದರು.