ಪತ್ರಕರ್ತ ಅರ್ನಾಬ್ ಗೋಸ್ವಾಮಿ ವಿರುದ್ಧ ಕ್ರಮಕ್ಕೆ ಆಗ್ರಹ
ಬೆಂಗಳೂರು, ಏಪ್ರಿಲ್ 23: ''ಕೋಮುವಾದ ಹರಡುವ ಪತ್ರಕರ್ತ ಅರ್ನಾಬ್ ಗೋಸ್ವಾಮಿಯ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು'' ಎಂದು ಕಾಂಗ್ರೆಸ್ ಮಾಧ್ಯಮ ವಕ್ತಾರ ಪತ್ರೇಶ್ ಹಿರೇಮಠ್ ಆಗ್ರಹಿಸಿದ್ದಾರೆ.
Recommended Video
''ಮಹಾರಾಷ್ರದ ಫಾಲ್ಗರ್ ಸಾಧುಗಳ ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕೈವಾಡ ಇದೆ ಎಂದು ಸುಳ್ಳು ಸುದ್ದಿಯನ್ನು ತಮ್ಮ ರಿಪಬ್ಲಿಕ್ ವಾಹಿನಿಯಲ್ಲಿ ಪ್ರಸಾರ ಮಾಡುವ ಮೂಲಕ ಅರ್ನಾಬ್ ಪತ್ರಿಕಾ ವೃತ್ತಿಗೆ ಅಪಮಾನ ಮಾಡಿದ್ದಾರೆ. ಪತ್ರಕರ್ತರ ಮಾನ, ಮರ್ಯಾದೆಯನ್ನು ಬೀದಿಯಲ್ಲಿ ಹರಾಜಿಗಿಟ್ಟ ಗೋಸ್ವಾಮಿ ಪತ್ರಕರ್ತರ ಹುದ್ದೆಗೆ ಕಪ್ಪುಚುಕ್ಕೆ'' ಎಂದು ಖಂಡಿಸಿದ್ದಾರೆ.
ಪತ್ರಕರ್ತ ಅರ್ನಬ್ ದಂಪತಿ ಮೇಲೆ ಹಲ್ಲೆ: ಸೋನಿಯಾ ಮೇಲೆ ಆರೋಪ
''ಈ ಹಿಂದೆ ಉಗುಳುವ, ಕೆಮ್ಮುವ, ತಟ್ಟೆ ನೆಕ್ಕುವ, ಹಣ್ಣಿಗೆ ಎಂಜಲು ಸವರುವ ಹಳೆಯ ವೀಡಿಯೋಗಳನ್ನು ತಿರುಚಿ ಮುಸ್ಲಿಂರು ಕರೋನಾ ವೈರಸ್ ಹರಡುತ್ತಿದ್ದಾರೆ ಎಂದು ಸುದ್ದಿ ಪ್ರಸಾರ ಮಾಡಿ ಕ್ಷಮೆ ಕೋರಿದ್ದ ಅರ್ನಾಬ್, ಕೆಲವೇ ದಿನಗಳಲ್ಲಿ ಮತ್ತೆ ಸುಳ್ಳು ಸುದ್ದಿ ಪ್ರಸಾರ ಮಾಡಿ ಜನರಲ್ಲಿ ದ್ವೇಷ ಹಂಚುವ ಕುಕೃತ್ಯವನ್ನು ಮಾಡಿರುವುದು ಬಯಲಾಗುತ್ತಿದ್ದಂತೆ ಹೆದರಿ, ಪೂರ್ವನಿಯೋಜಿತ ದಾಳಿ ಮಾಡಿಸಿಕೊಂಡಿದ್ದಾರೆ'' ಎಂದು ಪತ್ರೇಶ್ ಆರೋಪಿಸಿದ್ದಾರೆ.
''ಪತ್ರಕರ್ತರ ಕೆಲಸ ಜವಾಬ್ದಾರಿಯುತ ಪವಿತ್ರ ಕಾರ್ಯವಾಗಿದ್ದು, ವಸ್ತುನಿಷ್ಠ ವರದಿ ಮೂಲಕ ದೇಶದ ಜನರ ಪರ ಬರೆಯುವ ಮೂಲಕ ಮಾದರಿಯಾಗಿರಬೇಕಾದ ಅರ್ನಾಬ್ ಪಕ್ಷಪಾತಿಯಾಗಿ ವರ್ತಿಸುತ್ತಿದ್ದಾರೆ. ಅವರ ಹಾಗೂ ಅವರ ಚಾನೆಲ್ ವಿರುದ್ಧ ಕೋಮುದ್ವೇಷ ಹಾಗೂ ದೇಶದಲ್ಲಿ ಗಲಭೆ ಸೃಷ್ಟಿಸುವ ಪ್ರಕರಣವನ್ನು ಕೇಂದ್ರ ಸರ್ಕಾರ ಮಾಡಬೇಕು ಎಂದು ಪತ್ರೇಶ್ ಮಾಧ್ಯಮ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.