ಕೆಪಿಸಿಸಿ ಅಧ್ಯಕ್ಷ ಆಯ್ಕೆಗೆ ದಿನಾಂಕ ನಿಗದಿ
ಬೆಂಗಳೂರು, ಫೆಬ್ರವರಿ 24: ಕೆಪಿಸಿಸಿ ಅಧ್ಯಕ್ಷ ಯಾರಾಗಬೇಕು ಎಂಬ ಗೊಂದಲಕ್ಕೆ ತೆರೆ ಎಳೆಯಲು ಹೈಕಮಾಂಡ್ ನಿರ್ಧರಿಸಿದ್ದು, ಕೆಪಿಸಿಸಿ ಅಧ್ಯಕ್ಷ ಆಯ್ಕೆಗೆ ದಿನಾಂಕ ನಿಗದಿ ಮಾಡಲಾಗಿದೆ.
ಈ ಬಗ್ಗೆ ಕಾಂಗ್ರೆಸ್ನ ಹಿರಿಯ ನಾಯಕ ಕೆ.ಬಿ.ಕೋಳಿವಾಡ ಮಾಹಿತಿ ನೀಡಿದ್ದು, 'ಮಾರ್ಚ್ ಮೊದಲ ವಾರದಲ್ಲಿ ಕೆಪಿಸಿಸಿ ಅಧ್ಯಕ್ಷರ ನೇಮಕವಾಗುವ ಸಾಧ್ಯತೆ ಇದೆ' ಎಂದು ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷರ ನೇಮಕ ತಡವಾಗುತ್ತಿರುವುದಕ್ಕೆ ಅಸಮಾಧಾನವನ್ನೂ ವ್ಯಕ್ತಪಡಿಸಿರುವ ಕೋಳಿವಾಡ, 'ಆದಷ್ಟು ಶೀಘ್ರವಾಗಿ ಕೆಪಿಸಿಸಿ ಅಧ್ಯಕ್ಷರ ನೇಮಕ ಮಾಡದೇ ಇದ್ದರೆ, ಪಕ್ಷ ಇನ್ನಷ್ಟು ಸೊರಗುತ್ತದೆ' ಎಂದು ಹೇಳಿದ್ದಾರೆ.
ಕೆಪಿಸಿಸಿ ಪದಾಧಿಕಾರಿಗಳ ನೇಮಕ ಕೂಡ ಆಗಬೇಕಾಗಿದೆ. ಹೈಕಮಾಂಡ್ ಸ್ವತಃ ಗೊಂದಲವಿದೆ. ಎಐಸಿಸಿ ಅಧ್ಯಕ್ಷರು ಯಾರು ಆಗಬೇಕು ಎಂಬ ಗೊಂದಲವಿದೆ. ಒಂದು ಕಡೆ ರಾಹುಲ್ ಗಾಂಧಿ ಒಪ್ಪುತ್ತಿಲ್ಲ. ಸೋನಿಯಾಗಾಂಧಿ ಅವರ ಆರೋಗ್ಯ ಸರಿಯಾಗಿಲ್ಲ ಎಂದು ಅವರು ಹೇಳಿದ್ದಾರೆ.
ವಿಧಾನಸಭೆ ಕಲಾಪಗಳಿಗೆ ಮಾಧ್ಯಮಗಳಿಗೆ ನಿಷೇಧ ಹೇರಿರುವ ಬಗ್ಗೆ ಮಾತನಾಡಿದ ಕೋಳಿವಾಡ, ''ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಕ್ಕಿಂತ ಮಾಧ್ಯಮ ಹೆಚ್ಚು ಮುಖ್ಯವಾಗಿದೆ. ಇದಕ್ಕೆ ನಿರ್ಬಂಧ ಹೇರುವುದು ಸರಿಯಲ್ಲ. ನಾನು ಸ್ಪೀಕರ್ ಆಗಿದ್ದಾಗಲೂ ಎಡಿಟ್ ಮಾಡಿದ ವಿಡಿಯೋ ಮಾಧ್ಯಮಗಳಿಗೆ ಕೊಡೋಣ ಎನ್ನಲಾಗಿತ್ತು. ಆದರೆ ನಾನು ಇದಕ್ಕೆ ಒಪ್ಪಲಿಲ್ಲ'' ಎಂದರು.
ಈಗಿನ ಸ್ಪೀಕರ್ ವಿಶ್ವೇಶರ ಹೆಗಡೆ ಕಾಗೇರಿ ಏಕೆ ಮಾಧ್ಯಮಗಳಿಗೆ ನಿರ್ಬಂಧ ಹೇರಿದ್ದಾರೆ ಗೊತ್ತಿಲ್ಲ, ಯಾರದಾದರೂ ಒತ್ತಡಕ್ಕೆ ಮಣಿದಿದ್ದಾರೋ ಗೊತ್ತಿಲ್ಲ. ಸದನದಲ್ಲಿ ನಡೆಯುವುದು ಎಡಿಟ್ ಆಗಬಾರದು. ಏನು ನಡೆಯುತ್ತದೆಯೋ ಅದು ಜನರಿಗೆ ತಲುಪಬೇಕು. ಶಾಸಕರ ಭವನಕ್ಕೂ ಕೂಡ ಮಾಧ್ಯಮಗಳಿಗೆ ನಿರ್ಬಂಧ ಹೇರಿದ್ದಾರೆ. ಇದು ಸರಿಯಾದ ನಿರ್ಧಾರವಲ್ಲ. ಆದಷ್ಟು ಬೇಗ ಇದರ ಬಗ್ಗೆ ಗಮನಹರಿಸಬೇಕು ಎಂದು ಕೋಳಿವಾಡ ಹೇಳಿದರು.