ಪಾದರಾಯನಪುರ ಘಟನೆ: ಮುಸ್ಲಿಂ ಮುಖಂಡರಿಗೆ ಡಿ ಕೆ ಶಿವಕುಮಾರ್ ಕಿವಿಮಾತು
ಬೆಂಗಳೂರು, ಏಫ್ರಿಲ್ 20: ನಿನ್ನೆ ಬೆಂಗಳೂರಿನ ಪಾದರಾಯನಪುರದಲ್ಲಿ ಲಾಕ್ಡೌನ್ ವಿಷಯವಾಗಿ ನಡೆದ ಗಲಾಟೆ ಕುರಿತು ಇಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸದಾಶಿವನಗರದ ತಮ್ಮ ನಿವಾಸದಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರೊಂದಿಗೆ ಸಭೆ ನಡೆಸಿದರು.
ಮುಸ್ಲಿಂ ಮುಖಂಡರಿಂದ ಘಟನೆಯ ಬಗ್ಗೆ ಮಾಹಿತಿ ಪಡೆದ ಡಿಕೆಶಿ, ನಂತರ ಮುಸ್ಲಿಂ ಮುಖಂಡರಿಗೆ ಕೆಲವು ಸೂಚನೆ ನೀಡಿದ್ದಾರೆ. ಈಗಾಗಲೇ ಸರ್ಕಾರದ ನಿರ್ಧಾರಕ್ಕೆ ಬೆಂಬಲ ನೀಡಿದ್ದೇವೆ. ಅದನ್ನ ಉಳಿಸಿಕೊಂಡು ಹೋಗುವುದು ನಮ್ಮ ಜವಾಬ್ದಾರಿ. ಕೊರೊನಾ ಸೋಂಕಿನಿಂದ ಜಗತ್ತೇ ತಲ್ಲಣಗೊಂಡಿದೆ. ಹೀಗಾಗಿ ರಾಜ್ಯದಲ್ಲೂ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇದನ್ನ ತಡೆಗಟ್ಟೋಕೆ ಸರ್ಕಾರಕ್ಕೆ ಸಾಥ್ ನೀಡಬೇಕು ಎಂದು ಸಲಹೆ ನೀಡಿದ್ದಾರೆ.
ರಾಜಕಾರಣ ಮಾಡುವ ವೇಳೆ ಇದಲ್ಲ
ರಾಜಕಾರಣ ಮಾಡುವ ವೇಳೆ ಇದಲ್ಲ. ದಯವಿಟ್ಟು ನೀವೆಲ್ಲರೂ ಅರ್ಥ ಮಾಡಿಕೊಳ್ಳಿ. ನಿಮ್ಮ ಸಮುದಾಯಕ್ಕೆ ಸ್ಪಷ್ಟ ಸಂದೇಶವನ್ನ ನೀಡಿ. ಸನ್ನಿವೇಶವನ್ನ ಕೆಲವರು ದುರುಪಯೋಗಪಡಿಸಿಕೊಳ್ಳಬಹುದು. ಇಲ್ಲಸಲ್ಲದ ಹೇಳಿಕೆಗಳನ್ನೂ ಕೊಡಬಹುದು. ಇಂತಹ ಸಂದರ್ಭದಲ್ಲಿ ನೀವು ಏನೇನೋ ಹೇಳಿಕೆ ನೀಡಬೇಡಿ. ಮಾಧ್ಯಮಗಳ ಮುಂದೆ ಮಾತನಾಡುವಾಗ ಎಚ್ಚರಿಕೆಯಿರಲಿ ಎಂದು ಸಲಹೆ ನೀಡಿದ್ದಾರೆ.
ಪೊಲೀಸರಿಗೆ ಸಹಕರಿಸಬೇಕು
ಪೊಲೀಸರು, ಆರೋಗ್ಯ ಸಿಬ್ಬಂದಿ ಜೀವ ಉಳಿಸಲು ಹೋರಾಡುತ್ತಿದ್ದಾರೆ. ತಮ್ಮ ಪ್ರಾಣವನ್ನ ಪಣಕ್ಕಿಟ್ಟು ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಅಗತ್ಯವಾದ ಸಹಕಾರವನ್ನ ಜನರು ನೀಡಬೇಕು. ನಿಮ್ಮ ಸಮುದಾಯದ ಜನರಿಗೆ ಸಹಕರಿಸುವಂತೆ ಹೇಳಿದರು.
ಸಭೆಯಲ್ಲಿ ಭಾಗಿಯಾಗಿದ್ದವರು
ಸಭೆಯಲ್ಲಿ ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹಿಂ, ಶಾಸಕ ರಿಜ್ವಾನ್ ಅರ್ಷದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ರೆಹಮಾನ್ ಖಾನ್, ಜಿಎ ಭಾವಾ, ಅಬ್ದುಲ್ ನಾಸೀರ್ ಸೇರಿ ಹಲವರು ಭಾಗಿಯಾಗಿದ್ದರು.
40 ಕ್ಕೂ ಹೆಚ್ಚು ಜನರ ಬಂಧನ
ಪಾದರಾಯನಪುರ ಘಟನೆ ಕುರಿತಂತೆ ತನಿಖೆ ತೀವ್ರಗೊಳಿಸಿರುವ ಪೊಲೀಸರು 40 ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ. ಇನ್ನೂ ಹಲವರಿಗಾಗಿ ಶೋಧ ನಡೆಸುತ್ತಿದ್ದಾರೆ. ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.