ಮೇ 31 ಕ್ಕೆ ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆಶಿ ಪ್ರಮಾಣವಚನ?
ಬೆಂಗಳೂರು, ಮೇ 15: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಅಧ್ಯಕ್ಷರಾಗಿರುವ ಡಿ ಕೆ ಶಿವಕುಮಾರ್ ಅವರು ಮೇ 31 ರಂದು ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕೃತವಾಗಿ ಪದಗ್ರಹಣ ಮಾಡುವ ಸಾಧ್ಯತೆ ಇದೆ ಎಂದು ವರದಿಗಳು ಹೇಳಿವೆ.
ಕಾರಣಾಂತರಗಳಿಂದ ಡಿ ಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಎರಡು ತಿಂಗಳು ಸಮೀಸುತ್ತಾ ಬಂದಿದ್ದರೂ ಇನ್ನೂ ಅಧಿಕೃತವಾಗಿ ಪದಗ್ರಹಣ ಮಾಡಿರಲಿಲ್ಲ. ಕೆಪಿಸಿಸಿ ಕಚೇರಿಯಲ್ಲಿ ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ತಯಾರಿ ನಡೆಯುತ್ತಾ ಬಂದಿದ್ದರೂ ಅದು ಪದೇ ಪದೇ ಮುಂದೆ ಹೋಗುತ್ತಾ ಬಂದಿತ್ತು.
ಅಧ್ಯಕ್ಷನಾಗಿದ್ದೇನೆ ಅಂತಾ ತೋರಿಸಲಿಕ್ಕೆ ಮಾತ್ರ ಡಿಕೆಶಿ ಆರೋಪಗಳು'
ಈಗ ಮೇ 31 ರಂದು ಪ್ರಮಾಣವಚನ ಸ್ವೀಕರಿಸಲು ಡಿಕೆಶಿ ಸಿದ್ದತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ನೊಣವಿನಕೆರೆಯ ಕಾಡು ಸಿದ್ದೇಶ್ವರ ಮಠದ ಅಜ್ಜಯ್ಯ ಅವರ ಸಲಹೆಯಂತೆ ಅಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.
ಕೊರೊನಾ ಲಾಕ್ಡೌನ್ ಇರುವುದರಿಂದ ಪ್ರಮಾಣವಚನ ಕಾರ್ಯಕ್ರಮ ಅದ್ಧೂರಿಯಾಗಿರದಿದ್ದರೂ ರಾಜ್ಯ ಮಟ್ಟದ ಕಾರ್ಯಕ್ರಮವನ್ನು ಮಾಡಲು ಪಕ್ಷದ ಮುಖಂಡರು ತೀರ್ಮಾನಿಸಿದ್ದಾರೆ. ಈ ಮೂಲಕವೇ ಬೂತ್ ಮಟ್ಟದಿಂದ ಪಕ್ಷ ಸಂಘಟನೆಗೆ ಚುರುಕು ಮುಟ್ಟಿಸಬೇಕು ಎಂಬ ನಿರ್ಧಾರವನ್ನು ಪಕ್ಷದ ಮುಖಂಡರು ಕೈಗೊಂಡಿದ್ದಾರೆ.