ಜೀವ ಇದ್ದರೆ ಮುಂದಿನದನ್ನು ನೋಡಿಕೊಳ್ಳೋಣ: ಡಿ.ಕೆ.ಶಿವಕುಮಾರ್
ಬೆಂಗಳೂರು, ಏಪ್ರಿಲ್ 26: "ನಾನೂ ಸಚಿವನಾಗಿದ್ದವನು, ಸರಕಾರದಲ್ಲಿ ಕೆಲಸ ಹೇಗೆ ನಡೆಯುತ್ತದೆ ಎನ್ನುವುದು ನನಗೂ ತಿಳಿದಿದೆ. ಆಹಾರ ಖಾತೆಯ ಸಚಿವರು ಸುಮ್ಮನೆ ನನ್ನ ತಂಟೆಗೆ ಬರುವುದು ಬೇಡ" ಎಂದು ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ನಗರದ ಬಸವ ಭವನದಲ್ಲಿ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಡಿಕೆಶಿ,"ಇದು ರಾಜಕೀಯ ಮಾಡುವ ಸಮಯವಲ್ಲ. ಮೊದಲು ಜನರ ಜೀವವನ್ನು ಉಳಿಸೋಣ. ಜೀವ ಇದ್ದರೆ ಮುಂದಿನದ್ದನ್ನು ನೋಡಿಕೊಳ್ಳೋಣ"ಎಂದು ಹೇಳಿದರು.
ಪಾದರಾಯನಪುರ ಘಟನೆ: ಮುಸ್ಲಿಂ ಮುಖಂಡರಿಗೆ ಡಿ ಕೆ ಶಿವಕುಮಾರ್ ಕಿವಿಮಾತು
"ನ್ಯಾಯಬೆಲೆ ಗೋದಾಮಿನಲ್ಲಿ ಪಡಿತರ ಸಾಮಗ್ರಿಗಳನ್ನು ದಾಸ್ತಾನು ಮಾಡಲು ಹಲವಾರು ಪ್ರಕ್ರಿಯೆಗಳಿವೆ. ಅನುಮತಿ ಇಲ್ಲದೆ, ದೊಡ್ಡ ಪ್ರಮಾಣದಲ್ಲಿ ಅಕ್ಕಿ ಸಂಗ್ರಹಿಸಿಟ್ಟುಕೊಂಡಿದ್ದು ಯಾಕೆ ಎನ್ನುವ ಪ್ರಶ್ನೆಯನ್ನು ಸಚಿವ ಗೋಪಾಲಯ್ಯನವರಿಗೆ ಕೇಳಲು ಬಯಸುತ್ತೇನೆ"ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.
"ಕೇಂದ್ರ ಸರಕಾರದಿಂದ ಬಂದ ಪಡಿತರ ಸಾಮಾನುಗಳು ಎಲ್ಲಿ ಹೋಗಿವೆ, ಎಷ್ಟು ಅಧಿಕ ದುಡ್ಡಿಗೆ ಮಾರಿಕೊಳ್ಳಲಾಗಿದೆ ಎನ್ನುವ ಮಾಹಿತಿ ನನ್ನಲ್ಲಿದೆ. ಅವರಿಗಿಂತ ಮೊದಲು ನಾನು ಸಚಿವನಾಗಿದ್ದವನು. ನನ್ನ ವಿಷಯಕ್ಕೆ ಬಂದರೆ, ಅವರು ಮರ್ಯಾದೆ ಕಳೆದುಕೊಳ್ಳಬೇಕಾಗುತ್ತದೆ" ಎಂದು ಡಿಕೆಶಿ, ಆಹಾರ ಖಾತೆಯ ಸಚಿವ ಗೋಪಾಲಯ್ಯನವರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.
"ತಪ್ಪು ಯಾರೇ ಮಾಡಲಿ ಅವರಿಗೆ ಶಿಕ್ಷೆಯಾಗಲಿ. ಪಾದರಾಯನಪುರಕ್ಕೊಂದು ನ್ಯಾಯ, ಮಂಗಳೂರು, ವಿಜಯಪುರಕ್ಕೆ ಇನ್ನೊಂದು ನ್ಯಾಯ ಎಂದಾಗಬಾರದು. ಕಾನೂನಿನ ವಿರುದ್ದವಾಗಿ ನಡೆದುಕೊಂಡವರಿಗೆ ಶಿಕ್ಷೆಯಾಗಲಿ"ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
35 ರಿಂದ 38ಕ್ಕೇರಿದ ಬೆಂಗಳೂರಿನ ಕೊರೊನಾ 'ಹಾಟ್ ಸ್ಪಾಟ್' ವಾರ್ಡ್ ಗಳ ಪಟ್ಟಿ
"ರಾಜಕಾರಣ ಮಾಡುವ ವೇಳೆ ಇದಲ್ಲ. ದಯವಿಟ್ಟು ನೀವೆಲ್ಲರೂ ಅರ್ಥ ಮಾಡಿಕೊಳ್ಳಿ. ನಿಮ್ಮ ಸಮುದಾಯಕ್ಕೆ ಸ್ಪಷ್ಟ ಸಂದೇಶವನ್ನ ನೀಡಿ. ಸನ್ನಿವೇಶವನ್ನ ಕೆಲವರು ದುರುಪಯೋಗಪಡಿಸಿಕೊಳ್ಳಬಹುದು. ಇಲ್ಲಸಲ್ಲದ ಹೇಳಿಕೆಗಳನ್ನೂ ಕೊಡಬಹುದು" ಎಂದು ಡಿಕೆಶಿ, ಪಾದರಾಯನಪುರ ಘಟನೆಯ ನಂತರ ಮುಸ್ಲಿಂ ಮುಖಂಡರನ್ನು ಕರೆಸಿ ಸಲಹೆ ನೀಡಿದ್ದರು.