ಮೂಲ ಕಾಂಗ್ರೆಸ್ಸಿಗರ ನೋವಿಗೆ ಮುಲಾಮು: ಸಿದ್ದುಗೆ ಹೈಕಮಾಂಡ್ ಗುದ್ದು?
ಬೆಂಗಳೂರು, ಜನವರಿ.17: ಕೆಪಿಸಿಸಿ ಅಧ್ಯಕ್ಷರ ನೇಮಕ ಸಂಬಂಧ ಚರ್ಚೆ ನಡುವೆ ಕಾರ್ಯಾಧ್ಯಕ್ಷರ ಆಯ್ಕೆಗೆ ನಾಯಕರ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸಕ್ಕೆ ಬೆಂಬಲಿಗ ನಾಯಕರ ದಂಡೇ ಹರಿದು ಬಂದಿದೆ.
ಬೆಂಗಳೂರಿನ ಸಿದ್ದರಾಮಯ್ಯ ನಿವಾಸ ಕಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರ ನೇಮಕಕ್ಕೆ ಸಂಬಂಧ ಬಿಸಿ ಬಿಸಿ ಚರ್ಚೆ ನಡೆಯಿತು. ಮಾಜಿ ಸಚಿವ ಜಮೀರ್ ಅಹ್ಮದ್, ಕೃಷ್ಣ ಬೈರೇಗೌಡ, ಕೆ.ಜೆ.ಜಾರ್ಜ್ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು.
ಡಿಕೆಶಿಗೆ ಕೆಪಿಸಿಸಿ ಯೋಗ, ಹೈಕಮಾಂಡ್ ಎದುರು ಸಿದ್ದು ಹೊಸರಾಗ!
ಕೆಪಿಸಿಸಿಗೆ ಮೂವರು ಕಾರ್ಯಾಧ್ಯಕ್ಷರನ್ನು ಈ ಹಿಂದೆ ನೇಮಕ ಮಾಡಲಾಗಿದ್ದು, ಮತ್ತೊಬ್ಬ ಕಾರ್ಯಾಧ್ಯಕ್ಷರನ್ನು ಹೆಚ್ಚುವರಿಯಾಗಿ ನೇಮಿಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಹೈಕಮಾಂಡ್ ಮಟ್ಟದಲ್ಲಿ ಮೂಲಕಾಂಗ್ರೆಸ್ಸಿಗರ ಮಾತು ನಡೆಯುತ್ತಿದ್ದು, ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿರುವ ನಾಯಕರ ನಿದ್ದೆಗೆಡುವಂತೆ ಮಾಡಿದೆ.
ಹೆಚ್ಚುವರಿ ಕಾರ್ಯಾಧ್ಯಕ್ಷ ಹುದ್ದೆ ಸೃಷ್ಟಿಸಲು ಹಠ
ಕೆಪಿಸಿಸಿ ಅಧ್ಯಕ್ಷರ ಸ್ಥಾನವನ್ನು ಯಾರಿಗಾದರೂ ನೀಡಿದರೂ ಪರವಾಗಿಲ್ಲ. ಸಿದ್ದರಾಮಯ್ಯರಿಗೆ ಎರಡು ಪ್ರಮುಖ ಹುದ್ದೆಗಳನ್ನು ನೀಡಬೇಕು ಎಂದು ಬೆಂಬಲಿಗ ನಾಯಕರು ಹೈಕಮಾಂಡ್ ಎದುರು ಬೇಡಿಕೆ ಇಟ್ಟಿದ್ದರು. ವಿರೋಧ ಪಕ್ಷದ ನಾಯಕ ಹಾಗೂ ಶಾಸಕಾಂಗ ಪಕ್ಷದ ನಾಯಕನ ಸ್ಥಾನವನ್ನು ನೀಡುವಂತೆ ಡಿಮ್ಯಾಂಡ್ ಇಡಲಾಗಿತ್ತು.
ಸಿದ್ದರಾಮಯ್ಯರಿಗೆ 2 ಸ್ಥಾನ ನೀಡಲು ತೀವ್ರ ವಿರೋಧ
ಸಿದ್ದರಾಮಯ್ಯ ಬಣದ ಬೇಡಿಕೆ ಬಗ್ಗೆ ಸುಳಿವು ಸಿಗುತ್ತಿದ್ದಂತೆ ಮೂಲ ಕಾಂಗ್ರೆಸ್ ನಾಯಕರು ಹೈಕಮಾಂಡ್ ಗೆ ಮೇಲಿಂದ ಮೇಲೆ ಕರೆ ಮಾಡಿದರು. ರಾಜ್ಯದಲ್ಲಿ ವಿರೋಧ ಪಕ್ಷ ಹಾಗೂ ಶಾಸಕಾಂಗ ಪಕ್ಷದ ನಾಯಕನ ಹುದ್ದೆಗಳನ್ನು ಬೇರೆ ಬೇರೆಯವರಿಗೇ ನೀಡಬೇಕು. ಒಬ್ಬರಿಗೆ ಈ ಎರಡು ಸ್ಥಾನಗಳನ್ನು ನೀಡುವುದು ಸೂಕ್ತವಲ್ಲ ಎಂದು ಹೈಕಮಾಂಡ್ ಗೆ ದೂರು ಸಲ್ಲಿಸಿದ್ದರು.
ಸಡನ್ U-Turn: ಡಿಕೆಶಿಗೆ ಸಿಕ್ಕಿತಾ ಕೆಪಿಸಿಸಿ ಪಟ್ಟ 'ಕೈ' ತಪ್ಪುವ ಸುಳಿವು?
ಮೂಲ ಕಾಂಗ್ರೆಸ್ ನಾಯಕರಿಂದ ದೂರವಾಣಿ ಕರೆ
ಕಾಂಗ್ರೆಸ್ ನ ಹಿರಿಯ ನಾಯಕರು ಗುರುವಾರ ತಡರಾತ್ರಿ ಬೆಂಗಳೂರಿನಲ್ಲಿ ಸಭೆ ನಡೆಸಿದ್ದರು. ಈ ವೇಳೆ ಸಿಎಲ್ ಪಿ ಹಾಗೂ ವಿರೋಧ ಪಕ್ಷ ನಾಯಕರ ಆಯ್ಕೆ ಬಗ್ಗೆ ಚರ್ಚೆ ನಡೆಸಲಾಗಿತ್ತು. ನಂತರ ಮೂಲ ಕಾಂಗ್ರೆಸ್ಸಿಗರು ಹೈಕಮಾಂಡ್ ನಾಯಕರಿಗೆ ದೂರವಾಣಿ ಕರೆ ಮಾಡಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಜೊತೆ ಈ ಸಂಬಂಧ ಹಿರಿಯ ನಾಯಕರು ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಮೂಲ ಕಾಂಗ್ರೆಸ್ಸಿಗರನ್ನೇ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಪರಿಗಣಿಸಿ
ಇನ್ನು, ಕೆಪಿಸಿಸಿ ಅಧ್ಯಕ್ಷರ ಜೊತೆ ನಾಲ್ವರು ಕಾರ್ಯಾಧ್ಯಕ್ಷರನ್ನು ನೇಮಿಸುವಂತೆ ಒತ್ತಾಯ ಕೇಳಿ ಬಂದಿದೆ. ಈ ವಿಷಯದಲ್ಲೂ ಕೂಡಾ ಮೂಲ ಕಾಂಗ್ರೆಸ್ಸಿಗರಿಗೆ ಆದ್ಯತೆ ನೀಡಬೇಕು ಎಂದು ಮಾಜಿ ಸಚಿವ ಹೆಚ್.ಕೆ.ಪಾಟೀಲ್, ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ, ಬಿ.ಕೆ.ಹರಿಪ್ರಸಾದ್ ಹೈಕಮಾಂಡ್ ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದು ಬಂದಿದೆ.